ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸುತ್ತೋಲೆ

ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ಹಾಗೂ ಬಂದೋಬಸ್ತ್ ವಹಿಸಬೇಕಾದ ಸೂಕ್ಷ್ಮ ಪ್ರದೇಶಗಳ ಕುರಿತು ರಾಜ್ಯ ಗುಪ್ತಚರ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.
ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಜಲಾಶಯಗಳು, ಉಪಗ್ರಹ ಕೇಂದ್ರಗಳು, ಜಲವಿದ್ಯುತ್ ಸ್ಥಾವರಗಳು, ಥರ್ಮಲ್ ಸ್ಥಾವರಗಳು, ಸಾಫ್ಟ್ ವೇರ್ ಕಂಪೆನಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಪೈಪ್ಲೈನ್ ಕೇಂದ್ರಗಳು, ಜನಸಂದಣಿ ಸೇರುವ ಶಾಫಿಂಗ್ ಮಾಲ್ಗಳು ಮತ್ತು ಸ್ಟಾರ್ ಹೋಟೆಲ್ಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಮತ್ತಿತರ ಕಟ್ಟಡಗಳು, ಭಾರೀ ಕೈಗಾರಿಕೆಗಳು, ದೇವಾಲಯಗಳು, ಮಸೀದಿ, ಚರ್ಚ್ಗಳು, ಮತ್ತಿತರೆ ಜನಸಂದಣಿ ಸೇರುವ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ವಹಿಸಬೇಕು ಎಂದು ಗುಪ್ತಚರ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಎಎಎಸ್ಸಿ ಚೆಕ್, ಮಾಕ್ ಡ್ರಿಲ್ಗಳನ್ನು ನಡೆಸುವಂತೆ ಹಾಗೂ ಈಗಾಗಲೇ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಭಯೋತ್ಪಾದಕ ಕೃತ್ಯಗಳಂತಹ ಪ್ರಕರಣಗಳಲ್ಲಿ ಭಾಗಿಯಾದವರು, ಶಿಕ್ಷೆಗೊಳಗಾದವರು, ಬಾಂಬ್ ತಯಾರಿಕೆ ಮತ್ತು ಬಾಂಬ್ ಬಳಸಿ ಭಯೋತ್ಪಾದನೆ ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ನಿಗಾ ವಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಸ್ಫೋಟಕಗಳು ಹಾಗೂ ಡಿಟೆನೊರೇಟರ್ಗಳಂತಹ ಉಪಕರಣಗಳ ತಯಾರು ಮಾಡುವ ಸ್ಥಳಗಳು, ಮೂಲಭೂತವಾದದ ಮುಖಾಂತರ ಸಮಾಜವನ್ನು ಭಯಭೀತರನ್ನಾಗಿ ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾದವರು, ಭಾರತದ ವಿರುದ್ಧ ಭಾಷಣಗಳ ಮತ್ತು ಘೋಷಣೆಗಳ ಮುಖಾಂತರ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುವವರು, ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹಂಚಿಕೊಳ್ಳುವಂತಹ ಪ್ರಕರಣಗಳಲ್ಲಿ ಭಾಗಿಯಾದವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವವರು, ಆಯಾ ನಗರ/ಜಿಲ್ಲೆಗಳಿಗೆ ಭೇಟಿ ನೀಡುವ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಮತ್ತು ಅವರು ತಂಗುವ ಸ್ಥಳ/ಹೋಟೆಲ್ ಸೇರಿದಂತೆ ಇತ್ಯಾದಿಗಳ ಮೇಲೆ ನಿಗಾ ವಹಿಸುವಂತೆ ಗುಪ್ತಚರ ಇಲಾಖೆಯ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.