‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ’ | ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಅಂಗೀಕಾರ

ಬೆಂಗಳೂರು : ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ)ದ ಬದಲಾಗಿ ಮತಪತ್ರ(ಬ್ಯಾಲೆಟ್ ಪೇಪರ್) ಬಳಕೆಗೆ ಅವಕಾಶ ಕಲ್ಪಿಸುವ 2026ನೆ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕವನ್ನು ಪ್ರತಿಪಕ್ಷಗಳ ತೀವ್ರ ವಿರೋಧ, ಸಭಾತ್ಯಾಗದ ನಡುವೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ವಿಧೇಯಕದ ಪರ್ಯಾಲೋಚನ ಪ್ರಸ್ತಾವವನ್ನು ಮಂಡಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಭಾರತ ಸಂವಿಧಾಣದ 326ನೆ ಅನುಚ್ಛೇಧದಡಿ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಪ್ರತಿ ಬಿಂಬಿಸುವ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆಯನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳಲು, ಮತದಾರರ ಮತಪತ್ರದ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸಬೇಕಿದೆ ಎಂದು ಹೇಳಿದರು.
ಕುಲದೀಪ್ ನಾಯರ್ ವಿರುದ್ಧ ಒಕ್ಕೂಟ ಸರಕಾರ 2006ರ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪನ್ನು ಅನುಷ್ಠಾನಗೊಳಿಸಲು ಮತ್ತು ಗೌಪ್ಯತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಲು ಚುನಾವಣಾ ಕಾರ್ಯ ವ್ಯವಸ್ಥೆಯನ್ನು ಬಲಪಡಿಸಲು ಈ ತಿದ್ದುಪಡಿ ವಿಧೇಯಕವನ್ನು ತರಲಾಗಿದೆ ಎಂದು ಅವರು ವಿವರಿಸಿದರು.
ಇವಿಎಂ ಮೇಲೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರ ವಿಧಾನಭೆ ಚುನಾವಣೆಯಲ್ಲಿ ಚುನಾವಣಾ ಆಯೋಗದ ವರದಿಯಂತೆ ಸಂಜೆ 5 ಗಂಟೆಗೆ ಶೇ.58.22ರಷ್ಟು ಮತದಾನ ಆಗಿತ್ತು. ರಾತ್ರಿ 11.30 ಗಂಟೆಗೆ ಶೇ.65.02ರಷ್ಟು ಆಗಿದೆ. ಅದೇ ಅಂತಿಮ ವರದಿ ಬಂದಾಗ ಈ ಪ್ರಮಾಣವು ಶೇ.66.05ರಷ್ಟಾಗಿದೆ. ಅಂದರೆ ಐದು ಗಂಟೆಯಲ್ಲಿ 10 ಲಕ್ಷ ಹೆಚ್ಚುವರಿ ಮತದಾನವಾಗಿದೆ. ಅಲ್ಲದೆ, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಇದೇ ರೀತಿ ಆಗಿದೆ. ಹಲವಾರು ಸಂಘ ಸಂಸ್ಥೆಗಳು ಬಗ್ಗೆ ಪ್ರಶ್ನೆ ಮಾಡಿದರೂ, ಚುನಾವಣಾ ಆಯೋಗ ಅದಕ್ಕೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪತ್ರದ ಮೂಲಕ ಕೇವಲ ನಾವು ಮಾತ್ರ ಮಾಡುತ್ತಿಲ್ಲ. ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಜಾರ್ಖಂಡ್, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಳಕೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಇದೊಂದು ತುಘಲಕ್ ದರ್ಬಾರ್ ಆಗಿದೆ. ಇವಿಎಂ ಅನ್ನು ಪರಿಚಯಿಸಿದವರೂ ಕಾಂಗ್ರೆಸ್ನವರು, ಈಗ ಅವರೇ ಇದನ್ನು ಹಿಂಪಡೆಯುತ್ತಿದ್ದಾರೆ. ರಾಜೀವ್ ಗಾಂಧಿ ಇವಿಎಂ ಪರಿಚಯಿಸಲು ನೂರಾರು ಅಧಿಕಾರಿಗಳು, ತಜ್ಞರ ಜೊತೆ ಸಮಾಲೋಚನೆ ಮಾಡಿವೆ ಕಾಯ್ದೆ ತಂದಿರುತ್ತಾರೆ. ಇವಿಎಂ ಪರಿಚಯಿಸಿದ ಬಳಿಕ ಬಹಳಷ್ಟು ಚುನಾವಣೆಗಳು ನಡೆದಿವೆ. ರಾಜ್ಯದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದಾಗ, ತೆಲಂಗಾಣದಲ್ಲಿ ಗೆಲುವು ಸಾಧಿಸಿದಾಗ ಇವಿಎಂ ಸರಿಯಿತ್ತು. ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಳ್ಳುತ್ತಿದ್ದಂತೆ ಇವಿಎಂ ಸರಿಯಿಲ್ಲ ಎಂಬ ಇವರ ವಾದ ಹಾಸ್ಯಾಸ್ಪದ ಎಂದು ಹೇಳಿದರು.
ಚುನಾವಣೆಯಲ್ಲಿ ನೀವು ಸೋಲಲು ಇವಿಎಂ ಅಲ್ಲ, ಬೇರೆ ಏನೋ ಕಾರಣವಿದೆ. ಮೊದಲು ಅದನ್ನು ಹುಡುಕಿ ಸರಿಪಡಿಸಿಕೊಳ್ಳಿ. ಬೇರೆ ರಾಜ್ಯದವರು ಮಾಡುತ್ತಾರೆ ಎಂದು ನೀವು ಯಾಕೆ ಮಾಡಲು ಹೋಗುತ್ತಿದ್ದೀರಿ. ನಿಮ್ಮ ಸ್ವಂತಿಕೆ ಇರಲಿ. ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಮತಗಟ್ಟೆಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು ಎಂಬುದು ಗೊತ್ತಿದೆ. ಮತ್ತೆ ನಮ್ಮನ್ನು ಶಿಲಾಯುಗಕ್ಕೆ ಯಾಕೆ ಕೊಂಡೊಯ್ಯಲು ಹೋಗುತ್ತಿದ್ದೀರಿ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಬಿಜೆಪಿ ಸದಸ್ಯ ವಿ.ಸುನಿಲ್ ಕುಮಾರ್ ಮಾತನಾಡಿ, ಈ ವಿಧೇಯಕದಲ್ಲಿ ಜನಸಾಮಾನ್ಯರಿಗೆ ಯಾವುದೇ ಲಾಭ ಇಲ್ಲ. ಇದರಿಂದ ಕಾಂಗ್ರೆಸ್ಗೆ ಮಾತ್ರ ಲಾಭ. ಇದರ ಹಿಂದೆ ದೊಡ್ಡ ಹುನ್ನಾರ ಇದ್ದಂತಿದೆ. ಸರಕಾರ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಮಾಡಲು ಮುಂದಾಗಿರುವಂತೆ ಕಂಡು ಬರುತ್ತಿದೆ. ನೀವು ಒಮ್ಮೆ ಇವಿಎಂ ಸರಿ ಇಲ್ಲ ಅಂತೀರಿ, ಇನ್ನೊಮ್ಮೆ ಮತದಾರರ ಪಟ್ಟಿ ಸರಿ ಇಲ್ಲ ಅಂತೀರ, ಕೊನೆಗೆ ಮತದಾರರೇ ಸರಿ ಇಲ್ಲ ಅಂತೀರ. ನಿಮ್ಮ ಸೋಲಿಗೆ ಕಾಂಗ್ರೆಸ್ ಪಕ್ಷದ ನಿಲುವು, ನೀತಿ ಕಾರಣವೆ ಹೊರತು, ಇವಿಎಂ ಅಲ್ಲ ಎಂದು ಹೇಳಿದರು.
ಬಿಜೆಪಿ ಸದಸ್ಯರಾದ ಎಸ್.ಸುರೇಶ್ ಕುಮಾರ್, ಚನ್ನಬಸಪ್ಪ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕಾಂಗ್ರೆಸ್ ಸದಸ್ಯ ರಿಝ್ವಾನ್ ಅರ್ಶದ್ ವಿಧೇಯಕದ ಕುರಿತು ಮಾತನಾಡಿದರು. ವಿಪಕ್ಷಗಳ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಅಶೋಕ್, ಇವಿಎಂ ಸರಿಯಿಲ್ಲ ಅನ್ನೋದಾದರೆ, ಆಡಳಿತ ಪಕ್ಷದ ಸಾಲಿನಲ್ಲಿ ಕೂತಿರುವ 136 ಜನರಿಗೂ ಇಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ಏಕೆಂದರೆ ಇವರೆಲ್ಲ ಇವಿಎಂ ಮೂಲಕ ನಡೆದ ಚುನಾವಣೆಯಲ್ಲೆ ಗೆದ್ದು ಬಂದಿರುವವರು. ಇದೊಂದು ನಾಚಿಕೆಗೆಟ್ಟ ಸರಕಾರ ಎಂದು ಟೀಕಿಸಿದರು. ಈವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಅಶೋಕ್ ವಿಧೇಯಕದ ಪ್ರತಿಯನ್ನು ಹರಿದು ಹಾಕಿ ಸಭಾತ್ಯಾಗ ಮಾಡಿದರು.






