ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ: 5 ಕೋಟಿ ರೂ. ವ್ಯಾಜ್ಯ ಶುಲ್ಕ ಪಾವತಿಸಲು ತಮಿಳುನಾಡು ಸರಕಾರಕ್ಕೆ ಸೂಚನೆ

Photo: ಜಯಲಲಿತ(PTI)
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿ ಜಪ್ತಿ ಮಾಡಿರುವ ವಿವರಗಳನ್ನು ಬೆಂಗಳೂರು ವಿಶೇಷ ಕೋರ್ಟ್ ಗೆ ಎಸ್ಪಿಪಿ ಕಿರಣ್ ಎಸ್. ಜವಳಿ ಅವರು ಸಲ್ಲಿಸಿದರು. ಅದರಂತೆ, ವ್ಯಾಜ್ಯ ಶುಲ್ಕವಾಗಿ ಡಿಡಿ ರೂಪದಲ್ಲಿ ಕರ್ನಾಟಕ ಸರಕಾರಕ್ಕೆ ಐದು ಕೋಟಿ ರೂ.ಪಾವತಿಸುವಂತೆ ತಮಿಳುನಾಡು ಸರಕಾರಕ್ಕೆ ವಿಶೇಷ ಕೋರ್ಟ್ ಆದೇಶಿಸಿದೆ.
ಜಯಲಲಿತಾ ಅವರಿಗೆ ಸೇರಿದ ಒಡವೆ ತನ್ನ ವಶದಲ್ಲಿರುವ ಹಿನ್ನೆಲೆ ಒಡವೆ ಹರಾಜು ಬದಲು ತಮಿಳುನಾಡು ಸರಕಾರಕ್ಕೆ ಹಸ್ತಾಂತರ ಮಾಡಲು ವಿಶೇಷ ಕೋರ್ಟ್ ನಿರ್ಧಾರ ಮಾಡಿದೆ.
ಅಲ್ಲದೆ, ತಮಿಳುನಾಡಿನ ಗೃಹ ಕಾರ್ಯದರ್ಶಿ ಪೊಲೀಸರೊಂದಿಗೆ ಕೋರ್ಟ್ ಗೆ ಹಾಜರಾಗಬೇಕು. ಒಡವೆಗಳನ್ನು ಗುರುತಿಸಿ ಸರಕಾರದ ಸುಪರ್ದಿಗೆ ಪಡೆದುಕೊಳ್ಳುವಂತೆ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಮೋಹನ್ ಅವರು ಸೂಚಿಸಿದ್ದಾರೆ.
1996ರಲ್ಲಿ ಜಯಲಲಿತಾ ಅವರು ಅಕ್ರಮ ಆಸ್ತಿಗಳಿಸಿದ್ದಾರೆಂಬ ಆರೋಪದಲ್ಲಿ ಸಿಬಿಐ ದಾಳಿ ನಡೆಸಿದ್ದರು. 1997ರಲ್ಲಿ ಪ್ರಕರಣದ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗುವ ಮುನ್ನವೇ ಜಯಲಲಿತಾ ಅವರು 2016 ರಲ್ಲಿ ಮೃತಪಟ್ಟಿದ್ದರು.
ಜಯಲಲಿತಾ ಅವರು 1991ರಿಂದ 1996 ನಡುವೆ ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಕೇಳಿಬಂದಿತ್ತು. ಚೆನ್ನೈನಲ್ಲಿ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದರು. ಹೈದರಾಬಾದ್ ಬಳಿ ಫಾರ್ಮ್ ಹೌಸ್, ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಭಾರಿ ಚಹಾ ತೋಟ, ಬೆಲೆಬಾಳುವ ಆಭರಣ, ಕಾರ್ಖಾನೆಗಳು, ಬ್ಯಾಂಕ್ ಖಾತೆಗಳಲ್ಲಿ ಸಂಪತ್ತು ಕ್ರೋಡೀಕರಣ, ಐಷಾರಾಮಿ ಕಾರುಗಳನ್ನು ಹೊಂದಿದ್ದರು.







