ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿ ನೈಜವಾಗಿದೆ : ಕಮಲ್ ಹಾಸನ್

ಕಮಲ್ ಹಾಸನ್ | PC: x/@ikamalhaasan
ಬೆಂಗಳೂರು : ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡಿಗರ ಅಪಾರ ಪ್ರೀತಿಯನ್ನು ನಾನು ಆನಂದಿಸಿದ್ದೇನೆ. ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿ ನೈಜವಾಗಿದೆ ಎಂದು ಎಂದು ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್ಸಿಸಿ) ಅಧ್ಯಕ್ಷ ನರಸಿಂಹಲು ಎಂ. ಅವರು ಮೇ 30ರಂದು ಕಮಲ್ ಹಾಸನ್ಗೆ ಪತ್ರ ರವಾನಿಸಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳವಾರದಂದು ಕಮಲ್ ಹಾಸನ್ ಕೆಎಫ್ಸಿಸಿ ಅಧ್ಯಕ್ಷ ನರಸಿಂಹಲು ಅವರಿಗೆ ಪತ್ರ ಬರೆದಿದ್ದಾರೆ.
ತಮಿಳಿನಂತೆಯೇ, ಕನ್ನಡಕ್ಕೆ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಇದನ್ನು ನಾನು ಬಹಳ ವರ್ಷಗಳಿಂದ ಮೆಚ್ಚಿಕೊಂಡಿದ್ದೇನೆ. ಹಾಗೆಯೇ ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಸಮತೋಲನವು ಭಾರತದ ಭಾಷಾ ಸಾಮರಸ್ಯವನ್ನು ದುರ್ಬಲಗೊಳಿಸಲಿದ್ದು, ಎಲ್ಲ ಭಾರತೀಯ ಭಾಷೆಗಳಿಗೆ ಸಮನಾದ ಗೌರವ ನೀಡಬೇಕು ಎಂಬ ಆಶಯವನ್ನು ನಾನು ಹೊಂದಿದ್ದೇನೆ. ಜೊತೆಗೆ ಒಂದು ಭಾಷೆಯ ಮೇಲೆ ಮತ್ತೊಂದರ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ತಮಿಳು, ಕನ್ನಡ, ತೆಲುಗು, ಮಲಯಾಳ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯ ಶಾಶ್ವತವಾಗಿದೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
ಸಿನಿಮಾ, ನನಗೆ ಗೊತ್ತಿರುವ ಹಾಗೂ ನಾನು ಮಾತನಾಡುವ ಭಾಷೆ. ಸಿನಿಮಾ ಎನ್ನುವುದು ಒಂದು ಸಾರ್ವತ್ರಿಕ ಭಾಷೆ ಹಾಗೂ ಇದಕ್ಕೆ ಪ್ರೀತಿ ಹಾಗೂ ಬಾಂಧವ್ಯವೊಂದೇ ತಿಳಿದಿದೆ. ನನ್ನ ಮಾತುಗಳು ನಮ್ಮೊಳಗೆ ಆ ಬಾಂಧವ್ಯ, ಐಕ್ಯತೆ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕಾಗಿತ್ತು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ನನ್ನ ಹಿರಿಯರು ನನಗೆ ಕಲಿಸಿದ ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ. ಇದೇ ಪ್ರೀತಿ ಮತ್ತು ಬಾಂಧವ್ಯದಿಂದಲೇ ಶಿವಣ್ಣ ಆಡಿಯೊ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿದ್ದರು. ಈ ವಿವಾದದ ಕಾರಣದಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು ಎಂದು ನನಗೆ ನಿಜವಾಗಿಯೂ ವಿಷಾದವಿದೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ಗೌರವ ಯಾವಾಗಲೂ ಉಳಿಯುತ್ತದೆ. ಈಗ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ಜನರ ನಡುವಿನ ಸೇತುವೆಯಾಗಿ ಉಳಿಯಬೇಕೇ ವಿನಾಃ ಅವರನ್ನು ವಿಭಜಿಸುವ ಗೋಡೆಯಾಗಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು. ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ಹಗೆತನಕ್ಕೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ನನ್ನ ಮಾತುಗಳ ಹಿಂದಿದ್ದ ಅರ್ಥವನ್ನು ಅರಿತು ಅದನ್ನು ಸ್ವೀಕರಿಸುತ್ತಾರೆ ಎನ್ನುವ ಭರವಸೆ ಇದೆ. ಈ ತಪ್ಪು ತಿಳಿವಳಿಕೆ ತಾತ್ಕಾಲಿಕವಾಗಿದ್ದು, ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವದ ಬಗ್ಗೆ ಪುನರುಚ್ಚರಿಸಲು ಇದು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ನಟ ಕಮಲ್ ಹಾಸನ್ ಪತ್ರದಲ್ಲಿ ಬರೆದಿದ್ದಾರೆ.
'ಥಗ್ಲೈಫ್' ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ನೈಜ ವಾತ್ಸಲ್ಯದಿಂದ ಡಾ.ರಾಜ್ಕುಮಾರ್ ಕುಟುಂಬದ ಬಗ್ಗೆ ಅದರಲ್ಲೂ ಶಿವರಾಜ್ಕುಮಾರ್ ಅವರ ಬಗ್ಗೆ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದು ನನಗೆ ನೋವುಂಟು ಮಾಡಿದೆ. ನಾವೆಲ್ಲರೂ ಒಂದೇ ಹಾಗೂ ಒಂದೇ ಕುಟುಂಬದವರು ಎಂದು ತಿಳಿಸಲು ನನ್ನ ಮಾತುಗಳಿದ್ದವೇ ಹೊರತು ಕನ್ನಡವನ್ನು ಕೆಳಮಟ್ಟದಲ್ಲಿ ನೋಡುವುದಕ್ಕಾಗಿರಲಿಲ್ಲ. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ತಕರಾರು ಅಥವಾ ಚರ್ಚೆ ಇಲ್ಲ.
- ಕಮಲ್ ಹಾಸನ್, ನಟ







