ನಾವು ಗೆದ್ದಾಗ ಮತಗಳ್ಳತನವೇ? : ಶೋಭಾ ಕರಂದ್ಲಾಜೆ ಪ್ರಶ್ನೆ

ಶೋಭಾ ಕರಂದ್ಲಾಜೆ
ಬೆಂಗಳೂರು: ಕಾಂಗ್ರೆಸ್ ಗೆದ್ದಾಗ ಮತಗಳ್ಳತನದ ಪ್ರಶ್ನೆ ಇಲ್ಲ. ತೆಲಂಗಾಣ ಗೆದ್ದಾಗ ಮತಗಳ್ಳತನ ಇಲ್ಲ. ನಾವು ಗೆದ್ದಾಗ ಮತಗಳ್ಳತನ. ಇದು ಯಾವ ರಾಜಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಇಂದು ಉತ್ತರಿಸಿದ ಅವರು, ಸಿದ್ದರಾಮಯ್ಯನವರೇ ನೀವು 135 ಸೀಟು ಹೇಗೆ ಗೆದ್ದಿದ್ದೀರಿ ? ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ, ಓಡಿ ಹೋಗಬೇಡಿ. ರಾಹುಲ್ ಗಾಂಧಿ ಮತ್ತು ನಿಮ್ಮ ಪಕ್ಷದ್ದು ಹಿಟ್ ಆಂಡ್ ರನ್ ಕೇಸ್ ಎಂದು ಟೀಕಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಹಾರದ ಜನತೆ ಕಾಂಗ್ರೆಸ್ಸನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದವರು, ಸತ್ತು ಹೋದವರು, ಎರಡು ಹೆಸರು ಇದ್ದ ಮತಗಳನ್ನು ರದ್ದು ಮಾಡಿದ್ದಾರೆ. ಇದರಲ್ಲಿ ತಪ್ಪೇನು? ಸಮಸ್ಯೆ ಇದ್ದಲ್ಲಿ ಅವತ್ತೇ ನಿಮ್ಮ ಏಜೆಂಟ್ ಅದನ್ನು ಪ್ರಶ್ನಿಸಬೇಕಿತ್ತಲ್ಲವೇ, ಈಗ ಎಸ್ಐಆರ್ ಸರಿ ಇಲ್ಲ, ಮತಗಳ್ಳತನ ನಡೆದಿದೆ, ಇವಿಎಂ ಸರಿ ಇಲ್ಲ ಎಂದು ಹೇಳಿದರೆ ಹೇಗೆ? ಸೋತ ಮೇಲೆ ಈ ಹೇಳಿಕೆ ಕೊಟ್ಟರೆ ನಿಮ್ಮನ್ನು ಯಾರೂ ನಂಬುವುದಿಲ್ಲ ಎಂದು ತಿಳಿಸಿದರು.





