ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣ | ಭೂಮಿಯೊಳಗೆ ಬೆಲೆ ಬಾಳುವ ವಸ್ತುಗಳು ಸಿಕ್ಕರೆ ಅದು ಸರಕಾರದ ಆಸ್ತಿ : ಎಚ್.ಕೆ.ಪಾಟೀಲ್

ಬೆಂಗಳೂರು : ಭೂಮಿಯೊಳಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರಕಾರದ ಆಸ್ತಿ ಆಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿಯ ಒಳ ಯಾವುದೇ ಮೌಲ್ಯಯುತವಾದ ವಸ್ತುಗಳು ಸಿಕ್ಕರೆ ಅದು ಸರಕಾರದ್ದಾಗಿರುತ್ತದೆ. ಲಕ್ಕುಂಡಿಯಲ್ಲಿ ನಿಧಿ ಸಂಬಂಧ ಜಿಲ್ಲಾ ಆಡಳಿತ ಆ ಬಂಗಾರವನ್ನು ಖಜಾನೆಯಲ್ಲಿ ಭದ್ರವಾಗಿ ಇರಿಸಿದೆ. ಅದು ಆ ಕುಟುಂಬಕ್ಕೆ ಸೇರಿದ್ದಾ? ಆ ಜಾಗದ ಮೂಲ ಮಾಲಿಕರಿಗೆ ಸೇರಿದ್ದ? ಹಾಗೂ ರಾಷ್ಟ್ರ ಕೂಟರ ಕಾಲದ್ದಾ ಚಾಲುಕ್ಯರ ಕಾಲದ್ದಾ ಎಲ್ಲವೂ ಪರಿಶೀಲನೆ ಮಾಡಲಾಗುತ್ತದೆ ಎಂದರು.
ಕುಟುಂಬದ ಪ್ರಾಮಾಣಿಕತೆಯನ್ನು ನಾನು ಗೌರವಿಸುತ್ತೇವೆ. ಜತೆಗೆ, ಸರಕಾರದ ವತಿಯಿಂದಲೂ ಆ ಕುಟುಂಬವನ್ನು ಗೌರವಿಸುವ ಕೆಲಸ ಮಾಡುತ್ತೇವೆ. ಸಾಂದರ್ಭಿಕವಾಗಿ ಅವರಿಗೆ ಏನು ಗೌರವಿಸಬೇಕೋ ಅದನ್ನು ಗೌರವಿಸುತ್ತೇವೆ. ಇನ್ನೊಂದೆಡೆ, ಅದು ನಿಧಿ ಅಲ್ಲ ಕುಟುಂಬದ ಬಂಗಾರ ಎಂದು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.





