ರೇಣುಕಾಸ್ವಾಮಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ರದ್ದು ಕೋರಿ ಅರ್ಜಿ; ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್ ಪವನ್, ಧನರಾಜ್, ನಂದೀಶ್ ಮತ್ತು ವಿ. ವಿನಯ್ಗೆ ಜಾಮೀನು ಮಂಜೂರು ಮಾಡಿ ನಗರದ 56ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2024ರ ಡಿಸೆಂಬರ್ 23ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು (ರಾಜ್ಯ ಸರ್ಕಾರ) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಮಾರ್ಚ್ 6) ವಿಚಾರಣೆ ನಡೆಸಿತು.
ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ಪ್ರಕರಣವು ಅತ್ಯಂತ ಹೀನವಾಗಿದೆ. ನಟ ದರ್ಶನ್, ಪವಿತ್ರಾಗೌಡ ಸೇರಿ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ, ಆ ಏಳು ಮಂದಿ ಆರೋಪಿಗಳು ಮರಳಿ ಜೈಲು ಸೇರಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಈ ನಾಲ್ವರು ಆರೋಪಿಗಳಿಗೆ ಮಂಜೂರಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುಪ್ರಿಂಕೋರ್ಟ್ ಆದೇಶವಿರುವುದು ನಿಜ. ಆದರೆ, ಅರ್ಜಿದಾರರಿಗೆ ಜಾಮೀನು ರದ್ದುಪಡಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿ ಕುರಿತಂತೆ ಪರಿಶೀಲನೆ ನಡೆಸಬೇಕಿದೆ. ಅರ್ಜಿ ಸಂಬಂಧ ಆರೋಪಿಗಳ ಪರ ವಕೀಲರು ತಮ್ಮ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳಿತು.
ಮುಂದುವರಿದು, ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದೇನಿಲ್ಲ. ಕೋರ್ಟ್ ಮೆಟ್ಟಿಲೇರಿದ ಎಲ್ಲ ಕೊಲೆ ಪ್ರಕರಣಗಳನ್ನು ಒಂದೇ ರೀತಿ ತಾಳೆ ಹಾಕಲಾಗದು. ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಜಾಮೀನು ರದ್ದುಪಡಿಸಿದರೆ, ಸಂವಿಧಾನದಲ್ಲಿ ಕೊಡಮಾಡಲಾಗಿರುವ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದಿಲ್ಲವೇ? ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇರುತ್ತದೆ. ಜಾಮೀನು ರದ್ದತಿ ವಿಚಾರವವು ಮೂಲಭೂತ ಹಕ್ಕು ಆದ ಜೀವಿಸುವ ಹಕ್ಕಿಗೆ ಸಂಬಂಧಪಟ್ಟಿರುತ್ತದೆ ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ಜಾಮೀನು ಅರ್ಜಿಗಳ ಕುರಿತು ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಹೈಕೋರ್ಟ್ಗೆ ಇರುತ್ತದೆ. ಆದ ಮಾತ್ರಕ್ಕೆ ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾತಿ ಆದೇಶ ಎತ್ತಿಹಿಡಿಯಲಾಗುತ್ತದೆ ಎಂದರ್ಥವಲ್ಲ. ವಿಶೇಷವಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ನ್ಯಾಯಾಲಯವೂ ಅದರ ಪ್ರಭಾವಕ್ಕೂ ಒಳಗಾಗಬೇಕಿಲ್ಲ ಎಂದು ಮೌಖಿಕವಾಗಿ ಹೇಳಿತು.
ಅಂತಿಮವಾಗಿ ಅರ್ಜಿ ಕುರಿತು ಲಿಖಿತ ಆಕ್ಷೇಪಣೆ/ ವಾದಾಂಶ ಸಲ್ಲಿಸುವಂತೆ ಪ್ರತಿವಾದಿಯಾಗಿರುವ ನಾಲ್ವರೂ ಆರೋಪಿಗಳಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು.







