ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ : ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪ

ರಾಮನಗರ : ʼಮಾಜಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆʼ ಎಂದು ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಆರೋಪಿಸಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼರಾಜಣ್ಣ ಅವರು ಮಂತ್ರಿಯಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎಂದು ಜಗತ್ತಿಗೇ ಗೊತ್ತಿದೆ. ʼಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತುʼ ಎನ್ನುವ ಹಾಗೇ ಅವರು ಮಾತಾಡುತ್ತಿದ್ದರು. ಅವರ ಹೇಳಿಕೆಯಿಂದಲೇ ಅವರು ಕೆಟ್ಟಿರೋದು, ಅದರ ಹಿಂದೆ ಯಾರ ಷಡ್ಯಂತ್ರವೂ ಇಲ್ಲʼ ಎಂದು ತಿಳಿಸಿದರು.
ರಾಜಣ್ಣ ಅವರು ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ವಜಾ ಆಗಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲಾ ಗೊತ್ತಾಗುತ್ತದೆ. ರಾಜಣ್ಣ ಈ ಹಿಂದೆ ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದರು. ಈಗ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಬೇಕು. ನಮ್ಮ ಸರಕಾರ ಇಲ್ಲ ಅಂದಿದ್ದರೆ ಇಷ್ಟೊತ್ತಿಗೆ ಅವರು ಬೇರೆ ಪಕ್ಷಕ್ಕೆ ಹೋಗುತ್ತಿದ್ದರು. ಈಗಾಗಲೇ ಒಂದು ಕಾಲು ಅವರು ಹೊರಗಡೆ ಇಟ್ಟಿದ್ದಾರೆ ಎಂದರು.







