ಚಲನಚಿತ್ರಗಳಿಗೆ ಏಕರೂಪ ದರ ನಿಗದಿ | ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಕಾರ, ಟಿಕೆಟ್ ಹಣದ ಲೆಕ್ಕ ನಿರ್ವಹಣೆಗೆ ನಿರ್ದೇಶನ

ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ 200 ರೂ. ಏಕರೂಪ ದರ ನಿಗದಿಪಡಿಸಲು ರಾಜ್ಯ ಸರಕಾರ ಜಾರಿಗೆ ತಂದಿದ್ದ ನಿಯಮಗಳಿಗೆ ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.
ಇದೇ ವೇಳೆ, ಚಲನಚಿತ್ರ ವೀಕ್ಷಣೆಗೆ ಪ್ರೇಕ್ಷಕರು ಡಿಜಿಟಲ್ ಹಾಗೂ ನಗದು ರೂಪದಲ್ಲಿ ಪಾವತಿಸುವ (ಜಿಎಸ್ಟಿ ಹೊರತು ಪಡಿಸಿ) ಟಿಕೆಟ್ ದರದ ಲೆಕ್ಕ ನಿರ್ವಹಣೆ ಮಾಡಿ, ಅದನ್ನು ಪ್ರತಿ ತಿಂಗಳ 15ರಂದು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ರಾಜ್ಯ ಸರಕಾರ ಜಾರಿಗೆ ತಂದಿರುವ 'ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025ಕ್ಕೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ಮಾಡಿದೆ.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಹಿತಾಸಕ್ತಿ ಕಾಪಾಡಲು ಮಧ್ಯಂತರ ಆದೇಶವನ್ನು ವಿಸ್ತರಿಸುವ ಮೂಲಕ ನ್ಯಾಯದ ಹಿತಾಸಕ್ತಿ ರಕ್ಷಿಸಲಾಗುವುದು ಎಂದು ತಿಳಿಸಿತಲ್ಲದೆ, ಮೇಲ್ಮನವಿ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಕೊಂಚ ಮಾರ್ಪಾಡುಗೊಳಿಸಿರುವ ವಿಭಾಗೀಯ ನ್ಯಾಯಪೀಠ, ಚಲನಚಿತ್ರ ವೀಕ್ಷಣೆಗೆ ಪ್ರೇಕ್ಷಕರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಹಾಗೂ ಬ್ಯಾಂಕ್ ಖಾತೆ ಮೂಲಕ ಟಿಕೆಟ್ ಬುಕ್ ಮಾಡಿದವರ ಪಟ್ಟಿಯನ್ನು ಪ್ರತಿವಾದಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಿರ್ವಹಿಸಬೇಕು. ರಾಜ್ಯ ಸರಕಾರದ ನಿಯಮಗಳನ್ನು ಪ್ರಶ್ನಿಸಿರುವ ಮಲ್ಟಿಪೆಕ್ಸ್ ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್ ಕಾನೂನು ಹೋರಾಟದಲ್ಲಿ ವಿಫಲವಾದರೆ, ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಿದ ಮೊತ್ತವನ್ನು ಟಿಕೆಟ್ ಬುಕ್ ಮಾಡಿದ ವ್ಯಕ್ತಿಗೆ ಹಿಂತಿರುಗಿಸಬಹುದು. ಅಂತಹ ಸಿನಿಮಾ ಪ್ರೇಕ್ಷಕರ ಹಿತಾಸಕ್ತಿಯನ್ನು ರಕ್ಷಿಸಲು ಕೋರ್ಟ್ ಬಯಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ನಗದು ಮೂಲಕ ಟಿಕೆಟ್ ಖರೀದಿಸಿರುವವರ ವಿಚಾರವನ್ನು ಈ ನ್ಯಾಯಾಲಯ ಪ್ರಕರಣವನ್ನು ಮೆರಿಟ್ ಮೇಲೆ ಪರಿಗಣಿಸಿದಾಗ ನಿರ್ಧರಿಸಲಿದೆ. ಪ್ರತಿವಾದಿಗಳು ಪ್ರಕರಣದಲ್ಲಿ ಯಶಸ್ವಿಯಾದರೆ ಸಂಗ್ರಹಿಸಿದ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಒಂದೊಮ್ಮೆ, ಸರಕಾರದ ನಿಯಮಗಳನ್ನು ಹೈಕೋರ್ಟ್ ಎತ್ತಿ ಹಿಡಿದರೆ ನಗದು ರೂಪದಲ್ಲಿ ಸಂಗ್ರಹಿಸಲಾದ ಹೆಚ್ಚುವರಿ ಹಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿನಿಯೋಗಿಸಬಹುದು. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ನಿಯಮಿತವಾಗಿ ತಿಂಗಳಿಗೊಮ್ಮೆ ಸಂಗ್ರಹಿಸಲಾದ ಟಿಕೆಟ್ ದರದ ಲೆಕ್ಕವನ್ನು ಪರವಾನಗಿ ನೀಡುವ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ರಿಟ್ ಅರ್ಜಿಯಲ್ಲಿ ರಾಜ್ಯದ ಮಲ್ಟಿಪ್ಲೆಕ್ಸ್ಗಳ ಪರವಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಮುಂದೆ ಬಂದಿರುವುದರಿಂದ ಎಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿನ ಲೆಕ್ಕವನ್ನು ಪಡೆದು ಅದನ್ನು ಪರವಾನಗಿ ಪ್ರಾಧಿಕಾರಕ್ಕೆ ಮುಂದಿನ ತಿಂಗಳ 15ರೊಳಗೆ ಸಲ್ಲಿಸಬೇಕು. ಲೆಕ್ಕದ ಮಾಹಿತಿ ಒದಗಿಸದ ಮಲ್ಟಿಪ್ಲೆಕ್ಸ್ಗಳಿಗೆ ಈ ಮಧ್ಯಂತರ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರೇಕ್ಷಕರ ಗಮನಕ್ಕೆ ತರಬೇಕು:
ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ ಅವರು ನ್ಯಾಯಾಲಯದ ಈ ಆದೇಶವನ್ನು ಸಾರ್ವಜನಿಕರಿಗೆ ತಿಳಿಸಲು ಅನುಮತಿ ಕೋರಿದ್ದು, ಅದಕ್ಕೆ ಅನುಮತಿಸಲಾಗಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಎಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿ ನಿಗದಿತ ಸ್ಥಳಗಳು ಹಾಗೂ ಚಲನಚಿತ್ರ ಆರಂಭಕ್ಕೂ ಮುನ್ನ ನ್ಯಾಯಾಲಯದ ಈ ಆದೇಶವನ್ನು ಪ್ರದರ್ಶಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಸೆಪ್ಟೆಂಬರ್ 23ರಂದು ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅನುಕೂಲತೆಯ ಸಮಾನತೆಯ ಪರೀಕ್ಷೆಯ ಅನ್ವಯ ಸರಕಾರದ ತಿದ್ದುಪಡಿ ನಿಯಮಕ್ಕೆ ತಡೆ ನೀಡದಿದ್ದರೆ ಮತ್ತು ಅರ್ಜಿದಾರರು ರಿಟ್ ಅರ್ಜಿಯಲ್ಲಿ ಯಶಸ್ಸು ಕಂಡರೆ ಶಾಶ್ವತವಾಗಿ ತಮ್ಮ ಗಳಿಕೆಯನ್ನು ಕಳೆದುಕೊಳ್ಳಲಿದ್ದಾರೆ. ತಿದ್ದುಪಡಿ ನಿಯಮಕ್ಕೆ ತಡೆ ನೀಡಿದರೆ ಮತ್ತು ಅರ್ಜಿದಾರರು ಅಂತಿಮವಾಗಿ ನಷ್ಟ ಅನುಭವಿಸಿದರೆ ಗಳಿಸಿರುವ ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಮಾಡಬಹುದು. ಆದ್ದರಿಂದ, ತಿದ್ದುಪಡಿ ನಿಯಮಗಳಿಗೆ ಮುಂದಿನ ಆದೇಶದವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತ್ತು. ಇದೀಗ, ಈ ಆದೇಶದಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲ್ಪಟ್ಟ ಹಣಕ್ಕೆ ಸಂಬಂಧಿಸಿದಂತೆ ಮಾರ್ಪಾಡು ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ವಿಭಾಗೀಯ ನ್ಯಾಯಪೀಠ ಈ ಬದಲಾವಣೆ ಮಾಡಿದೆ.
ಇದಕ್ಕೂ ಮುನ್ನ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಪರ ಹಿರಿಯ ವಕೀಲ ಲಕ್ಷ್ಮಿನಾರಾಯಣ ವಾದ ಮಂಡಿಸಿ, ಸಿನಿಮಾ ಟಿಕೆಟ್ ದರ ಕಡಿಮೆ ಇದ್ದರೆ ಹೆಚ್ಚು ಜನ ಸಿನಿಮಾಗೆ ಬರುತ್ತಾರೆ. ಆಗ ಸಿನಿಮಾ ಯಶಸ್ಸು ಕಾಣುತ್ತದೆ ಎಂಬುದು ವಾಣಿಜ್ಯ ಮಂಡಳಿಯ ಅನುಭವವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಜನರ ಕಲ್ಯಾಣಕ್ಕಾಗಿ ಸಿನಿಮಾ ಟಿಕೆಟ್ ದರಕ್ಕೆ ಮಿತಿ ವಿಧಿಸಲು ಸರ್ಕಾರ ಮುಂದಾಗಿದೆ. ಇಲ್ಲಿ ಕರಾರಿನ ವಿಚಾರ ಬರುವುದಿಲ್ಲ. ಅಂತಿಮವಾಗಿ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸುವವರೆಗೆ ನ್ಯಾಯಾಲಯ ತಡೆ ನೀಡಲಾಗದು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿಚಾರದಲ್ಲಿ ಹೈಕೋರ್ಟ್, ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಇದನ್ನೇ ಮಾಡಿದೆ ಎಂದರು.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ್ ಹೊಳ್ಳ, ನ್ಯಾಯಾಲಯದ ಆಶಯದಂತೆ ಲೆಕ್ಕ ಪತ್ರ ನಿರ್ವಹಿಸುತ್ತೇವೆ. ಈ ಹಿಂದೆ ರಾಜ್ಯ ಸರ್ಕಾರ ಇಂಥದ್ದೇ ಆದೇಶ ಮಾಡಿ, ಆನಂತರ ಅದನ್ನು ಹಿಂಪಡೆದಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.







