ಶಾಲಾ ವಿದ್ಯಾರ್ಥಿಗಳ ಪ್ರವಾಸಕ್ಕೆ ಮಾರ್ಗಸೂಚಿ ಹೊರಡಿಸಿದ ಎಡಿಜಿಪಿ ಆರ್.ಹಿತೇಂದ್ರ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಹಿನ್ನೆಲೆ ಪ್ರಯಾಣ ಮಾಡುವ ಬಸ್ ಸೇರಿದಂತೆ ಇನ್ನಿತರ ವಾಹನಗಳ ಸುರಕ್ಷತೆ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸುವಂತೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಆರ್.ಹಿತೇಂದ್ರ ಸುತ್ತೋಲೆ ಹೊರಡಿಸಿದ್ದಾರೆ.
ಈ ವರ್ಷ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ಸ್ಥಳಗಳಿಗೆ ಶಾಲಾ-ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಕೈಗೊಳ್ಳುತ್ತಿದೆ. ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ಗಳಲ್ಲಿ ಹೆಚ್ಚಾಗಿ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಪ್ರವಾಸಕ್ಕೆ ತೆರಳುವ ಮುನ್ನ ಬಸ್ನ ಸ್ಥಿತಿಗತಿಯ ಬಗ್ಗೆ ಆರ್ಟಿಒಯಿಂದ ಖಾತ್ರಿಪಡಿಸಿಕೊಂಡಿರಬೇಕು ಎಂದು ತಿಳಿಸಿದ್ದಾರೆ.
ಚಾಲಕರು ಯಾವುದೇ ರೀತಿಯ ಮಾದಕ ದ್ರವ್ಯ ಹಾಗೂ ಮದ್ಯಪಾನ ಸೇವನೆ ವ್ಯಸನಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವಾಸದ ಅವಧಿಯಲ್ಲಿ ರಾತ್ರಿ ವೇಳೆ ತಂಗುವ ಅವಶ್ಯಕತೆ ಕಂಡು ಬಂದರೆ ಚಾಲಕರ ಮೇಲೆ ಶಿಕ್ಷಕರು ನಿಗಾವಹಿಸಬೇಕೆಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.
ಪ್ರವಾಸದ ಸಂದರ್ಭದಲ್ಲಿ ಬೇರೆ-ಬೇರೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಾಗ ಆಯಾ ಜಿಲ್ಲೆಯ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಸಂಬಂಧಪಟ್ಟ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡಿರಬೇಕು. ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಶಾಲಾ-ಕಾಲೇಜುಗಳ ಮಂಡಳಿಗಳ ಮುಖ್ಯಸ್ಥರು ಶೈಕ್ಷಣಿಕ ಪ್ರವಾಸ ಕೈಗೊಳ್ಳುವಾಗ ಈ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್.ಹಿತೇಂದ್ರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ವಿದ್ಯಾರ್ಥಿಗಳ ಪ್ರವಾಸ ಕೈಗೊಳ್ಳುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಶಾಲಾ ಶಿಕ್ಷಣ ಇಲಾಖೆ ಮತ್ತು ಸಂಬಂಧಿತ ಪ್ರಾಧಿಕಾರಗಳಿಂದ ಸುತ್ತೋಲೆಗಳು ಆಗಾಗ್ಗೆ ಹೊರಡಿಸಲ್ಪಡುತ್ತವೆ. ಈ ಸುತ್ತೋಲೆಗಳಲ್ಲಿ ಪ್ರವಾಸದ ಉದ್ದೇಶ, ಸುರಕ್ಷತೆ, ಅನುಮತಿ, ವೆಚ್ಚದ ವಿವರಗಳು, ಪೋಷಕರ ಸಮ್ಮತಿ, ತುರ್ತು ಸಂಪರ್ಕ ಮತ್ತು ಮಾರ್ಗದರ್ಶನ ಮುಖ್ಯವಾಗಿದ್ದು, ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರ್.ಹಿತೇಂದ್ರ ಸೂಚಿಸಿದ್ದಾರೆ.
ಪ್ರವಾಸ ಹೊರಡುವ ಮುನ್ನ: ಪ್ರವಾಸದ ಸ್ಥಳ, ದಿನಾಂಕ, ಅವಧಿ, ಶೈಕ್ಷಣಿಕ ಉದ್ದೇಶವನ್ನು ಮೊದಲೇ ನಿರ್ಧರಿಸಿರಬೇಕು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿಗಳು ಮತ್ತು ಅಗತ್ಯವಿದ್ದರೆ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಅವಶ್ಯಕ. ಬಸ್ಗಳು ಮತ್ತು ಸಾರಿಗೆ ವ್ಯವಸ್ಥೆ ವಿಶ್ವಾಸಾರ್ಹ ಸಂಸ್ಥೆಯಿಂದ ಇರಬೇಕು. ಆ ಬಗ್ಗೆ ಸೂಕ್ತ ಪರಿಶೀಲನೆ ಮಾಡಿಯೇ ಮುಂದುವರೆಯಬೇಕು. ಪ್ರತಿ ಬಸ್ನಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ಮತ್ತು ಒಬ್ಬ ಗಾರ್ಡ್ ಇರುವಂತೆ ನೋಡಿಕೊಳ್ಳಬೇಕು ಎಂದು ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.
ಬಸ್ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ವೈದ್ಯಕೀಯ ಸಂಪರ್ಕದ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿ 10-15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಹೊಣೆಗಾರರನ್ನಾಗಿ ನೇಮಿಸಬೇಕು. ವಿದ್ಯಾರ್ಥಿಗಳ ಪೂರ್ಣ ಪಟ್ಟಿ, ಪೋಷಕರ ಮೊಬೈಲ್ ನಂಬರ್ ಸಂಗ್ರಹಿಸಬೇಕು. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಎಡಿಜಿಪಿ ಆರ್.ಹಿತೇಂದ್ರ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.







