ಕರ್ನಾಟಕ ಅಬಕಾರಿ 2ನೇ ತಿದ್ದುಪಡಿ ನಿಯಮಕ್ಕೆ ಹೈಕೋರ್ಟ್ ತಡೆ; ಪರವಾನಗಿ ಇ-ಹರಾಜು ಪ್ರಕ್ರಿಯೆಗೆ ಬ್ರೇಕ್

Photo credit: PTI
ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡುವ ಉದ್ದೇಶದಿಂದ 2025 ನವೆಂಬರ್ 3ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ-2025ಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಎಸ್.ಗುರುಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಇದರಿಂದ, ಸರ್ಕಾರ ಈ ತಿಂಗಳ ಅಂತ್ಯದಲ್ಲಿ ಮಾಡಲು ಉದ್ದೇಶಿಸಿದ್ದ ಬಾಕಿ ಅಬಕಾರಿ ಪರವಾನಗಿಗಳ ಇ-ಹರಾಜಿಗೆ ತಡೆ ಬಿದ್ದಂತಾಗಿದೆ.
ಅರ್ಜಿ ಕುರಿತ ಮುಂದಿನ ಆದೇಶವರೆಗೆ 2025ರ ನಿಯಮ 5 ಮತ್ತು ನಿಯಮ 5ಎ ಜಾರಿಗೆ ತಡೆ ನೀಡಿ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿರುವ ಹೈಕೋರ್ಟ್, ಪ್ರತಿವಾದಿ ಸರ್ಕಾರ ಮಧ್ಯಂತರ ಆದೇಶದ ಮಾರ್ಪಾಡು ಅಥವಾ ತೆರವಿಗೆ ಅರ್ಜಿ ಸಲ್ಲಿಸಲು ಸ್ವತಂತ್ರವಿದೆ ಎಂದು ತಿಳಿಸಿದೆ.
ಮೇಲ್ನೋಟಕ್ಕೆ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಅಡಿಯಲ್ಲಿ ಪ್ರಸ್ತಾಪಿಸಿರುವ ಹೊಸ ಷರತ್ತುಗಳು, ಮೀಸಲು ಮತ್ತು ಅರ್ಹತಾ ಮಾನದಂಡ ಮತ್ತಿತರ ಅಂಶಗಳು ಮೂಲ ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಬಂಧನೆಗಳ ವ್ಯಾಪ್ತಿಯ ಹೊರಗಿದ್ದಂತಿವೆ. ಆದ್ದರಿಂದ, ಈ ಬಗ್ಗೆ ವಿಸ್ತೃತವಾದ ವಿಚಾರಣೆ ಹಾಗೂ ಪರಿಶೀಲನೆ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರು, ಸರ್ಕಾರ ಹಿಂದೆ ನವೀಕರಣವಾಗದ ಮತ್ತು ರದ್ದುಗೊಳಿಸಲಾದ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಮುಂದಾಗಿದೆ. ಅದಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಪರಿಚಯಿಸಲಾಗಿದ್ದು, ಅದು ಮೂಲ ಅಬಕಾರಿ ಕಾಯ್ದೆ ವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ. ಜತೆಗೆ ನಿಯಮ 5ರಲ್ಲಿ ಮೂಲ ಕಾಯ್ದೆಗೆ ವಿರುದ್ಧವಾಗಿ ಪರವಾನಗಿ ಹಂಚಿಕೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಅವು ಹಿಂದಿನ ಆದೇಶಗಳಿಗೆ ವಿರುದ್ಧವಾಗಿವೆ ಎಂದರು.
ಪ್ರಕರಣದ ಹಿನ್ನೆಲೆ:
ಹೆಚ್ಚುವರಿ ಅಬಕಾರಿ ಆದಾಯ ಸಂಗ್ರಹಿಸುವ ಸಲುವಾಗಿ ಸರ್ಕಾರ 2025-26ನೇ ಸಾಲಿನ ಬಜೆಟ್ನಲ್ಲಿ ಅಬಕಾರಿ ಪರವಾನಗಿಗಳಿಗೆ ಇ-ಹರಾಜು ಪರಿಚಯಿಸುವುದಾಗಿ ಘೋಷಿಸಿತ್ತು. ಅದರಂತೆ ಇಲಾಖೆ ಹಿಂದೆ ನವೀಕರಣವಾಗದ ಅಥವಾ ಲ್ಯಾಪ್ಸ್ ಆದ ಸುಮಾರು 500 ಅಬಕಾರಿ ಸನ್ನದುಗಳನ್ನು ಪಟ್ಟಿ ಮಾಡಿ ಅವುಗಳನ್ನು ಹರಾಜು ಮಾಡಲು ಸಿದ್ಧತೆ ನಡೆಸಿದೆ. ಅದಕ್ಕೆ ಅನುಕೂಲವಾಗುವಂತೆ ಕಳೆದ ನವೆಂಬರ್ನಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಕರಡು ಪ್ರಕಟಿಸಿತ್ತು. ಆನಂತರ, ಅದನ್ನು ಅಂತಿಮಗೊಳಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.







