ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕ ಕಾಂಗ್ರೆಸ್ ಶಾಸಕರ ಭೇಟಿ

ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೇ ಸಚಿವ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಲು ದಿಲ್ಲಿಗೆ ತೆರಳಿದ್ದ ಕರ್ನಾಟಕದ ಕಾಂಗ್ರೆಸ್ ಶಾಸಕರುಗಳಿಗೆ ಹೈಕಮಾಂಡ್ ವರಿಷ್ಠರು ಭೇಟಿಗೆ ಸಿಗದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, "ಆಯೋಧ್ಯೆಯಲ್ಲಿ ಶ್ರೀರಾಮನನ್ನು ನೋಡಬೇಕೆಂಬ ಬಯಕೆ ಇತ್ತು. ರಾಮನ ಆಶೀರ್ವಾದ ಪಡೆದುಕೊಳ್ಳಲು 15 ಜನ ಶಾಸಕರು ಬಂದಿದ್ದೇವೆ. ಶ್ರೀರಾಮನ ವಿಗ್ರಹವನ್ನು ಕೆತ್ತಿದವರು ಮೈಸೂರಿನ ಅರುಣ್ ಯೋಗಿರಾಜ್, ಇದು ತುಂಬಾ ಖುಷಿಯ ವಿಚಾರ. ಕರ್ನಾಟಕ ಅಂದರೆ ಹನುಮಂತನ ಜಾಗ, ಹೀಗಾಗಿ ಉತ್ತರ ಪ್ರದೇಶ ಜೊತೆಗೆ ಇರುವ ಸಂಬಂಧವನ್ನು ನಾವು ಊಹೆ ಮಾಡಲು ಸಾಧ್ಯವಿಲ್ಲ." ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಖುದ್ದು ಭೇಟಿ ಮಾಡಿದ್ದ ಶಾಸಕರಾದ ಅಶೋಕ್ ಪಟ್ಟಣ್, ಬೇಳೂರು ಗೋಪಾಲಕೃಷ್ಣ, ಟಿ.ಬಿ.ಜಯಚಂದ್ರ, ಪುಟ್ಟರಂಗ ಶೆಟ್ಟಿ, ಷಡಕ್ಷರಿ ಸೇರಿ ಹಿರಿಯ ಶಾಸಕರು, ‘ಸಚಿವ ಸಂಪುಟದಲ್ಲಿ ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದರು.
ಅಲ್ಲದೆ, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ 2028ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರಿಯಾಗಲಿದೆ ಎಂದು ಶಾಸಕರು ಕೋರಿದ್ದರು ಎನ್ನಲಾಗಿದೆ.




