ಕುರಿಗಾಹಿಗಳ ಮೇಲೆ ದೌರ್ಜನ್ಯ ನಡೆಸಿದರೆ ಜೈಲು ಶಿಕ್ಷೆ, ದಂಡ; ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ ವಿಧೇಯಕಕ್ಕೆ ಒಪ್ಪಿಗೆ

ಬೆಂಗಳೂರು: ರಾಜ್ಯದಲ್ಲಿನ ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಹಾಗೂ ಅವರ ಕ್ಷೇಮಾಭಿವೃದ್ಧಿಗಾಗಿ ‘ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ(ಕ್ಷೇಮಾಭಿವೃದ್ಧಿ ಕ್ರಮಗಳು ಹಾಗೂ ಅವರ ವಿರುದ್ಧ ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕ-2025’ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಗುರುವಾರ ವಿಧಾನಸಭೆ ಶಾಸಕ ರಚನೆ ಕಲಾಪದಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ವಿಧೇಯಕವನ್ನು ಮಂಡಿಸಿ ವಿವರಣೆ ನೀಡಿ, ‘ರಾಜ್ಯದಲ್ಲಿ 15 ಸಾವಿರ ಕುರಿಗಾಹಿಗಳು ನೊಂದಣಿ ಆಗಿದ್ದಾರೆ. ಈಗಾಗಲೇ ನಾಲ್ಕು ಸಾವಿರ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಮೂರು ವರ್ಷದಲ್ಲಿ 242 ಕುರಿಗಾಹಿಗಳ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ ಎಂದರು.
ಕುರಿಗಾಹಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದ ಸಂದರ್ಭದಲ್ಲಿ ಕುರಿಗಳನ್ನು ಹೊತ್ತುಕೊಂಡು ಹೋಗುವುದು, ದೌರ್ಜನ್ಯ ನಡೆಸುವುದು, ಅತ್ಯಾಚಾರ ಎಸಗುವ ಕೃತ್ಯಗಳು ಜರುಗಿವೆ. ಹೀಗಾಗಿ ಇಂತಹ ದೌರ್ಜನ್ಯ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಹೀಗಾಗಿ ಕುರಿಗಾಹಿಗಳ ಹಿತರಕ್ಷಣೆ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದು ವೆಂಕಟೇಶ್ ವಿವರಿಸಿದರು.
ಜೈಲು ಶಿಕ್ಷೆ, ದಂಡ:
ಅಲೆಮಾರಿ ಕುರಿಗಾಹಿಯು ನೋಂದಣಿ ಮಾಡಿಕೊಳ್ಳಬೇಕು. ಕೈಗೆಟಕುವ ಬೆಲೆಯಲ್ಲಿ ವಸತಿಗಾಗಿ ಭೂಮಿ ಮಂಜೂರಾತಿ, ಆರೋಗ್ಯವಿಮೆ, ಪಶುವಿಮೆ, ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳು, ಕೌಶಲ್ಯ ಉನ್ನತೀಕರಣ, ಆಹಾರ ಭದ್ರತೆ ಕಲ್ಪಿಸಲಾಗುವುದು. ಅಲ್ಲದೆ, ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆ, ಕುರಿಗಾಹಿಗಳ ಉತ್ಪನ್ನಗಳಿಗೆ ಮಾರಾಟ ಬೆಂಬಲ, ನಷ್ಟದ ಸಂದರ್ಭದಲ್ಲಿ ಪರಿಹಾರ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಯಾವುದೇ ಕಾನೂನಾತಕ ಆಧಾರವಿಲ್ಲದೆ, ಸಾರ್ವಜನಿಕ ಸ್ವತ್ತು, ಸರಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ ಪ್ರವೇಶಿಸುವುದನ್ನು ನಿರಾಕರಿಸಿದರೆ ಅಂತಹ ವ್ಯಕ್ತಿಯು 1 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಲಾಗುವುದು. ಮೀಸಲು ಅರಣ್ಯವನ್ನು ಇದರಿಂದ ಹೊರತಪಡಿಸಲಾಗಿದೆ.
ಕುರಿಗಾಹಿ ದಾರಿಗೆ ಅಡ್ಡಿ ಉಂಟು ಮಾಡುವ ವ್ಯಕ್ತಿಗೆ 2 ವರ್ಷಗಳ ಸೆರವಾಸ, 1ಲಕ್ಷ ರೂ.ದಂಡವಿದೆ. ಉದ್ದೇಶಪೂರ್ವಕವಾಗಿ ಕುರಿಗಾಯಿಯನ್ನು ಅವಮಾನಿಸಿದರೆ, ನಿಂದಿಸಿದರೆ 6 ತಿಂಗಳ ಅವಧಿಯ, 5 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಕುರಿಗಾಹಿ ಮರಣಕ್ಕೆ ಕಾರಣವಾಗುವ ವ್ಯಕ್ತಿಯನ್ನು ಜಾರಿಯಲ್ಲಿರುವ ಸಂಬಂಧಪಟ್ಟ ಕ್ರಿಮಿನಲ್ ಕಾನೂನಿನಡಿ ದಂಡಿಸಲಾಗುತ್ತದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಎಂಎಸ್ ಕಾಯ್ದೆಯಡಿ ದಂಡಿಸಲಾಗುತ್ತದೆ. ಕುರಿಗಾಹಿಯು ನ್ಯಾಯಿಕ ನೆರವನ್ನು ಪಡೆಯುವುದರಿಂದ ತಡೆಯುವ ವ್ಯಕ್ತಿಗೆ 2ವರ್ಷಗಳ ಸೆರೆವಾಸ, 50 ಸಾವಿರ ರೂ.ದಂಡ ವಿಧಿಸಲಾಗುತ್ತದೆ. ಪ್ರಾಧಿಕಾರದ ಗಮನಕ್ಕೆ ತರದೆ ಕುರಿಗಾಹಿಯಿಂದ ಹಾನಿಗಳನ್ನು ಕ್ಲೈಮ್ ಮಾಡುವ ವ್ಯಕ್ತಿಗೆ 3 ವರ್ಷ ಅವಧಿಯ ಸೆರೆವಾಸ ಮತ್ತು 1ಲಕ್ಷ ರೂ.ದಂಡ ವಿಧಿಸುವುದನ್ನು ವಿಧೇಯಕ ಪ್ರಸ್ತಾಪಿಸಿದೆ.
ವಿಧೇಯಕ ಬೆಂಬಲಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಅಲೆಮಾರಿ ಕುರಿಗಾಹಿಗಳಿಗೆ ಮಳೆಯಲ್ಲಿ ರಕ್ಷಣೆ ಪಡೆಯಲು ಟೆಂಟ್ಗಳನ್ನು ನೀಡಬೇಕು. ಜೊತೆಗೆ ಅವರಿಗೆ ಕಾನೂನು ನೆರವು ಒದಗಿಸಬೇಕು, ದೌರ್ಜನ್ಯ ಎಸಗುವರನ್ನು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಮಾತನಾಡಿದರು. ಆ ಬಳಿಕ ಸ್ಪೀಕರ್ ಖಾದರ್, ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.







