ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಧಾರ್ಮಿಕ ಮುಖಂಡರ ನಿಯೋಗವು ಸೋಮವಾರ ಕುಮಾರಕೃಪ ಪಾರ್ಕ್ನಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿಮ್ಮೆಲ್ಲರ ಆಶೀರ್ವಾದದಿಂದ 136 ಸ್ಥಾನಗಳನ್ನು ಗೆದ್ದು ಬಂದಿದ್ದೇವೆ. ಸಂಪುಟ ರಚನೆ ಮಾಡುವ ತೀರ್ಮಾನ ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ನನ್ನನ್ನೆ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಪಕ್ಷ ಸಿದ್ದರಾಮಯ್ಯನವರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿತು ಎಂದು ಹೇಳಿದರು.
ನೀವಿಬ್ಬರೂ ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದು ಸೂಚಿಸಿತ್ತು. ಈ ಗುಟ್ಟು ಎಲ್ಲರ ಬಳಿ ಇರಲಿಲ್ಲ. ಈಗ ಪಕ್ಷ ತೀರ್ಮಾನ ಮಾಡಿ ನನಗೆ ಈ ಸ್ಥಾನದಲ್ಲಿ ಕೂರಿಸಿದೆ. ಎಲ್ಲ ಜಾತಿ, ಧರ್ಮದವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ. ನಮಗೆ ಮೂಲ ಸಂವಿಧಾನ ಎಂದು ಮುಖ್ಯಮಂತ್ರಿ ಹೇಳಿದರು.
ಸಲೀಂ ಅಹ್ಮದ್ಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಬಹಳ ವಿರೋಧವಿತ್ತು. ಅವರು ಬೆಂಗಳೂರು ನಗರವನ್ನು ಕೇಂದ್ರೀಕರಿಸಿದ್ದರೆ ಯಾವುದಾದರೂ ಒಂದು ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಲು ಸಾಧ್ಯವಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಈಗ ವಿಧಾನಪರಿಷತ್ತಿನಲ್ಲಿ ಮುಖ್ಯ ಸಚೇತಕ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅವಕಾಶಗಳನ್ನು ಕೊಡುತ್ತಾ ಬಂದಿದೆ ಎಂದು ಅವರು ತಿಳಿಸಿದರು.
ನೀವು ಸಲೀಂ ಅಹ್ಮದ್ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಕೇಳುತ್ತಿದ್ದೀರಾ. ಅದೇ ರೀತಿ, ಬೇರೆ ಸಮುದಾಯ, ಸಮಾಜದವರು ಅವರ ಧಾರ್ಮಿಕ ಮುಖಂಡರು, ಸ್ವಾಮೀಜಿಗಳ ನಿಯೋಗದೊಂದಿಗೆ ಬಂದು ಮನವಿ ಮಾಡುತ್ತಿದ್ದಾರೆ. ಇದರಿಂದ, ರಾಜಕೀಯವಾಗಿ ತೀರ್ಮಾನ ಕೈಗೊಳ್ಳುವುದು ನಮಗೆ ಕಷ್ಟ ಆಗುತ್ತಿದೆ. ವಿಧಾನಸಭೆಯಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ವಿಧಾನಪರಿಷತ್ತಿನಿಂದ ಎಷ್ಟು ಜನರಿಗೆ ಸಚಿವರನ್ನಾಗಿ ಮಾಡಬೇಕು ಎಂಬ ಪ್ರಶ್ನೆಯೂ ನಮ್ಮ ಮುಂದಿದೆ ಎಂದು ಅವರು ಹೇಳಿದರು.
ಹೊಸಬರಿಗೆ ಅವಕಾಶ ನೀಡಬೇಕು ಎಂದು ನಮ್ಮ ವರಿಷ್ಠರು ಬಯಸಿದ್ದಾರೆ. ನನಗೆ ಯಾವ ಗುಂಪು ಇಲ್ಲ, ಬೆಂಬಲಿಗರ ಗುಂಪು ಮಾಡಲು ಬಯಸುವುದಿಲ್ಲ. ನಮ್ಮದು ಒಂದೆ ಗುಂಪು ಅದು ಕಾಂಗ್ರೆಸ್ ಗುಂಪು. ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ನನಗೆ ನನ್ನದೆ ಆದ ಚಿಂತನೆಯಿದೆ. ಪಕ್ಷಕ್ಕಾಗಿ ದುಡಿಯುವವರು, ಸಮಾಜಕ್ಕೆ ಆಸ್ತಿಯಾಗುವವರು, ರಾಜ್ಯದಲ್ಲಿ ಪ್ರವಾಸ ಮಾಡುವವರು ನನಗೆ ಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಮನ್ಸೂರ್ ಅಲಿ ಖಾನ್ ಅವರನ್ನು ರಾಜ್ಯಸಭೆಗೆ ಆರಿಸಿದ್ದೇವೆ:
"ರೆಹಮಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಲೋಕಸಭೆಗೆ ಸ್ಪರ್ಧೆಸುವಂತೆ ಮಾಡಿದೆ. ಆಗ ಎಲ್ಲರೂ ನಗುತ್ತಿದ್ದರು. ಗೆಲುವು ಸೋಲು ಬೇರೆ ವಿಚಾರ, ನಿನಗೆ ಪಕ್ಷ ಗುರುತಿಸುತ್ತಿದೆ ಎಂದು ಭಾವಿಸಿ ಎಂದು ನಾನು ಹೇಳಿದೆ. ರಾಜ್ಯಸಭೆ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗಿತ್ತು. ಸಿದ್ದರಾಮಯ್ಯ ಅವರು ಬೇಡ ಎಂದಾಗ ನಾನು ಸಿದ್ದರಾಮಯ್ಯ ಅವರು, ಹೈಕಮಾಂಡ್ ನಾಯಕರು ಚರ್ಚಿಸಿ ಮನ್ಸೂರ್ ಅಲಿ ಖಾನ್ ಅವರನ್ನು ಆಯ್ಕೆ ಮಾಡಿದೆವು. ಅವರು ಭವಿಷ್ಯದ ಭರವಸೆಯ ನಾಯಕರು. ಹೀಗೆ ನಾವು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದ್ದೇವೆ" ಎಂದು ತಿಳಿಸಿದರು.
ಮಾಜಿ ಸಿಎಂ ಪುತ್ರರ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಗೆಲ್ಲಿಸಿದ್ದೇವೆ:
"ನನಗೂ ಅಧಿಕಾರ ತಡವಾಗಿ ಸಿಕ್ಕಿತು. ನಾನು ಸುಮ್ಮನೆ ಇದ್ದೆ. ಧರಂ ಸಿಂಗ್ ಅವರ ಸರ್ಕಾರದಲ್ಲಿ ನನ್ನನ್ನು, ಪರಮೇಶ್ವರ್ ಅವರನ್ನು ಮಂತ್ರಿ ಮಾಡಲಿಲ್ಲ. ಆಗಲು ತಾಳ್ಮೆಯಿಂದ ಇದ್ದೆವು. ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಮಗನ ವಿರುದ್ಧ ಇಕ್ಬಾಲ್ ಹುಸೇನ್ ನಿಲ್ಲಿಸಿ ಗೆಲ್ಲಿಸುವುದು ಸುಲಭದ ಮಾತಲ್ಲ. ಬೊಮ್ಮಾಯಿ ಅವರ ಮಗನ ವಿರುದ್ಧವೂ ಪಠಾಣ್ ಅವರನ್ನು ನಿಲ್ಲಿಸಿ ಗೆಲ್ಲಿಸುವುದು ಸುಲಭವಾಗಿ ಇರಲಿಲ್ಲ. ನಮ್ಮವರ ಅಭಿಪ್ರಾಯ ಬೇರೆ ಇತ್ತು. ಆದರೆ ನಾನು ಸಮೀಕ್ಷೆ ಮಾಡಿಸಿದೆ" ಎಂದು ಹೇಳಿದರು.
ಯು.ಟಿ. ಖಾದರ್ ತ್ಯಾಗ ಮಾಡಿದ್ದರು:
"ಯು.ಟಿ. ಖಾದರ್ ಕಳೆದ ಬಾರಿಯೇ ಮಂತ್ರಿ ಆಗಬೇಕಿತ್ತು. ಆದರೆ ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ನಾವು ನೀವು ಬಯಸಿದ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದವು. ಈಗ ಆರೋಗ್ಯ ಇಲಾಖೆ ನೀಡಿದ್ದೇವೆ" ಎಂದರು.
"ನಾನು ಯಾರನ್ನೂ ನೋಯಿಸಲು, ಗುಂಪುಗಾರಿಕೆ ಮಾಡಲು ಬಯಸುವುದಿಲ್ಲ. ನಮ್ಮದು ಒಂದೇ ಗುಂಪು ಕಾಂಗ್ರೆಸ್ ಗುಂಪು. ನಮ್ಮದು ಒಂದೇ ಧರ್ಮ ಕಾಂಗ್ರೆಸ್. ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ತಮ್ಮದೇ ಆದ ಆಲೋಚನೆ ಮಾಡುತ್ತಾರೆ. ಅವರಿಗೂ ಅನೇಕ ಇಕ್ಕಟ್ಟಿನ ಪರಿಸ್ಥಿತಿ ಇದೆ. ಕಳೆದ ಬಾರಿ ಅವರೇ ಒತ್ತಾಯ ಮಾಡಿ ರಹೀಮ್ ಖಾನ್ ಅವರಿಗೆ ಮಂತ್ರಿ ಸ್ಥಾನ ನೀಡಿದ್ದರು" ಎಂದರು.
ಎಲ್ಲಾ ಸಮುದಾಯಗಳಿಂದ ಒತ್ತಡ ಇದೆ
"ನಿಮ್ಮಂತೆ ಲಂಬಾಣಿ ಸಮುದಾಯ, ಮರಾಠಿ ಸಮುದಾಯದವರು ಬಂದು ಮಂತ್ರಿ ಸ್ಥಾನ ಕೇಳಿದರು. ಹಿಂದುಳಿದವರು ಬಂದು ಸಂತೋಷ್ ಲಾಡ್, ಶ್ರೀನಿವಾಸ್ ಮಾನೆಗೆ ನೀಡಿ ಎನ್ನುತ್ತಿದ್ದಾರೆ. ಕುರುಬ ಸಮುದಾಯದವರು ಶಿವಣ್ಣ ಅವರಿಗೆ ನೀಡಿ ಎಂದು ಹೇಳುತ್ತಿದ್ದಾರೆ. ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಂದರು. ಅವರಿಗೆ ಮಾತು ಕೊಟ್ಟಿದ್ದೆವು. ಅವರು ಕೇಳುತ್ತಿದ್ದಾರೆ" ಎಂದು ವಿವರಿಸಿದರು.
"ಮಹೇಶ್ ಕೌಜಲಗಿ, ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ್, ಯಶವಂತ ಪಾಟೀಲ್, ಜೆ.ಎಸ್ ಪಾಟೀಲ್ ಎಲ್ಲರೂ ಕೇಳುತ್ತಿದ್ದಾರೆ. ನಮ್ಮ ಪರಿಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿರುವೆ. ಪಕ್ಷ ಹಾಗೂ ಸರ್ಕಾರದಲ್ಲಿ ಯಾರನ್ನು ಯಾವ ರೀತಿ ಬಳಸಿಕೊಳ್ಳಬೇಕು, ಕೆಲವೊಮ್ಮೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ" ಎಂದು ಹೇಳಿದರು.
ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಸಮುದಾಯಗಳಿಗೆ ಶಕ್ತಿ ತುಂಬಲು ಚಿಂತನೆ
"ನೀವೆಲ್ಲರೂ ಬಂದು ಭೇಟಿ ಮಾಡಿರುವುದು ಸಂತೋಷ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನನ್ನದೇ ಆದ ಹೊಸ ಚಿಂತನೆ ಇದೆ. ಹಿಂದುಳಿದವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶಕ್ತಿ ತುಂಬಲು ತಿದ್ದುಪಡಿ ತರಲು ತೀರ್ಮಾನಿಸಿದ್ದೇವೆ. ಈ ಎಲ್ಲಾ ವಿಚಾರ ಮುಂದಕ್ಕೆ ತಿಳಿಸುತ್ತೇವೆ" ಎಂದು ಹೇಳಿದರು.
"ನಾನು ಯಾರ ಅವಕಾಶವನ್ನು ತಡೆಯಲು ಬಯಸುವುದಿಲ್ಲ. ಈ ವಿಚಾರದಲ್ಲಿ ನಾನು ಮುಕ್ತ ಮನಸ್ಸಿನಿಂದ ಇದ್ದೇನೆ. ಅವರು ಬೇರೆಯವರಿಗೆ ಹತ್ತಿರವಾಗಿದ್ದಾರೆ ಎಂಬ ಆಲೋಚನೆ ನನ್ನಲ್ಲಿ ಇಲ್ಲ. ಪಕ್ಷಕ್ಕೆ ದುಡಿಯುವವರು, ಪಕ್ಷಕ್ಕೆ ಆಸ್ತಿಯಾಗುವವರು, ರಾಜ್ಯದ ಪ್ರವಾಸ ಮಾಡುವವರು ನನಗೆ ಬೇಕು. ವೈಯಕ್ತಿಕ ಹಿತಾಸಕ್ತಿ ಇಲ್ಲ. ಜನ ಬೆಂಬಲ ಇರುವವರು ಬೇಕು. ನಿಮ್ಮ ಸಮುದಾಯದ ಅಭಿವೃದ್ಧಿಗೆ ಏನಾದರೂ ಸಲಹೆ ಇದ್ದರೆ ಕೊಡಿ. ಸರ್ಕಾರದ ವ್ಯಾಪ್ತಿಯಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ ಮಾಡುತ್ತೇವೆ." ಎಂದು ತಿಳಿಸಿದರು.






