ಕಸಾಪ ಅಕ್ರಮ ಆರೋಪದ ತನಿಖೆಗಿಲ್ಲ ಅಡ್ಡಿ; ಸಾಮಾನ್ಯ ಸಭೆ ನಿರ್ಣಯವೂ ನ್ಯಾಯಾಲಯದ ಪರಿಶೀಲನೆಗೊಳಪಡಲಿದೆ : ಹೈಕೋರ್ಟ್

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2025ರ ಅಕ್ಟೋಬರ್ 5ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸುವುದಾದರೆ ಪರಿಷತ್ತಿನ ಅವ್ಯವಹಾರಗಳ ಸಂಬಂಧಿತ ಬಾಕಿ ಇರುವ ತನಿಖೆಯೂ ಮುಂದುವರಿಯಬಹುದು ಎಂದು ಹೇಳಿರುವ ಹೈಕೋರ್ಟ್, ಉಭಯ ಪ್ರಕ್ರಿಯೆಗಳ ನಿರ್ಧಾರಗಳನ್ನು ಜಾರಿಗೊಳಿಸುವುದಕ್ಕೂ ಮುನ್ನ ನ್ಯಾಯಾಲಯದ ಮುಂದೆ ಇಡಬೇಕು ಎಂದು ನಿರ್ದೇಶಿಸಿದೆ.
ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ 1960ರ ಸೆಕ್ಷನ್ 27ಎ ಅಡಿ ತನಿಖೆಯಲ್ಲಿ ಭಾಗವಹಿಸುವಂತೆ ಸಹಕಾರ ಇಲಾಖೆಯು 2025ರ ಸೆಪ್ಟೆಂಬರ್ 15ರಂದು ಜಾರಿ ಮಾಡಿರುವ ನೋಟಿಸ್ಗೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹಾಗೂ ಇತರ ನಾಲ್ವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿ, ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.
ಅಲ್ಲದೆ, ಕಾಯ್ದೆಯ ಸೆಕ್ಷನ್ 25ರ ಅಡಿಯ ತನಿಖೆಯ ಫಲಿತಾಂಶ ಮತ್ತು ಕಾಯ್ದೆ ಸೆಕ್ಷನ್ 27ಎ ತನಿಖೆಗೆ ಕಾರಣವಾಗಿರುವುದು ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆದು ಅಲ್ಲಿ ಯಾವುದೇ ನಿರ್ಣಯವಾದರೂ ಅದು ಈ ನ್ಯಾಯಾಲಯದ ಪರಿಶೀಲನೆಗೆ ಒಳಪಡಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ವಾದ ಮಂಡಿಸಿ, 2025ರ ಸೆಪ್ಟೆಂಬರ್ 22ರಂದು ಕಸಾಪ ಅಕ್ರಮಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಭಾಗವಹಿಸಲು ಅಧ್ಯಕ್ಷ ಜೋಶಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅಂದು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಮುಂದಿನ ದಿನಾಂಕವನ್ನೂ ನಿಗದಿಪಡಿಸಿಲ್ಲ. ಸಮನ್ವಯ ಪೀಠವು ಈ ಹಿಂದೆ ಬೈಲಾ ಪ್ರಕಾರ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಕಸಾಪಗೆ ಅನುಮತಿಸಿದ್ದು, ಕಾಯ್ದೆಯ ಸೆಕ್ಷನ್ 25ರ ಅನ್ವಯ ಕಸಾಪದಲ್ಲಿ ಅಕ್ರಮಗಳ ತನಿಖೆಗೂ ಅನುಮತಿಸಿತ್ತು. ಏಕಸದಸ್ಯ ನ್ಯಾಯಪೀಠದ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದ್ದು, ಅದನ್ನು ವಿಭಾಗೀಯ ಪೀಠ ವಜಾಗೊಳಿಸಿತ್ತು ಎಂದರು.
ಮುಂದುವರಿದು, ವಿಭಾಗೀಯ ನ್ಯಾಯಪೀಠ ಮಧ್ಯಂತರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದರಿಂದ ಕಸಾಪ ಲೆಕ್ಕಪತ್ರ ಸಲ್ಲಿಸಿದ್ದು, ಸಹಕಾರ ಸೊಸೈಟಿಗಳ ಉಪ ನಿಬಂಧಕರು ಮಧ್ಯಂತರ ವರದಿಯನ್ನು ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್ಗೆ ಸಲ್ಲಿಸಿದ್ದರು. ಇದು ಕಾಯ್ದೆಯ ಸೆಕ್ಷನ್ 27ಎ ಅಡಿ ತನಿಖೆಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಸೊಸೈಟಿಯ ಕಾರ್ಯಚಟುವಟಿಕೆಯನ್ನು ನಿಭಾಯಿಸಲು ಆಡಳಿತಾಧಿಕಾರಿಯನ್ನು ನೇಮಿಸುವ ಸಾಧ್ಯತೆ ಇದೆ. ಆದ್ದರಿಂದ, ನೋಟಿಸ್ಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ. ಭಾನು ಪ್ರಕಾಶ್ ಅವರು, 2025ರ ಅಕ್ಟೋಬರ್ 5ರಂದು ನಡೆಸಲು ಉದ್ದೇಶಿಸಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಸಾಪ ನಿರ್ಣಯ ಕೈಗೊಂಡರೆ ತನಿಖೆಯು ಅನೂರ್ಜಿತವಾಗಲಿದೆ. ಆದ್ದರಿಂದ, ಕಾಯ್ದೆಯ ಸೆಕ್ಷನ್ 27ಎ ಅಡಿ ತನಿಖೆಗೆ ನ್ಯಾಯಾಲಯ ಅನುಮತಿಸಬೇಕು ಎಂದು ಕೋರಿದ್ದರು.







