‘ಗೃಹಲಕ್ಷ್ಮಿ’ 31ನೇ ಕಂತಿನ 2,400 ಕೋಟಿ ರೂ. ಹಣ ಬಿಡುಗಡೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನಗದು ನೀಡುವ ‘ಗೃಹಲಕ್ಷ್ಮಿ ಯೋಜನೆ’ಯ 31ನೆ ಕಂತಿನ 2,400ಕೋಟಿ ರೂ.ಹಣವನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿನ 1.24 ಕೋಟಿಗೂ ಅಧಿಕ ಕುಟುಂಬದ ಮನೆಯ ಯಜಮಾನಿಯರಿಗೆ ಈವರೆಗೆ 30 ಕಂತುಗಳಲ್ಲಿ ತಲಾ 2ಸಾವಿರ ರೂ.ನಂತೆ 60 ಸಾವಿರ ರೂ.ಗಳನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮುಖಾಂತರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿತ್ತು. ಇದೀಗ 31ನೇ ಕಂತಿನ 2,400 ಕೋಟಿ ರೂ.ಹಣ ಬಿಡುಗಡೆ ಮಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಈ ಮೂಲಕ ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯ ಸರಕಾರ ಇದುವರೆಗೂ 74,650 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇದರಿಂದ ಫಲಾನುಭವಿ ಮನೆಯ ಯಜಮಾನಿ ಖಾತೆಗೆ ಒಟ್ಟು 62 ಸಾವಿರ ರೂ.ಹಣವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದಂತೆ ಆಗಿದೆ ಎಂದು ಹೇಳಿದ್ದಾರೆ.
ಕುಟುಂಬದ ದೈನಂದಿನ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರ ಹಾಗೂ ಇತರೆ ಅಗತ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕೆಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗಲಿ ಎಂದು ನಮ್ಮ ಸರಕಾರ ಮನೆಯ ಯಜಮಾನಿಯರಿಗೆ 31ಕಂತುಗಳಲ್ಲಿ ತಲಾ 2ಸಾವಿರ ರೂ.ನಂತೆ ಇದುವರೆಗೂ 62ಸಾವಿರ ರೂ. ಹಣವನ್ನು ನೀಡಿದೆ. ಕಾಂಗ್ರೆಸ್ ಸರಕಾರ ಮಹಿಳೆಯರ ಪರ ಸರಕಾರ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.






