ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ; ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ!

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿರುವುದು, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಿದೆ. ನೂತನ ವರ್ಷದ ಮೊದಲ ಅಧಿವೇಶನವು ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದಿಂದ ಆರಂಭಗೊಳ್ಳುತ್ತದೆ.
ವಿಧಾನ ಮಂಡಲದ ಅಧಿವೇಶನ ನಾಳೆ(ಜ.22)ಯಿಂದ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ಸರಕಾರ ಸಿದ್ಧಪಡಿಸಿರುವ ಭಾಷಣದಲ್ಲಿನ 11 ಪ್ಯಾರಾಗಳ ಬಗ್ಗೆ ರಾಜ್ಯಪಾಲ ಆಕ್ಷೇಪಣೆ ವ್ಯಕ್ತಪಡಿಸಿರುವುದು ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮಾದರಿಯಲ್ಲೆ ಕರ್ನಾಟಕದಲ್ಲೂ ಸರಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಸರಕಾರ ಸಿದ್ಧಪಡಿಸಿದ ಭಾಷಣದ ಕುರಿತು ತಾವು ಬೊಟ್ಟು ಮಾಡಿರುವ ಅಂಶಗಳನ್ನು ಕೈಬಿಡದಿದ್ದರೆ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವುದಿಲ್ಲ ಎಂದು ರಾಜ್ಯಪಾಲರ ಕಚೇರಿಯಿಂದ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಂದೇಶ ತಲುಪುತ್ತಿದ್ದಂತೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿದ್ದ ನಿಯೋಗವು ಲೋಕಭವನಕ್ಕೆ ತೆರಳಿ, ರಾಜ್ಯಪಾಲರ ಮನವೋಲಿಕೆ ಪ್ರಯತ್ನ ನಡೆಸಿತು.
ಅಲ್ಲದೇ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಸಂಪ್ರದಾಯದಂತೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸುವಂತೆ ರಾಜ್ಯಪಾಲರಿಗೆ ಇದೇ ಸಂದರ್ಭದಲ್ಲಿ ಆಹ್ವಾನ ನೀಡಿ, ಮನವೊಲಿಸಲು ಪ್ರಯತ್ನಿಸಿದರು.
ರಾಜ್ಯ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಸಾಮಾನ್ಯವಾಗಿ ಜಂಟಿ ಅಧಿವೇಶನದಲ್ಲಿ ಓದುವುದು ಶಿಷ್ಟಾಚಾರ. ಆ ಭಾಷಣದಲ್ಲಿ ಏನಾದರೂ ವಿವಾದಾತ್ಮಕ ಅಂಶಗಳಿದ್ದರೆ ಮಾತ್ರ ಸರಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಲೋಕಭವನ ಅಧಿಕಾರಿಗಳು ವಿವರಣೆ ಪಡೆಯುತ್ತಾರೆ. ಶಿಷ್ಟಾಚಾರದ ಅನ್ವಯ ರಾಜ್ಯಪಾಲರು, ಸರಕಾರ ಸಿದ್ದಪಡಿಸಿದ ಭಾಷಣವನ್ನೆ ಯಥಾವತ್ತಾಗಿ ಓದಬೇಕೆಂಬ ನಿಯಮವೂ ಇಲ್ಲ.
ರಾಜ್ಯಪಾಲರಿಗೆ ಯಾವುದಾದರೂ ವಿಷಯದ ಬಗ್ಗೆ ಸಂದೇಹ ಅಥವಾ ವಿವಾದಾತ್ಮಕ ಅಂಶಗಳಿದ್ದರೆ ಅದನ್ನು ತೆಗೆದು ಹಾಕಲು ಸರಕಾರಕ್ಕೆ ಸೂಚನೆಯನ್ನು ನೀಡಬಹುದು. ಇಲ್ಲವಾದರೆ ಆ ಭಾಷಣವನ್ನು ಓದಬಹುದು ಅಥವಾ ಓದದೆಯೂ ಇರಬಹುದು. ಅದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ. ಸರಕಾರದ ಒದಗಿಸಿದ ಭಾಷಣವನ್ನು ಓದಬೇಕೆಂದು ರಾಜ್ಯಪಾಲರ ಮೇಲೆ ಒತ್ತಡ ಹೇರುವಂತಿಲ್ಲ.
ಇತ್ತೀಚೆಗೆ ಕೇಂದ್ರ ಸರಕಾರ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ‘ವಿಬಿ-ಜಿ ರಾಮ್ ಜಿ’ ಎಂದು ಮರು ನಾಮಕರಣ ಮಾಡಿ, ಗ್ರಾಮ ಪಂಚಾಯತಿಗಳ ಅಧಿಕಾರ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಹಂಚಿಕೆ ಪ್ರಮಾಣವನ್ನು ಪರಿಷ್ಕರಿಸಿರುವುದನ್ನು ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ಕರೆ ಕೊಟ್ಟಿದೆ.
ಆಕ್ಷೇಪ: ಮನರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ-ಜಿ ರಾಮ್ ಜಿ’ ತಿದ್ದುಪಡಿಗೆ ಖಂಡನಾ ನಿರ್ಣಯ ಕೈಗೊಳ್ಳಬೇಕೆಂಬ ರಾಜ್ಯ ಸರಕಾರದ ತೀರ್ಮಾನಕ್ಕೆ ರಾಜ್ಯಪಾಲ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿನ 11 ಪ್ಯಾರಾಗಳನ್ನು ಕೈಬಿಡಬೇಕು ಎಂದು ಸಚಿವ ಎಚ್.ಕೆ.ಪಾಟೀಲ್ ನಿಯೋಗಕ್ಕೆ ರಾಜ್ಯಪಾಲ ಗೆಹ್ಲೋಟ್ ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಭಾಷಣವನ್ನು ಅಂತಿಮಗೊಳಿಸುವ ಅಧಿಕಾರವನ್ನು ಸಚಿವ ಸಂಪುಟವು, ಮುಖ್ಯಮಂತ್ರಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಆಕ್ಷೇಪಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ಲೋಕಭವನಕ್ಕೆ ತಿಳಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸರಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷವು ಜಂಟಿ ಅಧಿವೇಶನದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
‘ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸರಕಾರ ಕಳುಹಿಸಿಕೊಟ್ಟಿರುವ ಭಾಷಣದಲ್ಲಿನ ಕೆಲವು ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿ ಸೂಚಿಸಿರುವಂತೆ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ರಾಜ್ಯಪಾಲರು ಆಕ್ಷೇಪಣೆ ವ್ಯಕ್ತಪಡಿಸಿರುವ ಅಂಶಗಳ ಕುರಿತು, ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ರಾಜ್ಯಪಾಲರಿಗೆ ಸರಕಾರದ ನಿಲುವು ತಿಳಿಸುತ್ತೇವೆ. ರಾಜ್ಯಪಾಲರೇ ಅಧಿವೇಶನ ಕರೆದಿರುವುದರಿಂದ, ಅವರು ಗೈರು ಹಾಜರಾಗಲು ಆಗುವುದಿಲ್ಲ’
-ಎಚ್.ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ನಿಯಮಾವಳಿಗಳೇನು?
► ರಾಜ್ಯಪಾಲರ ಕಡ್ಡಾಯ ಕರ್ತವ್ಯಗಳಲ್ಲಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಬೇಕು.
► ಸಂವಿಧಾನದ ಕಲಂ 176(1)ರ ಪ್ರಕಾರ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಬೇಕು.
► ಭಾಷಣದ ಕುರಿತು ರಾಜ್ಯಪಾಲ ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ.
► ಪ್ರತಿ ವರ್ಷ ಮೊದಲ ಅಧಿವೇಶನ ಹಾಗೂ ಹೊಸ ಸರಕಾರ ರಚನೆಯಾದಾಗ ಮೊದಲ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಭಾಷಣ ಮಾಡಬೇಕು.
ಸರಕಾರದ ಮುಂದಿರುವ ಆಯ್ಕೆಗಳೇನು?
► ಸಂವಿಧಾನದ ಪ್ರಕಾರ ರಾಜ್ಯಪಾಲ ಭಾಷಣವನ್ನು ಓದಲೇಬೇಕು ಎಂದು ವಾದಿಸುವುದು.
► ಸರಕಾರದ ಮನವೊಲಿಕೆಗೆ ರಾಜ್ಯಪಾಲ ಒಪ್ಪದಿದ್ದರೆ ತುರ್ತು ಸಚಿವ ಸಂಪುಟ ಸಭೆ ಕರೆದು, ಕೆಲ ಕಾಲ ವಿಶೇಷ ಅಧಿವೇಶನ ಮುಂದೂಡುವುದು.
► ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಂಡು, ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದು.
► ರಾಜ್ಯಪಾಲರ ನಡೆ ವಿರೋಧಿಸಿ ರಾಷ್ಟ್ರಪತಿಗೆ ದೂರು ನೀಡುವುದು.
► ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ನಡೆಸಬಹುದು.







