ಜೈಲು ಶಿಕ್ಷೆ ವಿರುದ್ಧ ಹೈಕೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಮೇಲ್ಮನವಿ ಸಾಧ್ಯತೆ ?
►ಹಲವು ಪ್ರಥಮಗಳಿಗೆ ಕಾರಣವಾಗಲಿರುವ ಕ್ರಿಮಿನಲ್ ಮೇಲ್ಮನವಿ ಸಲ್ಲಿಕೆ

ಬೆಂಗಳೂರು : ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾದ ನಂತರ ಒಬ್ಬ ಜನಪ್ರತಿನಿಧಿಗೆ ಜೀವಾವಧಿ ಮತ್ತು ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವ ಏಕೈಕ ಪ್ರಕರಣವೆಂದರೆ ಅದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲಿರುವ ಅತ್ಯಾಚಾರ ಪ್ರಕರಣ.
ಮನೆಗೆಲಸದ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಮತ್ತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆ ಬಳಿಕ ಪ್ರಜ್ವಲ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿ ಖೈದಿಯಾಗಿದ್ದಾರೆ.
ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಈ ವಾರದಲ್ಲೇ ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮೇಲ್ಮನವಿ ಸಲ್ಲಿಸುವ ಕುರಿತು ತಮ್ಮ ವಕೀಲರ ಜೊತೆ ಪ್ರಜ್ವಲ್ ಒಂದೆರಡು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ ಎನ್ನಲಾಗಿದ್ದು, ವಕೀಲರು ಸಹ ಕ್ರಿಮಿನಲ್ ಮೇಲ್ಮನವಿ ಸಲ್ಲಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗೆ ಆದೇಶ ರದ್ದು ಕೋರಿ ಮಾಜಿ ಸಂಸದ ಪ್ರಜ್ವಲ್ ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದರೆ ಇದು ಇತಿಹಾಸದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಜನಪ್ರತಿನಿಧಿಯಾಗಿದ್ದಾತ ತನಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸುವ ಮೊದಲ ಕ್ರಿಮಿನಲ್ ಮೇಲ್ಮನವಿ ಮತ್ತು ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮೊದಲ ಮಾಜಿ ಜನಪ್ರತಿನಿಧಿ ಪ್ರಜ್ವಲ್ ರೇವಣ್ಣ ಆಗಲಿದ್ದಾರೆ.
ಪ್ರಜ್ವಲ್ ಮೇಲ್ಮನವಿ ಸಲ್ಲಿಸಿದರೆ ಅದನ್ನು ಹೈಕೋರ್ಟ್ ವಿಭಾಗೀಯ ಪೀಠವೇ ವಿಚಾರಣೆ ನಡೆಸಬೇಕಾಗುತ್ತದೆ. ಈವರೆಗೆ ಹೈಕೋರ್ಟ್ ನಲ್ಲಿ ಜನಪ್ರತಿನಿಧಿಗಳಿಗಾಗಿ ಏಕಸದಸ್ಯ ನ್ಯಾಯಪೀಠವಷ್ಟೇ ಕಾರ್ಯರ್ನಿಹಿಸಿದೆ. ಇನ್ನು, ಪ್ರಜ್ವಲ್ ರೇವಣ್ಣ ಕ್ರಿಮಿನಲ್ ಮೇಲ್ಮನವಿಸಿ ಸಲ್ಲಿಸಿದರೆ, ಅದರ ವಿಚಾರಣೆಗೆ ವಿಭಾಗೀಯ ಪೀಠ ರಚಿಸಬೇಕಾಗುತ್ತದೆ. ಅಂದರೆ ಆ ನ್ಯಾಯಪೀಠ ಮೊದಲ ಜನಪ್ರತಿನಿಧಿಗಳ ವಿಶೇಷ ವಿಭಾಗೀಯ ಪೀಠ ಆಗಲಿದೆ.
ಕರ್ನಾಟಕ ಹೈಕೋರ್ಟ್ ಕಾಯ್ದೆ-1961ರ ಪ್ರಕಾರ ಜೀವಾವಧಿ ಅಥವಾ ಮರಣದಂಡನೆಗೆ ವಿಧಿಸಿದ ಪ್ರಕರಣಗಳ ಸಂಬಂಧ ಸಲ್ಲಿಕೆಯಾಗುವ ಕ್ರಿಮಿನಲ್ ಮೇಲ್ಮನವಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಬೇಕಾಗುತ್ತದೆ. ಜೀವಾವಧಿಗಿಂತ ಕಡಿಮೆ ಅವಧಿ ಶಿಕ್ಷೆಯಾದ ಪ್ರಕರಣದಲ್ಲಿ ಏಕ ಸದಸ್ಯ ಪೀಠವು ವಿಚಾರಣೆ ನಡೆಸುತ್ತದೆ.
ಏನಿದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ?
ಹಾಲಿ ಮತ್ತು ಮಾಜಿ ಶಾಸಕರು, ಸಚಿವರ ಸಹಿತ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲು 2017ರಿಂದ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ನಂತರ ಹಲವು ರಾಜ್ಯಗಳಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಗಳಲ್ಲಿ ವಿಶೇಷ ಪೀಠಗಳನ್ನು 2023ರಲ್ಲಿ ಸ್ಥಾಪಿಸಲಾಯಿತು. ಅದರಂತೆ ರಾಜ್ಯದಲ್ಲಿ ವಿಚಾರಣಾ ನ್ಯಾಯಾಲಯಲ್ಲಿ ಎರಡು (ಮ್ಯಾಜಿಸ್ಟ್ರೇಟ್, ಸೆಷನ್ಸ್) ಮತ್ತು ಹೈಕೋರ್ಟ್ ನಲ್ಲಿ ಒಂದು ವಿಶೇಷ ಏಕಸದಸ್ಯ ನ್ಯಾಯಪೀಠವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವಾಗಿ ಸ್ಥಾಪಿಸಲಾಯಿತು.
ಸದ್ಯ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ಕೆ.ಮನ್ಮಥ ರಾವ್ ಅವರ ವಿಭಾಗೀಯ ಪೀಠದ ಮುಂದೆ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿರುವ ಕ್ರಿಮಿನಲ್ ಮೇಲ್ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಲಾಗಿದೆ. ಪ್ರಜ್ವಲ್ ಮೇಲ್ಮನವಿಯನ್ನೂ ಇದೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವ ಸಾಧ್ಯತೆ ಇದೆ. ಆಗ ಈ ನ್ಯಾಯಪೀಠವನ್ನು ಜನಪ್ರತಿನಿಧಿಗಳ ವಿಶೇಷ ವಿಭಾಗೀಯ ನ್ಯಾಯಪೀಠವಾಗಿ ಗೊತ್ತುಪಡಿಸಬೇಕಾಗುತ್ತದೆ. ಇಲ್ಲವೇ ಮತ್ತೊಂದು ವಿಭಾಗೀಯ ಪೀಠವನ್ನು ವಿಶೇಷ ಜನಪ್ರತಿನಿಧಿಗಳ ವಿಭಾಗೀಯ ಪೀಠವಾಗಿ ಗೊತ್ತುಪಡಿಸಿ ನೋಟಿಫಿಕೇಷನ್ ಮಾಡಬೇಕಾಗುತ್ತದೆ. ಆ ಪೀಠದ ಮಂದೆ ಪ್ರಜ್ವಲ್ ಅವರ ಮೇಲ್ಮನವಿಯನ್ನು ವಿಚಾರಣೆಗೆ ನಿಗದಿಪಡಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ.
ಜನಪ್ರತಿನಿಧಿಗೆ ವಿಧಿಸಿರುವ ಗರಿಷ್ಠ ಶಿಕ್ಷೆ?
ಈವರೆಗೆ ರಾಜ್ಯದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಒಬ್ಬ ಜನಪ್ರತಿನಿಧಿಗೆ ವಿಧಿಸಿರುವ ಗರಿಷ್ಠ ಶಿಕ್ಷೆ ಅಂದರೆ ಏಳು ವರ್ಷಗಳ ಸಜೆ.
ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2024ರ ಅ.24ರಂದು ಆದೇಶಿಸಿತ್ತು.
ಮತ್ತೊಂದು ಪ್ರಕರಣವೇನೆಂದರೆ ನಕಲಿ ವೇತನ ಪ್ರಮಾಣಪತ್ರ ಸಲ್ಲಿಸಿ ಬ್ಯಾಂಕಿನಿಂದ 7.17 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025ರ ಫೆ.6ರಂದು ಆದೇಶಿಸಿತ್ತು.
ಈ ಎರಡು ಪ್ರಕರಣಗಳಲ್ಲಿಯೂ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿದೆ.







