ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಎಫ್ಐಆರ್ ರದ್ದುಕೋರಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು : ಝೈದ್ ಖಾನ್ ಅಭಿನಯದ 'ಕಲ್ಟ್' ಚಿತ್ರದ ಬ್ಯಾನರ್ ಮತ್ತು ಕಟೌಟ್ಗಳನ್ನು ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ಪೌರಾಯುಕ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಇದೇ ವೇಳೆ, ಅರ್ಜಿದಾರರ ನಡೆಯನ್ನು ಖಂಡಿಸಿರುವ ಹೈಕೋರ್ಟ್, ಮಹಿಳೆ ಎಂದರೆ ಗೌರವವೇ ಇಲ್ಲವೇ? ನಾಲಿಗೆ ಶುದ್ಧವಿರಬೇಕು ಎಂದು ಮೌಖಿಕವಾಗಿ ಕಿಡಿಕಾರಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ ಮತ್ತು ಬೆದರಿಕೆಯೊಡ್ಡಿದ ಸಂಬಂಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪೌರಾಯುಕ್ತೆ ಜಿ. ಅಮೃತಾ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ರಾಜೀವ್ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, ಸ್ಥಳೀಯ ವ್ಯಕ್ತಿ 'ಕಲ್ಟ್' ಸಿನಿಮಾದಲ್ಲಿ ನಟಿಸಿದ್ದಾರೆ. ಕಲಾವಿದನಿಗೆ ಬೆಂಬಲಿಸಿ, ಬ್ಯಾನರ್ ಮತ್ತು ಕಟೌಟ್ ಹಾಕಲಾಗಿತ್ತು. ವಾಟ್ಸ್ಆ್ಯಪ್ ಮೂಲಕ ಪೌರಾಯುಕ್ತರು ಬ್ಯಾನರ್ ಹಾಕಲು ಅನುಮತಿಸಿದ್ದರು. ಅದಕ್ಕೆ ಕಟ್ಟಬೇಕಾದ ಶುಲ್ಕವನ್ನೂ ಪಾವತಿಸಿಸಲಾಗಿದೆ. ಆದರೆ, ಏಕಾಏಕಿ ಪೌರಾಯುಕ್ತರು ಜೆಡಿಎಸ್ ಪಕ್ಷದ ಬ್ಯಾನರ್ಗಳನ್ನು ಹಾಗೇ ಬಿಟ್ಟು, ನಮ್ಮ ಕಟೌಟ್ ಬ್ಯಾನರ್ ತೆರವು ಮಾಡಿದ್ದರು. ಇದರಿಂದ, ಬೇಸರಗೊಂಡು ಪೌರಾಯುಕ್ತರ ವಿರುದ್ಧ ಕೆಲವು ಪದಗಳನ್ನು ಅರ್ಜಿದಾರರು ಬಳಸಿದ್ದು, ಅದಕ್ಕೆ ಈಗಾಗಲೇ ಕ್ಷಮೆ ಕೋರಿದ್ದಾರೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ಹೊರಗೆ ಬಂದ ತಕ್ಷಣ ಸಾರ್ವಜನಿಕವಾಗಿ ಕ್ಷಮೆ ಕೋರಲಾಗುವುದು ಎಂದರು.
ಆಗ ನ್ಯಾಯಪೀಠ, ಕಟೌಟ್ ಹಾಕಲು ನೀವೇನು ನಿರ್ಮಾಪಕರಾ? ನಟರಾ? ಅಧಿಕಾರಿ ಮಹಿಳೆ ಎಂಬ ಗೌರವವೂ ಇಲ್ಲದೆ ಮಾತನಾಡಿದ್ದೀರಲ್ಲಾ. ನಿಮ್ಮದೇ ಪಕ್ಷವೇ ಇದೆ. ಆದರೂ ಅಡಗಿ ಕುಳಿತಿರುವುದೇಕೆ? ಅರ್ಜಿದಾರರು ಈಗ ಎಲ್ಲಿದ್ದಾರೆ. ನಿರೀಕ್ಷಣಾ ಜಾಮೀನು ಪಡೆಯಿರಿ ಎಂದು ಹೇಳಿತಲ್ಲದೆ, ಆಡಿದ ಮಾತುಗಳನ್ನು ಹಿಂಪಡೆಯಲಾಗದು. ನಾಲಿಗೆ ಸರಿಯಾಗಿರಬೇಕು. ನಾಲಿಗೆಯೇ ಎಲ್ಲವನ್ನೂ ಯಾವಾಗಲೂ ನಾಶ ಮಾಡಿದೆ. ನೀವು ಕ್ಷಮೆ ಕೋರಬಹುದು ಆದರೆ, ಬಿರುಕು ಹಾಗೆ ಉಳಿಯಲಿದೆ ಎನ್ನುವುದು ನಿಮ್ಮ ಗಮನಕ್ಕೆ ಇರಬೇಕು ಎಂದು ಕುಟುಕಿತು.
ಅದಕ್ಕೆ ಅರ್ಜಿದಾರರ ಪರ ವಕೀಲರು, ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯು ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ. ರಕ್ಷಣೆ ಒದಗಿಸಿದರೆ ತನಿಖೆಗೂ ಸಹಕರಿಸುತ್ತೇವೆ. ಪೊಲೀಸರು ಬಂಧಿಸಲು ಕಾದು ಕುಳಿತಿದ್ದಾರೆ. ಆದ್ದರಿಂದ, ರಕ್ಷಣೆ ಒದಗಿಸಿದರೆ ಸಾರ್ವಜನಿಕವಾಗಿ ಕ್ಷಮೆ ಕೋರಿ, ತನಿಖೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
ವಾದ ಆಲಿಸಿ, ಆದೇಶ ಕಾಯ್ದಿರಿಸಿದ ನ್ಯಾಯಪೀಠ, ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ಪ್ರಕರಣವೇನು?
ಸಾರ್ವಜನಿಕರ ದೂರಿನ ಮೇರೆಗೆ 'ಕಲ್ಟ್' ಚಲನಚಿತ್ರದ ಬ್ಯಾನರ್ ಮತ್ತು ಕಟೌಟ್ ತೆಗೆಸಿದ್ದಕ್ಕೆ ರಾಜೀವ್ ಗೌಡ ಅವರು ಆರೋಗ್ಯಾಧಿಕಾರಿ ಮತ್ತು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಪೌರಾಯುಕ್ತೆ ಅಮೃತಾ ಅವರು 2026ರ ಜನವರಿ 14ರಂದು ನೀಡಿದ ದೂರಿನ ಅನ್ವಯ ರಾಜೀವ್ ಗೌಡ ಅವರ ವಿರುದ್ಧ ಬಿಎನ್ಎಸ್ ಸೆಕ್ಷನ್ಗಳಾದ 132, 224, 352, 351(3) ಮತ್ತು 56ರ ಅಡಿ ಪ್ರಕರಣ ದಾಖಲಾಗಿದೆ. ಇದರಿಂದ, ಎಫ್ಐಆರ್ ರದ್ದು ಕೋರಿ ರಾಜೀವ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.







