ವಿಧಾನಸಭೆಯಲ್ಲಿ ಅನುಸೂಚಿತ ಜಾತಿ-ಪಂಗಡಗಳ ಕಲ್ಯಾಣ ಸಮಿತಿ ವರದಿ ಮಂಡನೆ

ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2024-25ನೆ ಸಾಲಿನ ಐದನೆ ವರದಿ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಇದರಲ್ಲಿ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಡಿ ಬರುವ ಅಭಿವೃದ್ಧಿ ನಿಗಮಗಳ ಅನುದಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನಸಂಖ್ಯೆಗೆ ಪೂರಕವಾಗಿ ಹಂಚಿಕೆಯಾಗಿರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.
ಬುಧವಾರ ವಿಧಾನಸಭೆಯ ಕಲಾಪದಲ್ಲಿ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಈ ವರದಿಯನ್ನೊಪಿಸಿದರು.
ನ್ಯಾಯ ಬೆಲೆ ಅಂಗಡಿಗಳಲ್ಲಿ ಮೀಸಲಾತಿ ಹೆಚ್ಚಿಸಿ ಎಸ್ಸಿ-ಎಸ್ಟಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಪ್ರಸ್ತುತ ಈ ಸಮುದಾಯದ ಜನಸಂಖ್ಯೆಯಲ್ಲಿರುವ ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಮಟ್ಟದಲ್ಲಿ ಸಮರ್ಪಕವಾಗಿರುವುದಿಲ್ಲ. ಹಲವು ದಶಕಗಳ ಹಿಂದಿನ ಯೋಜನೆಗಳೇ ಅಭಿವೃದ್ಧಿ ನಿಗಮಗಳಲ್ಲಿ ಮುಂದುವರೆದಿರುವುದು ಗೋಚರಿಸಿರುತ್ತದೆ. ಇವುಗಳನ್ನು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ಮಾರ್ಪಾಟು ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಡಗಳ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಬರುವ ಹಾಸ್ಟೆಲ್ಗಳ ನಿರ್ವಹಣೆಯಲ್ಲಿ ವಾರ್ಡನ್ಗಳ ಕೊರತೆ ತೀವ್ರವಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಯೊಂದಿಗೆ ಶೈಕ್ಷಣಿಕ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆಗೆ ಅನಾನುಕೂಲವಾಗುತ್ತದೆ ಎಂಬುದನ್ನು ಸಮಿತಿಯು ಗಮನಿಸಿ ತುರ್ತು ಮಾರ್ಪಾಡಿಗೆ ಸರಕಾರ ತ್ವರಿತ ಕ್ರಮವಹಿಸಬೇಕು ಎಂದು ಸಮಿತಿಯು ಸೂಚಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಿಬ್ಬಂದಿ ನೇಮಕಾತಿ, ಪದೋನ್ನತಿ, ಬ್ಯಾಕ್ ಲಾಗ್ ಹಾಗೂ ರೋಸ್ಟರ್ಗೆ ಸಂಬಂಧಿಸಿದ ವಿಷಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶಗಳು, ಮಾರ್ಗಸೂಚಿಗಳು, ಸುತ್ತೋಲೆಗಳು ಪರಿಣಾಮಕಾರಿಯಾಗಿರುವುದಿಲ್ಲ. ಈ ನಿರ್ದೇಶನಗಳ ಅನುಷ್ಠಾನದ ಲೋಪಕ್ಕೆ ಯಾವುದೇ ರೀತಿಯ ಶಿಸ್ತಿನ ಕ್ರಮ ಇಲ್ಲದಿರುವುದು ಚರ್ಚೆ ವಿಷಯದಲ್ಲಿ ಕಂಡುಬಂದ ಅಂಶವಾಗಿದೆ ಎಂದು ಉಲ್ಲೇಖಿಸಿದೆ.
ಅದೇ ರೀತಿ, ಸರಕಾರದ ವಿವಿಧ ಇಲಾಖೆಗಳ ಚರ್ಚೆ ಸಂದರ್ಭದಲ್ಲಿ ಸೇವಾ ನೇಮಕಾತಿ ಮತ್ತು ಪದೋನ್ನತಿ ವಿಚಾರದಲ್ಲಿ ಸಂವಿಧಾನಿಕವಾಗಿ ಸರಕಾರದ ಸುತ್ತೋಲೆಯಡಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಹಲವಾರು ಗೊಂದಲಗಳಿದ್ದರೂ ಎಲ್ಲ ಇಲಾಖೆಗಳು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರುಗಳ ಸಿಬ್ಬಂದಿ ನೇಮಕಾತಿ ಮತ್ತು ಪದೋನ್ನತಿ ವಿಚಾರವಾಗಿ ಸರಕಾರ ವಾರ್ಷಿಕವಾಗಿ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳಲು ಹೊಸ ಮೇಲುಸ್ತುವಾರಿ ಸಮಿತಿಯನ್ನು ರಚಿಸಲು ಶಿಫಾರಸ್ಸು ಮಾಡಿದೆ.
ಎಸ್ಸಿ-ಎಸ್ಟಿ ಹಾಸ್ಟೆಲ್ಗಳು ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಆಹಾರ ಸಾಮಗ್ರಿಗಳ ಟೆಂಡರ್ ಪ್ರಕ್ರಿಯೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ಆರಂಭಿಸಿ ಆಹಾರ ಸರಬರಾಜು ಸುಗಮವಾಗಿ ನಡೆಯಲು ಕ್ರಮವಹಿಸಬೇಕು. ಹಲವಾರು ಕಡೆ ತಿಂಗಳ ಕೊನೆಯಲ್ಲಿ ಆಹಾರ ಸರಬರಾಜು ಆಗುತ್ತಿರುವುದನ್ನು ಸಮಿತಿ ಗಮನಿಸಿದೆ. ವಸತಿ ಶಾಲೆ ಮತ್ತು ಹಾಸ್ಟೆಲ್ಗಳು ನಡೆಸಲ್ಪಡುವ ಸಂಬಂಧ ಅಕ್ರಮಗಳಿಗಾಗಿ ಅವಕಾಶ ಕಲ್ಪಿಸಿದಂತಾಗುತ್ತದೆಂದು ಸಮಿತಿಯು ಅಭಿಪ್ರಾಯಿಸಿದೆ.







