ತುಳುವಿಗೆ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ; ಸರ್ಕಾರ ಗಂಭೀರ ಚಿಂತನೆ: ಸಚಿವ ಶಿವರಾಜ್ ಎಸ್. ತಂಗಡಗಿ
'ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪುವೆ’

ಬೆಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದ್ದಾರೆ.
ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ, ಸಂಸ್ಕೃತಿ ಹಾಗೂ ತುಳು ಶಾಸನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು 2023ರ ಫೆಬ್ರುವರಿ 14ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದರ ಮುಂದುವರಿದ ಹಂತವಾಗಿ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಗಳನ್ನು ಅಧ್ಯಯನ ಮಾಡಲು ಸರ್ಕಾರವು 2025ರ ಜುಲೈ 30ರಂದು ಅಧ್ಯಯನ ತಂಡ ರಚಿಸಿತ್ತು.
ತಂಡವು 2026ರ ಜನವರಿ 19 ಮತ್ತು 20ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಕಾನೂನು ಚೌಕಟ್ಟು ಹಾಗೂ ಅನುಷ್ಠಾನದ ಮಾದರಿಗಳನ್ನು ಪರಿಶೀಲಿಸಿತ್ತು. ಮಾರ್ಚ್ 2026ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಂಗಡಗಿ ಹೇಳಿದ್ದಾರೆ.
‘ತುಳು ನಮ್ಮ ಕರಾವಳಿಯ ಭಾಷೆ. ಅದು ಕರ್ನಾಟಕದ ಶ್ರೀಮಂತ ಭಾಷಾ–ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ.
‘ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪುವೆ’ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸ್ವಾಗತ
ತಂಗಡಗಿ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕರು ಸರ್ಕಾರದ ಕ್ರಮವನ್ನು ಸ್ವಾಗತಿಸಿ, ತುಳುಗೆ ಶೀಘ್ರದಲ್ಲೇ ಅಧಿಕೃತ ಮಾನ್ಯತೆ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಗುರುರಾಜ್ ರೈ ಪಿ.ವಿ. ಅವರು ‘ಜೈ ತುಳುನಾಡ್’ ಎಂದು ಪ್ರತಿಕ್ರಿಯಿಸಿದ್ದಾರೆ. ಅವಿನಾಶ್ ದೇವಾಡಿಗ ಅವರು ‘ಸೊಲ್ಮೆಲು #ತುಳು ಅಧಿಕೃತ ಕೆಎ_ಕೆಎಲ್’ ಎಂದಿದ್ದಾರೆ.
‘Hello Mangalore’ ಖಾತೆಯಿಂದ ‘ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಕೇಳುವ ಭರವಸೆ ಇದೆ’ ಎಂದು ಪ್ರತಿಕ್ರಿಯಿಸಲಾಗಿದೆ.
‘Namma Karnataka Weather’ ಖಾತೆಯು, ‘ಈ ಸುದ್ದಿಯನ್ನು ಕೇಳಿ ಸಂತೋಷವಾಯಿತು. ಈ ಉಪಕ್ರಮವನ್ನು ಶ್ಲಾಘಿಸುತ್ತೇನೆ ಮತ್ತು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಕೇಳುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಹೇಳಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಆಡಳಿತಾರೂಢ ಪಕ್ಷಕ್ಕೆ ಇದು ನಿರ್ಣಾಯಕ ಬದಲಾವಣೆ ತರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.
‘TaulavaKiran’ ಅವರು, ‘ನಿಮ್ಮ ಮಾತುಗಳು ನಮಗೆ ಹೊಸ ಭರವಸೆಯನ್ನು ನೀಡಿವೆ. ನಾವು ಕಾದು ನೋಡುತ್ತೇವೆ’ ಎಂದು ಹೇಳಿದ್ದಾರೆ.
ಡಾ. ಅರುಣ್ ಮಾವಜಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳಿಗೆ ಧನ್ಯವಾದ ಸಲ್ಲಿಸಿ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ಸಿಗುವುದನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕನ್ನಡರಾಯ ಎಂಬ ಖಾತೆಯಲ್ಲಿ, ‘ಈ ಕೆಲಸವೊಂದನ್ನು ಮಾಡಿ ಇತಿಹಾಸದ ಪುಟದಲ್ಲಿ ನಿಮ್ಮ ಹೆಸರನ್ನು ಭದ್ರಪಡಿಸಿಕೊಳ್ಳಿ ತಂಗಡಗಿ ಅವರೇ... ಒಳ್ಳೆಯದಾಗಲಿ, ಮುಂದುವರಿಯಿರಿ’ ಎಂದು ಪ್ರತಿಕ್ರಿಯೆ ಬಂದಿದೆ.
TULU CHAVADI ಖಾತೆಯಿಂದ ‘ಧನ್ಯವಾದಗಳು (Solmelu)’ ಎಂದು ಪ್ರತಿಕ್ರಿಯಿಸಲಾಗಿದ್ದು, #TuluOfficialinKA_KL ಹ್ಯಾಶ್ಟ್ಯಾಗ್ ಬಳಸಲಾಗಿದೆ. ಶೆಟ್ಟಿ, ಪ್ರಜ್ವಲ್ ಭಂಡಾರಿ ಮತ್ತು ಸುಕೇಶ್ ಸೇರಿದಂತೆ ಹಲವರು ‘ಧನ್ಯವಾದಗಳು’, ‘ಸಂತೋಷ’, ‘ಸೊಲ್ಮೇಲು ಸರ್’ ಎಂಬ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಕೆಲವರು ಸರ್ಕಾರದ ಭರವಸೆ ಈಡೇರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಪ್ರತಿ ಬಾರಿಯೂ ಒಂದು ಭರವಸೆ ಇರುತ್ತದೆ ಆದರೆ ಈಡೇರುವುದಿಲ್ಲ. ಈ ಬಾರಿ ತುಳುನಾಡಿನ ಜನರು ಇತಿಹಾಸವನ್ನು ಸೃಷ್ಟಿಸುತ್ತಾರೆ ಮತ್ತು ಭವಿಷ್ಯದ ಪೀಳಿಗೆ ಅದನ್ನು ವರ್ಷಗಳವರೆಗೆ ನೆನಪಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತಾರೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರದ ಪರಿಣಾಮಗಳ ಬಗ್ಗೆ ಅದು ಜಾರಿಗೆ ಬರುವ ಮುನ್ನವೇ ವಿಮರ್ಶಿಸುವುದು ಸೂಕ್ತ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಇತರ ಅಲ್ಪಸಂಖ್ಯಾತ ವಲಸೆ ಭಾಷಿಕರು ತಮ್ಮ ಭಾಷೆಗಳಿಗೂ ಅಧಿಕೃತ ಸ್ಥಾನಮಾನಕ್ಕಾಗಿ ಬೇಡಿಕೆ ಸಲ್ಲಿಸುವ ಸಾಧ್ಯತೆ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.
‘ಕನಿಷ್ಠ ಇಂದಿನಿಂದಲಾದರೂ ದಯವಿಟ್ಟು ಒಡಕು ಮೂಡಿಸುವ ಮನಸ್ಥಿತಿಯನ್ನು ಹೊಂದಬೇಡಿ’ ಎಂಬ ಪ್ರತಿಕ್ರಿಯೆಯೂ ಬಂದಿದೆ.
ಕೆಲವರು ಮರಾಠಿ ಮತ್ತು ಕೊಂಕಣಿ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ‘ಮರಾಠಿ ಮತ್ತು ಕೊಂಕಣಿಗೆ ಕೊಡಬೇಕು ಅಲ್ವಾ ಹಾಗಾದ್ರೆ’ ಎಂಬ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ.
— Shivaraj S Tangadagi (@sstangadagi) September 15, 2026
ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ…






