ಜೀವ ಬೆದರಿಕೆ ಪ್ರಕರಣ: ತನಿಖೆಗೆ ಸಹಕರಿಸುವಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಜೀವ ಬೆದರಿಕೆ, ಮಹಿಳೆಯ ಘನತೆಗೆ ಧಕ್ಕೆ ಹಾಗೂ ಇತರ ಆರೋಪಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ತನಿಖೆಗೆ ಸಹಕರಿಸಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿಗೆ ನಿರ್ದೇಶಿಸಿರುವ ಹೈಕೋರ್ಟ್, ತಿಮರೋಡಿ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ತನಿಖಾಧಿಕಾರಿಗೆ ಸೂಚಿಸಿದೆ.
ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದರ ಸಂಬಂಧಿತ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ ತಿಮರೋಡಿ ಪರ ವಕೀಲರು ವಾದ ಮಂಡಿಸಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಬಾಲ್ಯ ಸ್ನೇಹಿತನ ಜತೆ ಫೋನ್ನಲ್ಲಿ ಸಂಭಾಷಣೆಯಾಗಿದೆ. ತಿಮರೋಡಿ ಅವರ ಸ್ನೇಹಿತ ಯಕ್ಷಗಾನ ಕಾರ್ಯಕ್ರಮದಲ್ಲಿ ಅಭಿನಯಿಸಿದ್ದು, ಅದು ಚಾನೆಲ್ ವೊಂದರಲ್ಲಿ ಪ್ರಸಾರವಾಗಿತ್ತು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ವಿಶೇಷ ತನಿಖಾ ದಳ ರಚನೆಯಾದಾಗಿನಿಂದ ಈ ವಸ್ತುವನ್ನು ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯವಾಗಿ ಬಳಕೆ ಮಾಡುತ್ತಿದ್ದಾರೆ. ಹಾಸ್ಯ ನಟರು ತಲೆ ಬುರುಡೆ ಹಿಡಿದು, ಮಾಸ್ಕ್ ಹಾಕಿಕೊಂಡು ಬಂದು ತಿಮರೋಡಿಗೆ ಪ್ರಚೋದನೆ ನೀಡುತ್ತಿದ್ದಾರೆ. ಬುರುಡೆ ಗ್ಯಾಂಗ್ ಎಂದು ಏಕೆ ಹೇಳುತ್ತಾರೆ. ಯಕ್ಷಗಾನವನ್ನು ಈ ರೀತಿ ಬಳಕೆ ಮಾಡಬಾರದು ಎಂದು ತಿಮರೋಡಿ ಹೇಳಿದ್ದಾರೆ ಎಂದರು.
ತಿಮರೋಡಿ ಅವರಿಗೆ ಸುಮ್ಮನೆ ಇರಲು ಆಗುವುದಿಲ್ಲವೇ? ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕೀಲರು, ವೈಯಕ್ತಿಕ ಸಂಭಾಷಣೆಯನ್ನು ವ್ಯಾಪಕವಾಗಿ ಹಂಚಲಾಗಿದೆ ಎಂದರು. ಈ ಹಂತದಲ್ಲಿ ನ್ಯಾಯಪೀಠ, ಅದನ್ನು ಹಂಚಿದವರು ಯಾರು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರನ್ನು ಪ್ರಶ್ನಿಸಿತು. ಅದಕ್ಕೆ ಅವರು ತನಿಖೆ ನಡೆಯುತ್ತಿದೆ ಎಂದರು.
ಆಗ ನ್ಯಾಯಪೀಠ, ನೀವು ತನಿಖೆ ಮಾಡಿ, ಯಾರು ಹಂಚಿಕೆ ಮಾಡಿದರು ಅವರನ್ನು ಆರೋಪಿಯನ್ನಾಗಿ ಮಾಡೋಣ. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಹೇಳಿತು. ಬಿ.ಎನ್. ಜಗದೀಶ್ ಅವರು, ಬೇರೊಂದು ಪ್ರಕರಣದಲ್ಲಿ ಸಮನ್ವಯ ನ್ಯಾಯಪೀಠ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದ್ದು, ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಹೇಳಿದೆ ಎಂದರು.
ತಿಮರೋಡಿ ಪರ ವಕೀಲರು, ಅರ್ಜಿದಾರರ ವಿರುದ್ಧ ಗಡಿಪಾರು ಆದೇಶವಿದೆ. ಆದ್ದರಿಂದ, ತನಿಖೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಈಗ ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದೇವೆ. ನಿರೀಕ್ಷಣಾ ಜಾಮೀನು ಷರತ್ತಿನಲ್ಲೂ ಸಡಿಲಿಕೆ ಕೋರಿದ್ದೇವೆ ಎಂದರು.
ಅದಕ್ಕೆ ನ್ಯಾಯಪೀಠ, ಗಡಿಪಾರು ಆದೇಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ತನಿಖೆಗೆ ಹಾಜರಾಗಿ. ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶ ಮಾಡುತ್ತೇನೆ. ಯಾರು ಆಡಿಯೊ ಹಂಚಿಕೆ ಮಾಡಿದ್ದಾರೆ ಎಂಬುದು ಗೊತ್ತಾಗಬೇಕು ಎಂದು ಹೇಳಿತು.






