ಬಳ್ಳಾರಿ ಗಲಾಟೆ ಪ್ರಕರಣ | ಕಾಂಗ್ರೆಸ್ ಕಾರ್ಯಕರ್ತನ ಮೃತದೇಹಕ್ಕೆ 2 ಬಾರಿ ಮರಣೋತ್ತರ ಪರೀಕ್ಷೆ : ಎಚ್ಡಿಕೆ ಆರೋಪ

ಬೆಂಗಳೂರು : ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಗುಂಡಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನು ಬಾಹಿರವಾಗಿ ಎರಡು ಬಾರಿ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತ ರಾಜಶೇಖರ್ ಹತ್ಯೆ ಒಂದೆಡೆ, ಆದರೆ ಸ್ವಪಕ್ಷದ ಕಾರ್ಯಕರ್ತನ ಕೊಲೆಯನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಏನು ಫಲಿತಾಂಶ ಹೊರಬಂತು? ಎರಡನೆ ಮರಣೋತ್ತರ ಪರೀಕ್ಷೆಯಲ್ಲಿ ಏನು ಮಾಹಿತಿ ಇದೆ? ಎಂಬುದನ್ನು ಸರಕಾರ ಹೇಳಬೇಕು. ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜಶೇಖರ ಅವರ ದೇಹವನ್ನು ಎರಡು ಸಲ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.
2ನೆ ಬಾರಿ ಮರಣೋತ್ತರ ಪರೀಕ್ಷೆಯ ಅವಶ್ಯಕತೆವೇನು? ಇದನ್ನು ಮಾಡಲಿಕ್ಕೆ ಯಾರು ಒತ್ತಡ ಹೇರಿದರು? ಮತ್ತೊಂದು ಬಾರಿ ಪರೀಕ್ಷೆಗೆ ಯಾರು ಆದೇಶ ಮಾಡಿದರು? ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ತಮಗೆ ಅನುಕೂಲಕರ ವರದಿ ಬರಲಿಲ್ಲ ಎಂದು ಅಲ್ಲಿಗೆ ‘ಸೂರ್ಯನ ಬೆಳಕು' ಏನಾದರೂ ಬಿದ್ದಿತ್ತಾ? ಎಂದು ಅವರು ಪ್ರಶ್ನಿಸಿದರು.
ನೀವು ಸತ್ಯವಂತರಲ್ಲವೇ? ದಿನನಿತ್ಯ ಜಾಹೀರಾತುಗಳಲ್ಲಿ ‘ಸತ್ಯಮೆಯ ಜಯತೇ' ಎಂದು ಕೊಚ್ಚಿಕೊಳ್ಳುತ್ತೀರಿ. ಈಗ ಸತ್ಯ ಹೇಳಿ. ರಾಜ್ಯದ ಜನತೆಗೆ ಸತ್ಯ ಏನೆಂದು ತಿಳಿಸಬೇಕಲ್ಲವೇ? ಎರಡನೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ ಎಂಬುದನ್ನು ಹೇಳಿ? ಮುಖ್ಯಮಂತ್ರಿಗಳೇ ಜನತೆಗೆ ಸತ್ಯವನ್ನು ಹೇಳಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ದೇಹದಲ್ಲಿ ಸಣ್ಣಪುಟ್ಟ ಚೂರು ಪತ್ತೆಯಾಯಿತು ಎಂಬ ಮಾಹಿತಿ ಇದೆ. ಎರಡನೆ ಶವ ಪರೀಕ್ಷೆಯನ್ನು ಮಾಡಿಸುವ ಮೂಲಕ ಸ್ವತಃ ಜನಾರ್ದನ ರೆಡ್ಡಿ ಅವರೇ ಗುಂಡು ಹೊಡೆದಿದ್ದು ಆರೋಪ ಮಾಡಿ ಅವರನ್ನು ಗುರಿ ಮಾಡಲು ಷಡ್ಯಂತ್ರ್ಯ ಮಾಡಿದ್ದಾರೆ. ಆದರೆ, ಎರಡನೆ ಮರಣೋತ್ತರ ಪರೀಕ್ಷೆ ಈ ಸರಕಾರಕ್ಕೆ, ಸೂರ್ಯನ ಬೆಳಕು ಬೀಳಿಸಲು ಹೋದವರಿಗೆ ಉಲ್ಟಾ ಹೊಡೆದಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಹೀಗೆ ಆಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಮ್ಮ ಪಕ್ಷ ಶಾಸಕ ಭರತ್ ರೆಡ್ಡಿ ಪರ ನಿಲ್ಲುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳುತ್ತಾರೆ. ಸತೀಶ್ರೆಡ್ಡಿ ಗನ್ಮ್ಯಾನ್ ಗನ್ನಿಂದ ಗುಂಡು ಹೊರಬಂದಿದೆ ಎಂದು ಸ್ವತಃ ಸಿಎಂ ಅವರೇ ಹೇಳಿದ್ದಾರೆ. ಆದರೆ ಗೃಹ ಸಚಿವರು ಆತನ ಬಂಧನಕ್ಕೆ ಆದೇಶ ಮಾಡದೇ ಹೇಳಿಕೆಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಹೀಗಿರುವಾಗ ಈ ಸರಕಾರ ಯಾವ ರೀತಿ ತನಿಖೆ ಮಾಡುತ್ತದೆ? ಇವರ ತನಿಖೆಯಿಂದ ಸತ್ಯಾಂಶ ಹೊರಕ್ಕೆ ಬರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಬಳ್ಳಾರಿ ಶೂಟೌಟ್ ಪ್ರಕರಣಕ್ಕೆ ಸಮಾಧಿ ಕಟ್ಟಲು ಹೊರಟಿದ್ದಾರೆ ಎಂದ ಅವರು, ಜನಾರ್ದನ ರೆಡ್ಡಿ ಅವರು ಭದ್ರತೆ ಕೊಡಿ ಎಂದು ಕೇಂದ್ರದ ಗೃಹ ಸಚಿವರಿಗೆ ಪತ್ರ ಬರೆದರೆ ಅದನ್ನು ಈ ಉಪಮುಖ್ಯಮಂತ್ರಿ ಲೇವಡಿ ಮಾಡುತ್ತಾರೆ. ಬೇಕಾದರೆ ಅಮೆರಿಕಾ, ಇರಾನ್ನಿಂದ ಭದ್ರತೆ ಮಾಡಿಸಿಕೊಳ್ಳಲಿ ಅಥವಾ ನೂರು ಜನ ಬಿಜೆಪಿ ಕಾರ್ಯಕರ್ತರನ್ನು ಭದ್ರತೆಗೆ ನಿಯೋಜಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಬಾಯಲ್ಲಿ ಬರುವ ಮಾತೇ ಇದು ಎಂದು ಕುಮಾರಸ್ವಾಮಿ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಜವರಾಯಿ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್.ಎಂ.ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ಪ್ರಮುಖರಿದ್ದರು.







