ಕಲಬುರಗಿ | ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ: ಹೊಸದಾಗಿ ಅರ್ಜಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ

ಕಲಬುರಗಿ: ಚಿತ್ತಾಪುರದಲ್ಲಿ ಆಯೋಜಿಸಿದ್ದ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ಯಾವ ದಿನ ಪಥಸಂಚಲನ ನಡೆಸುತ್ತೀರಿ ಎಂದು ತೀರ್ಮಾನಿಸಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆರೆಸ್ಸೆಸ್ ಪರ ಅರ್ಜಿದಾರರಿಗೆ ಸೂಚನೆ ಕೊಟ್ಟಿದೆ.
ಆರೆಸ್ಸೆಸ್ ಪಥ ಸಂಚಲನ ನಿಗದಿಯಾದ ರವಿವಾರವೇ ತನಗೂ 'ಭೀಮ ಪಥಸಂಚಲನ' ನಡೆಸಲು ಅನುಮತಿ ನೀಡುವಂತೆ ದಲಿತ ಪರ ಸಂಘಟನೆ ಭೀಮ್ ಆರ್ಜಿ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿತ್ತು.
ಒಂದೇ ದಿನ ಏಕಕಾಲಕ್ಕೆ ಎರಡು ಸಂಘಟನೆಗಳು ಕಾರ್ಯಕ್ರಮ ಆಯೋಜಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಪೊಲೀಸ್ ವರದಿ ಆಧರಿಸಿ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಪಥ ಸಂಚಲನ ನಡೆಸಲು ಎರಡೂ ಸಂಘಟನೆಗಳಿಗೆ ಅನುಮತಿ ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಆರೆಸ್ಸೆಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠವು, ಆರೆಸ್ಸೆಸ್ ನ.2ರಂದು ಪಥಸಂಚಲನ ಆಯೋಜಿಸಲು ನಿಗದಿಪಡಿಸಲಾಗಿದೆ. ಅದಕ್ಕೆ ಅನುಮತಿ ನೀಡಲು ರೂಟ್ ಮ್ಯಾಪ್ ಹಾಗೂ ತಹಶೀಲ್ದಾರ್ ಕೇಳಿದ್ದ ವಿವರಣೆಗಳೊಂದಿಗೆ ಹೊಸದಾಗಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು. ಅದನ್ನು ಕಲಬುರಗಿ ಜಿಲ್ಲಾಧಿಕಾರಿ ಪರಿಗಣಿಸಬೇಕು. ಈ ಕುರಿತ ವರದಿಯನ್ನು ಅ.24ರ ಮಧ್ಯಾಹ್ನ 2.30ಕ್ಕೆ ವರದಿ ಸಲ್ಲಿಸಬೇಕು' ಎಂದು ಸೂಚಿಸಿ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿತು.
ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅರ್ಜಿದಾರರ ಪರ ಅರುಣ್ ಶ್ಯಾಮ್ ಹಾಜರಾಗಿದ್ದರು.
ಈ ಮೂಲಕ ಇಂದು ನಡೆಯಲಿರುವ ಆರೆಸ್ಸೆಸ್ ಹಾಗೂ ಭೀಮ್ ಆರ್ಮಿಯ ಪಥ ಸಂಚಲನಕ್ಕೆ ಹೈಕೋರ್ಟ್ ನಿರಾಕರಿಯಾದಂತಾಗಿದೆ.







