ಕೆಆರ್ಎಸ್ನಲ್ಲಿ ಟಿಪ್ಪು ಶಾಸನ ಅಳವಡಿಸಿದ್ದು ಅರಸರೇ ಹೊರತು ಕಾಂಗ್ರೆಸ್ ಸರಕಾರವಲ್ಲ : ಎಚ್.ಸಿ.ಮಹದೇವಪ್ಪ

ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ‘ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನ್ ಅವರಿಗಿದ್ದ ಆಲೋಚನೆಯನ್ನು ಶಾಸನ ರೂಪದಲ್ಲಿ ಕೆಆರ್ಎಸ್ನಲ್ಲೇ ಹಾಕಲಾಗಿದೆ. ಆ ಫಲಕವನ್ನು ಹಾಕಿದ್ದು ಅಂದಿನ ಅರಸರ ಕಾಲದಲ್ಲೇ ಹೊರತು ಕಾಂಗ್ರೆಸ್ ಸರಕಾರ ಅಲ್ಲ ಎಂಬ ಸಣ್ಣ ಜ್ಞಾನ ಇಲ್ಲದೇ ಬಿಜೆಪಿಗರು ವರ್ತಿಸುತ್ತಿರುವುದು ಹಾಸ್ಯಾಸ್ಪದ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಸುಳ್ಳಿನ ಪಕ್ಷವೆಂದೇ ಹೆಸರಾಗಿರುವ ಬಿಜೆಪಿಗರು ಮತ್ತು ಇದೀಗ ಬಿಜೆಪಿ ಪಕ್ಷದ ಒಳಗೆ ವಿಲೀನಗೊಳ್ಳುವ ಎಲ್ಲ ಲಕ್ಷಣಗಳೊಂದಿಗೆ ಮುನ್ನಡೆಯುತ್ತಿರುವ ಜೆಡಿಎಸ್ ಪಕ್ಷದವರು ಇತಿಹಾಸದ ವಿವರಣೆಯ ವಿಷಯದಲ್ಲಿ ಅತ್ಯಂತ ಅವಸರದಿಂದ ಪ್ರತಿಕ್ರಿಯೆ ನೀಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಇವರ ಪ್ರಜ್ಞೆಗೆ ಏನಾಗಿದೆ ಎಂದು ನನಗೆ ಗೊಂದಲವಾಗುತ್ತಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಜನಪರ ಅಭಿವೃದ್ಧಿಗಾಗಿ ಅವಿರತವಾಗಿ ಕೆಲಸ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಲೋಚನೆಗಳಿಗೂ, ಸದಾ ಮೀಸಲಾತಿ ವಿರೋಧಿ ಧೋರಣೆ ಅನುಸರಿಸುತ್ತಾ, ಬಾಬಾ ಸಾಹೇಬರ ಆಶಯಗಳನ್ನು ಗಾಳಿಗೆ ತೂರಿರುವ ಬಿಜೆಪಿಯವರಿಗೂ ಯಾವ ಕಾಲಕ್ಕೂ ಹೋಲಿಕೆ ಇಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ.
ಹೀಗಿರುವಾಗ ಅಂತಹ ಬಿಜೆಪಿ ಪಕ್ಷದ ಭಾಗವಾಗಿಯೆ ಇದ್ದುಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಮಾತನಾಡುತ್ತಿರುವ ಮೈಸೂರಿನ ಹಾಲಿ ಮತ್ತು ಮಾಜಿ ಸಂಸದರು, ಮೊದಲು ಇತಿಹಾಸ ಓದುವುದನ್ನು ಕಲಿಯಲಿ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಆಲೋಚನೆ ಹೊಂದಿದ್ದರು ಮತ್ತು ಕೆಲಸವನ್ನು ಪೂರ್ಣಗೊಳಿಸಿದರು ಎಂಬ ಮಾತಿನ ನಡುವೆ ಇರುವ ಸುಲಭವಾದ ವ್ಯತ್ಯಾಸವನ್ನು ಬಿಜೆಪಿ ಮತ್ತು ಜೆಡಿಎಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕಿವಿ ಮಾತು ಹೇಳಿದ್ದಾರೆ.
ಈ ವಿಷಯದಲ್ಲಿ ಇವರು ಅನಗತ್ಯ ರಾಜಕೀಯ ಮಾಡುತ್ತಿರುವುದು ಮೇಲ್ನೋಟಕ್ಕೇ ಕಾಣ ಬರುತ್ತಿರುವುದರಿಂದ ಘನತೆಯಿಲ್ಲದ ರಾಜಕಾರಣ ಮಾಡುವುದಕ್ಕಾಗಿಯೇ ಇವರು ಹೀಗೆಲ್ಲ ಮಾಡುತ್ತಿದ್ದಾರೆ ಎಂಬುದು ಅತ್ಯಂತ ಸತ್ಯ ಎಂದು ಮಹದೇವಪ್ಪ ಕಿಡಿಗಾರಿದ್ದಾರೆ.
ಜನಪರವಾಗಿ ಹಲವಾರು ಕೆಲಸ ಮಾಡಿದ ರಾಜರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಗ್ರಗಣ್ಯರು. ಟಿಪ್ಪು ಸುಲ್ತಾನ್ ಒಳಗೊಂಡಂತೆ ಜನಪರವಾಗಿದ್ದ ಯಾವುದೇ ಜನರ ವಿಷಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅತ್ಯಂತ ಪ್ರೀತಿ ಮತ್ತು ಗೌರವದ ಭಾವನೆಯನ್ನು ಹೊಂದಿದ್ದರು. ಈ ಕಾರಣಕ್ಕಾಗಿಯೇ ಒಡೆಯರ ಕಾಲದಿಂದಲೂ ಆ ಫಲಕವು ಅಲ್ಲೇ ಇದೆ ಎಂದು ಅವರು ತಿಳಿಸಿದ್ದಾರೆ.
ಜಾತಿ ಧರ್ಮ ನೋಡದೆ ಎಲ್ಲರ ಜನಪರತೆಯನ್ನು ಗೌರವಿಸುತ್ತಿದ್ದ ಮತ್ತು ಬದುಕಿನಲ್ಲೂ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ, ರಾಜಕೀಯ ಮಾಡಲೆಂದೆ ವಿಷಯವನ್ನು ತಿರುಚಿ ಮಾತನಾಡುತ್ತಿರುವ ಬಿಜೆಪಿ ಸಂಸದ ಯಧುವೀರ್ ಒಡೆಯರ್ ಅವರಿಗೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದಕ್ಕೆ ಅವರ ನಡವಳಿಕೆಯೆ ಉದಾಹರಣೆ ಎಂದು ಮಹದೇವಪ್ಪ ಕಿಡಿಗಾರಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿಯ ಉದ್ದೇಶವನ್ನು ಮತ್ತು ಅವರ ಸಾಧನೆಗಳನ್ನು ಜಾತಿ ಧರ್ಮದ ಮಾನದಂಡದಲ್ಲಿ ಅಳೆಯುವ ಕೆಲಸಕ್ಕೆ ಪ್ರಜ್ಞಾವಂತರೆ ಇಳಿದಿರುವುದು ಮತ್ತು ಮಾತಿನ ಅರ್ಥವನ್ನು ಅರಿಯದೆ ರೋಚಕ ಸುದ್ದಿ ಮಾಡುವ ಅವಸರದಲ್ಲಿ ವಿಷಯ ತಿರುಚಿ ಮಾತನಾಡುವ ಮಾಧ್ಯಮಗಳೂ ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.







