ಅಂತರ್ಜಾತಿ ವಿವಾಹವಾದ ದಂಪತಿಗೆ ಪ್ರಭಾವಿಗಳಿಂದ ಕಿರುಕುಳ: ದಲಿತ ಸಂಘರ್ಷ ಸಮಿತಿ ಆರೋಪ
![ಅಂತರ್ಜಾತಿ ವಿವಾಹವಾದ ದಂಪತಿಗೆ ಪ್ರಭಾವಿಗಳಿಂದ ಕಿರುಕುಳ: ದಲಿತ ಸಂಘರ್ಷ ಸಮಿತಿ ಆರೋಪ ಅಂತರ್ಜಾತಿ ವಿವಾಹವಾದ ದಂಪತಿಗೆ ಪ್ರಭಾವಿಗಳಿಂದ ಕಿರುಕುಳ: ದಲಿತ ಸಂಘರ್ಷ ಸಮಿತಿ ಆರೋಪ](https://www.varthabharati.in/h-upload/2023/07/24/1172322-weddinh.webp)
Photo Credit- PTI
ಬೆಂಗಳೂರು, ಜು.24: ಅಂತರ್ಜಾತಿ ವಿವಾಹ ಮಾಡಿಕೊಂಡಿರುವ ಪರಿಶಿಷ್ಟ ಜಾತಿಯ ಅರಣ್ ಕುಮಾರ್ ಎಂಬುವವರಿಗೆ ತನ್ನ ಪತ್ನಿಯ ತವಮನೆಯವರ ಪ್ರಭಾವಿಗಳಿಂದ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ್, ‘ನಗರದ ಹೊರವಲಯದಲ್ಲಿರುವ ಜಿಗಣಿ ಹೋಬಳೀಯ ರಾಮಸಂದ್ರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅರಣ್ ಕುಮಾರ್ ಗೊಟ್ಟಿಗೆರೆ ಗ್ರಾಮದ ಯಾದವ ಸಮುದಾಯದ ಅರುಣ್ ಕುಮಾರಿ ಎಂಬುವವರನ್ನು 2012ರಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ಅರುಣ್ ಕುಮಾರಿ ತನ್ನ ತಂದೆಗೆ ಏಕೈಕ ಮಗಳಾಗಿದ್ದು, ಅಂತರ್ಜಾತಿಯ ವಿವಾಹವಾದ ಕಾರಣ ಅವರ ಪಿತ್ರಾರ್ಜಿತ ಆಸ್ತಿಯನ್ನು ಊರಿನ ಪ್ರಭಾವಿಗಳು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.
ಅರುಣ್ ಕುಮಾರಿ ಅವರ ತಂದೆಯು ಗೊಟ್ಟಿಗೆರೆಯಲ್ಲಿ ಎರಡು ನಿವೇಶನಗಳನ್ನು ಹೊಂದಿದ್ದಾರೆ. ಹಾಗೆಯೇ ಒಂದು ದೇವಾಸ್ಥಾನವನ್ನು ಕಟ್ಟಿದ್ದಾರೆ. ಅವರ ತಂದೆ ಮರಣ ಹೊಂದಿದ್ದು, ಅವರ ಆಸ್ತಿ ಮಗಳಿಗೆ ಬರಬೇಕು. ಆದರೆ ಗೊಟ್ಟಿಗೆರೆ ಗ್ರಾಮದ ಪ್ರಭಾವಿ ವ್ಯಕ್ತಿಯಾದ ಜಿ.ಕೆ.ರವಿ ಎಂಬುವವರು ಅರಣ್ ಕುಮಾರ್ ದಂಪತಿಗೆ ಬೆದರಿಕೆಯೊಡ್ಡಿ ಆಸ್ತಿಯನ್ನು ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಹಾಗಾಗಿ ಗೃಹ ಸಚಿವರು ಮಧ್ಯಪ್ರವೇಶಿಸಿ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಅರಣ್ ಕುಮಾರ್, ಅರುಣ್ ಕುಮಾರಿ ಸೇರಿದಂತೆ ಅವರ ಮಕ್ಕಳ ಉಪಸ್ಥಿರಿದ್ದರು.