ಗುತ್ತಿಗೆ ಕಾಮಗಾರಿಗಳಲ್ಲಿ ಅವ್ಯವಹಾರ ಪ್ರಕರಣ: ಸಿಎಂಗೆ ತನಿಖಾ ವರದಿ ಸಲ್ಲಿಸಿದ ನ್ಯಾ.ನಾಗಮೋಹನದಾಸ್ ಆಯೋಗ

ಬೆಂಗಳೂರು: ಗುತ್ತಿಗೆ ಕಾಮಗಾರಿಗಳ ಅವ್ಯವಹಾರ ಮತ್ತು ನಾರಾಯಣಪುರ ಅಣೆಕಟ್ಟು ಆಧುನೀಕರಣ ಅಂದಾಜು ಪಟ್ಟಿಯ ಅಕ್ರಮಗಳ ಕುರಿತಾದ ಪ್ರತ್ಯೇಕ ತನಿಖಾ ವರದಿಗಳನ್ನು ನ್ಯಾ.ಎಚ್. ಎನ್.ನಾಗಮೋಹನದಾಸ್ ವಿಚಾರಣಾ ಆಯೋಗವು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ರಾಜ್ಯ ಗುತ್ತಿಗೆದಾರರ ಸಂಘವು ಸರಕಾರದ ಟೆಂಡರ್ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಕಮಿಷನ್ ಚಾಲ್ತಿಯಲ್ಲಿದೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾ.ಎಚ್.ಎನ್.ನಾಗಮೋಹನದಾಸ್ ವಿಚಾರಣಾ ಆಯೋಗವು ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಅಧ್ಯಯನ ಮಾಡಿ ತನಿಖೆ ನಡೆಸಿ ವರದಿಯನ್ನು ನೀಡಿದೆ.
ಮತ್ತೊಂದೆಡೆ, ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಅಣೆಕಟ್ಟು ಆಧುನೀಕರಣ ಅಂದಾಜು ಪಟ್ಟಿಯ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ಸರಕಾರದ ಕಾರ್ಯದರ್ಶಿ ಸಿದ್ದಗಂಗಪ್ಪರವರ ಅಧ್ಯಕ್ಷತೆಯಲ್ಲಿ ರಚಿಸಿದ ತಾಂತ್ರಿಕ ತಜ್ಞರ ಸಮಿತಿಯನ್ನು ವಿಸರ್ಜಿಸಿ ವಿಚಾರಣಾ ಆಯೋಗಕ್ಕೆ ಹೆಚ್ಚುವರಿಯಾಗಿ ವಹಿಸಿರುವ ತನಿಖೆಯನ್ನು ನ್ಯಾ.ಎಚ್.ಎನ್.ನಾಗಮೋಹನದಾಸ್ ವಿಚಾರಣಾ ಆಯೋಗವು ನಡೆಸಿ ತನಿಖಾ ವರದಿಯನ್ನು ಇದೀಗ ಸರಕಾರಕ್ಕೆ ಸಲ್ಲಿಸಿದೆ.