ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದ ಐಎಂಎಫ್ ನಿಯೋಗ

ಬೆಂಗಳೂರು, ಸೆ.6: ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್ ಡಿ.ಸಿ.ಯ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ನಿಯೋಗವು ವಾರ್ಷಿಕ ಆರ್ಟಿಕಲ್-4 ಸಮಾಲೋಚನೆಯ ಭಾಗವಾಗಿ ಶನಿವಾರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.
ಈ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ ನಿಯೋಗವು ಸ್ಥೂಲ ಆರ್ಥಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸರಕಾರಿ ಅಧಿಕಾರಿಗಳಿಗೆ ನೀತಿ ಸಲಹೆಗಳನ್ನು ನೀಡುತ್ತದೆ.
ರಾಜ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು, ಹಣಕಾಸಿನ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮಾನವ ಬಂಡವಾಳವನ್ನು ಬಲಪಡಿಸುವುದರೊಂದಿಗೆ, ಹವಾಮಾನ ಕೇಂದ್ರಿತ ನೀತಿಗಳನ್ನು ಮುಂದುವರಿಸುವ ಕುರಿತು ರಚನಾತ್ಮಕ ಸವಾಲುಗಳನ್ನು ಗುರಿಯಾಗಿರಿಸಿಕೊಂಡು ರಾಜ್ಯ ಮಟ್ಟದ ಉಪಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಯಿತು.
ಈ ವೇಳೆ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ಅಂತರ್ ರಾಷ್ಟ್ರೀಯ ಹಣಕಾಸು ನಿಧಿ ನಿಯೋಗದಲ್ಲಿ ಸಹಾಯಕ ನಿರ್ದೇಶಕ ಮತ್ತು ಮಿಷನ್ ಮುಖ್ಯಸ್ಥ ಹೆರಾಲ್ಡ್ ಫಿಂಗರ್, ಭಾರತದ ಹಿರಿಯ ನಿವಾಸಿ ಪ್ರತಿನಿಧಿ ರನಿಲ್ ಸಲ್ಗಾಡೊ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಹಿರಿಯ ಅರ್ಥಶಾಸ್ತ್ರಜ್ಞೆ ನುಜಿನ್ ಸುಫಾಫಿಫಟ್, ಅಂತರ್ರಾಷ್ಟ್ರೀಯ ಹಣಕಾಸು ನಿಧಿ ನಿಯೋಗದ ಅರ್ಥಶಾಸ್ತ್ರಜ್ಞೆ ಗೀತಿಕಾ ಡ್ಯಾಂಗ್ ಮತ್ತಿತರರು ಹಾಜರಿದ್ದರು.







