ಬೆಳಗಾವಿ ಅಧಿವೇಶನದಲ್ಲಿ ಭತ್ಯೆ, ಊಟ, ಕಾಫಿಯೂ ಬೇಡ: ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್

ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ, ಊಟ, ಕಾಫಿ ಸ್ವೀಕರಿಸುವುದಿಲ್ಲ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಹೇಳಿದ್ದಾರೆ.
ಮಂಗಳವಾರ ಈ ಕುರಿತು ಪತ್ರ ಬರೆದಿರುವ ಅವರು, ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ. ಆದರೆ ನಮಗೆ ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕಳೆದ ಬಾರಿ ನಡೆದ ಚಳಿಗಾಲದ ಅಧಿವೇಶನದ ವೇಳೆ ನಾನು ಕಲಾಪದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದಂತೆಯೇ ಈ ಬಾರಿಯೂ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಸರಕಾರ ನನಗೆ ನೀಡುವ ಯಾವುದೇ ತರಹದ ಭತ್ಯೆ (ಟಿಎ, ಡಿಎ) ಪಡೆಯುವುದಿಲ್ಲ. ವಸತಿ ವ್ಯವಸ್ಥೆ ಪಡೆಯುದಿಲ್ಲ ಮತ್ತು ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪ್ರಮುಖ ಧ್ವನಿಯಾಗಲು ಬೆಳಗಾವಿಯಲ್ಲಿ 25 ರಿಂದ 30 ಕೋಟಿ ರೂ.ವೆಚ್ಚ ಮಾಡಿ ಪ್ರತಿ ವರ್ಷವು ನಡೆಸುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ವೈಯಕ್ತಿಕ ಅಭಿಪ್ರಾಯ ನನ್ನದು. ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಸರಕಾರ ತೆಗೆದುಕೊಂಡ ನಿರ್ಧಾರಗಳು ಏನು ಎಂಬ ಬಗ್ಗೆ ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೇವಲ ಚರ್ಚೆ. ಮಾತುಗಳಿಂದ ಜನರ ಕಲ್ಯಾಣ ಅಸಾಧ್ಯ ಮತ್ತು ಕಟುಸತ್ಯವು ಹೌದು. ಇದು ಒಂದು ರೀತಿ ಕಾಲಹರಣ ಮಾಡಿದಂತೆಯೇ ಆಗುತ್ತಿದೆ ಮತ್ತು ಎರಡು ವಾರ ಪ್ರವಾಸ ಬಂದತೆಯೇ ಆಗುತ್ತಿದೆ ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇತ್ತೀಚಿಗೆ ಸತತ ಮಳೆ ಮತ್ತು ಪ್ರವಾಹ ಬಂದು ಲಕ್ಷಾಂತರ ರೈತರ ಕೋಟ್ಯಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದರೂ ಇಂದಿಗೂ ಸರಕಾರ ಒಂದು ನೈಯಾ ಪೈಸೆ ಬಿಡುಗಡೆ ಮಾಡಿಲ್ಲ.ಸಮಸ್ತ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು, ಬಡುವರು, ಕಾರ್ಮಿಕರು ಮತ್ತು ಜನ ಸಾಮಾನ್ಯರು ಹತ್ತು, ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ನಮ್ಮ ಪ್ರತಿನಿಧಿಯಾಗಿ ಶಾಸಕರೆಂಬ ಪಟ್ಟ ಹೊತ್ತು ವಿಧಾನಸಭೆ ಹೋಗಿರುವ ಎಂಎಲ್ಎ ಸಾಹೇಬರು ಕ್ಷೇತ್ರದ, ತಾಲೂಕಿನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಹೊಸ, ಹೊಸ ಕೆಲಸಗಳು ಮಾಡುವ ಮೂಲಕ ಕನಸು ನನಸು ಮಾಡುತ್ತಾರೆಂಬ ಭರವಸೆ ಹೊಂದಿದ್ದಾರೆ. ಆದರೆ, ನಾವಿಲ್ಲಿ ಸಮಯ ಸಿಕ್ಕರೆ ಬರಿ ಮಾತಾಡಿ ಕಾಡಿ, ಬೇಡಿ ಹೋಗುವುದೇ ಆಗುತ್ತಿದೆ. ಹೀಗಾಗಿ ಇಂತಹ ವೇಳೆ ಸರಕಾರ ನೀಡುವ ಈ ಅಧಿವೇಶನದ ವೇಳೆಯ ಯಾವುದೇ ತರಹದ ಸೌಲಭ್ಯ ಪಡೆಯದಿರಲು ಹಿಂದೆ ಹೇಳಿದಂತೆಯೇ ನಿರ್ಧಾರ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.







