ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ: ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಸಂಸದ ಬಚ್ಚೇಗೌಡಗೆ ಎಂಟಿಬಿ ನಾಗರಾಜ್ ತಿರುಗೇಟು
![ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ: ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಸಂಸದ ಬಚ್ಚೇಗೌಡಗೆ ಎಂಟಿಬಿ ನಾಗರಾಜ್ ತಿರುಗೇಟು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ: ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಸಂಸದ ಬಚ್ಚೇಗೌಡಗೆ ಎಂಟಿಬಿ ನಾಗರಾಜ್ ತಿರುಗೇಟು](https://www.varthabharati.in/h-upload/2023/09/09/1188907-chh.webp)
ಚಿಕ್ಕಬಳ್ಳಾಪುರ (ಹೊಸಕೋಟೆ): 'ಬಿಜೆಪಿ ಒಂದು ಮತೀಯ ಮತ್ತು ಕೋಮುವಾದಿ ಪಕ್ಷ' ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅವರ ವಿರುದ್ಧ ಮಾಜಿ ಸಚಿವ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ಇತ್ತೀಚೆಗಷ್ಟೇ ಚುನಾವಣಾ ರಾಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಬಚ್ಚೇಗೌಡ ಅವರು ಶುಕ್ರವಾರ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯ ಬಳಿಕ ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದರು.
ಇದೀಗ ಬಚ್ಚೇಗೌಡ ಅವರ ಹೇಳಿಕೆ ತಿರುಗೇಟು ನೀಡಿರುವ ಎಂಟಿಬಿ ನಾಗರಾಜ್, ʼʼವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ತನ್ನ ಮಗನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ, ಈಗ ಬಿಜೆಪಿ ಹಾಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆ ಬಚ್ಚೇಗೌಡ ಅವರಿಗಿಲ್ಲʼʼ ಎಂದು ಕಿಡಿಕಾರಿದ್ದಾರೆ.
ʼʼಹೊಸಕೋಟೆಯಲ್ಲಿ ತನ್ನ ಮಗನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ, ಎರಡು ಜಿಲ್ಲೆಯಲ್ಲಿ ಒಬ್ಬ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡದೆ ಇರುವ ವಿಷಯ ಇಡೀ ಜಗತ್ತಿಗೆ ಗೊತ್ತಾಗಿದೆ. ಅಲ್ಲದೇ, ಸಂಸದರ ಅನುದಾನ ಪಡೆದು ಜಿಲ್ಲೆಯ ಯಾವುದೇ ತಾಲೂಕಿಗೆ 1 ರೂಪಾಯಿ ಕೊಡುವ ಕೆಲಸ ಮಾಡಿಲ್ಲ. ಇದನ್ನು ಪ್ರಶ್ನೆ ಮಾಡಲು ಅಲ್ಲಿನ ಕಾರ್ಯಕರ್ತರು ಕಾಯುತ್ತಿದ್ದರು. ಆದರೆ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ಸಹ ಸಭೆ ಸಮಾರಂಭಗಳಿಗೆ ಅವರು ತಪ್ಪಿಸಿಕೊಳ್ಳುತ್ತಿದ್ದರುʼʼ ಎಂದು ದೂರಿದ್ದಾರೆ.
ʼʼಅದನ್ನೆಲ್ಲ ಬಿಟ್ಟು ಈಗ ವಿನಾಕಾರಣ ಬಿಜೆಪಿ ಪಕ್ಷ ಅಥವಾ ನನ್ನ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲʼʼ ಎಂದು ಎಂಟಿಬಿ ನಾಗರಾಜ್ ಆಕ್ಷೇಪಿಸಿದರು.