ಎಂಟು ಸರಕಾರಿ ಅಧಿಕಾರಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಲೋಕಾಯುಕ್ತ ಪೊಲೀಸ್ ಪೋಲಿಸರು ರಾಜ್ಯದ ಐದು ಜಿಲ್ಲೆಗಳ 8 ಸರಕಾರಿ ಅಧಿಕಾರಿಗಳ ಕಚೇರಿ, ನಿವಾಸ ಹಾಗೂ ಸಂಬಂಧಿಕರ ಮನೆಗಳು ಸೇರಿ ಒಟ್ಟು 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, 31 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ. ಆದಾಯದ ಮೂಲಗಳಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದ ಎಂಟು ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನ ಕರ್ನಾಟಕ ಗೃಹ ಮಂಡಳಿಯ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ರಾಜಣ್ಣ ಎಸ್. ಎಲ್. ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, 3 ನಿವೇಶನಗಳು, 2 ವಾಸದ ಮನೆಗಳು, 3 ಎಕರೆ ಕೃಷಿ ಜಮೀನು, 40 ಸಾವಿರ ರೂ. ನಗದು, 70 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳು, 17ಲಕ್ಷ ರೂ. ಬೆಲೆ ಬಾಳುವ ವಾಹನಗಳು, 20 ಲಕ್ಷ ರೂ. ಬ್ಯಾಂಕ್ ಉಳಿತಾಯ ಸೇರಿ ಒಟ್ಟು 7,10,48,000ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಬೆಸ್ಕಾಂನ ಯಲಹಂಕ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಉದಯ ಕುಮಾರ್ ಎಂ.ಬಿ. ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, 10 ನಿವೇಶನಗಳು, 1 ವಾಸದ ಮನೆ, 1 ಎಕರೆ ಕೃಷಿ ಜಮೀನು, 1,83,650 ರೂ. ನಗದು, 30,29,810 ರೂ. ಬೆಲೆ ಬಾಳುವ ಚಿನ್ನಾಭರಣಗಳು, 33 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 1.80 ಲಕ್ಷ ರೂ. ಬೆಲೆಬಾಳುವ ಇತರೆ ವಸ್ತುಗಳು, 21 ಲಕ್ಷ ರೂ. ಬೆಲೆ ಬಾಳುವ ಬ್ಯಾಂಕ್ ಠೇವಣಿ ಸೇರಿ ಒಟ್ಟು 3,90,78,460 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಲೋಕೋಪಯೋಗಿ ಇಲಾಖೆಯ ಕಲಬುರಗಿ ವಿಭಾಗದ ಅಧೀಕ್ಷಕ ಅಭಿಯಂತರ ಮಾಣಿಕ್ ಎಸ್. ಕನಕಟ್ಟೆ ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿದ್ದು, 5 ನಿವೇಶನಗಳು, 3 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ, 1,26.810 ರೂ. ನಗದು, 37,92,250 ರೂ. ಬೆಲೆ ಬಾಳುವ ಚಿನ್ನಾಭರಣಗಳು, 49,15,000 ರೂ. ಬೆಲೆ ಬಾಳುವ ವಾಹನಗಳು, 50 ಲಕ್ಷ ರೂ. ಬೆಲೆಬಾಳುವ ಬ್ಯಾಂಕ್ ಉಳಿತಾಯ, 16,00,050 ರೂ. ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 4,94,68,110 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಎಸ್. ಮೋಹನ್ ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, 3 ನಿವೇಶನಗಳು, 2 ವಾಸದ ಮನೆಗಳು, 7 ಎಕರೆ ಕೃಷಿ ಜಮೀನು, 1,19,395 ರೂ. ನಗದು, 5,16.855 ರೂ. ಬೆಲೆ ಬಾಳುವ ಚಿನ್ನಾಭರಣಗಳು, 5 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 5 ಲಕ್ಷ ರೂ. ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 3,62,27,253 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಹುಬ್ಬಳ್ಳಿಯ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿಯ ಮುಖ್ಯ ತಾಂತ್ರಿಕ ಅಭಿಯಂತರ ಸಿದ್ದೇಶ್ವರ ಎನ್. ಹೆಬ್ಬಾಳ ಅವರ ಬಳಿ 2,61,04.620 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಬೆಳಗಾವಿಯ ಕೆ.ಆರ್.ಡಿ.ಎಲ್.ನ ಅಧೀಕ್ಷಕ ಅಭಿಯಂತರ ಸಣ್ಣ ಕೆಂಚಪ್ಪ ಅವರ ಬಳಿ 2,54,37,700 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಚಿತ್ರದುರ್ಗದ ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣ ನಾಯ್ಕ್ ಎಲ್.ಎ. ಬಳಿ 2,57,74,356 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.






