ವಿದ್ಯುತ್ ತಂತಿ ತಗುಲಿ ತಾಯಿ, ಮಗು ಮೃತ್ಯು: ಸ್ವಯಂಪ್ರೇರಿತ ಪ್ರಕರಣ ದಾಖಿಸಿಕೊಂಡು ತನಿಖೆ ಆರಂಭಿಸಿದ ಲೋಕಾಯುಕ್ತ

ಬೆಂಗಳೂರು: ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಕುರಿತು ಮಾಧ್ಯಮಗಳ ವರದಿಗಳನ್ನು ಆಧರಿಸಿ ರಾಜ್ಯ ಸರಕಾರ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಬುಧವಾರ ತನಿಖೆಗೆ ಆದೇಶ ನೀಡಿದೆ.
ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ತನಿಖೆ ನಡೆಸಿ ಮುಂದಿನ ವಿಚಾರಣೆಯ ದಿನಾಂಕವಾದ ಡಿ.8ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.
ತಮಿಳುನಾಡಿನಲ್ಲಿ ದೀಪಾವಳಿ ಆಚರಿಸಿ ಬೆಂಗಳೂರಿಗೆ ಆಗಮಿಸಿದ್ದ ಸೌಂದರ್ಯ(23) ಮತ್ತು ಅವರ ಪುತ್ರಿ ಸುವೀಕ್ಷಾ (9ತಿಂಗಳ ಮಗು) ನ.19 ರಂದು ವೈಟ್ಫೀಲ್ಡ್ ಮುಖ್ಯರಸ್ತೆಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದರು.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ನೋಟಿಸ್ ಜಾರಿ ಮಾಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸೂಚಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಉದ್ದೇಶ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಜನತೆಗೆ ನೀಡುವಂತೆ ಮಾಡುವುದು. ಆಡಳಿತ ಮತ್ತು ದುರಾಡಳಿತವನ್ನು ತಡೆಗಟ್ಟಲು ವಿದ್ಯುತ್ ಮಾರ್ಗದ ಸರಿಯಾದ ನಿರ್ವಹಣೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ವಹಿಸಿರುವ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯವು ಇಲ್ಲಿ ಎದ್ದು ಕಾಣುತ್ತದೆ. ನನ್ನ ಅಭಿಪ್ರಾಯದಲ್ಲಿ, ಸೆಕ್ಷನ್ 2(10) ಅಡಿಯಲ್ಲಿ ‘ದುರಾಡಳಿತ' ಅರ್ಥದಲ್ಲಿ ಕೇಸು ದಾಖಲಿಸಬಹುದಾಗಿದೆ ಎಂದು ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೆಸ್ಕಾಂನ ವೆಬ್ಸೈಟ್ ಪ್ರಕಾರ, 2015-16 ರಿಂದ 2021-22ರವರೆಗೆ ಪ್ರತಿ ವರ್ಷ ಸರಾಸರಿ 200 ರಿಂದ 280 ಅಪಘಾತಗಳು ವರದಿಯಾಗಿವೆ ಎಂದು ತೋರಿಸುತ್ತದೆ. ಹೀಗಾಗಿ, ಪ್ರಾಥಮಿಕವಾಗಿ ಅಧಿಕಾರಿಗಳ ಕಡೆಯಿಂದ ನಿರ್ಲಕ್ಷ್ಯ ಕಂಡುಬಂದಿದೆ. ವಿದ್ಯುತ್ ಮಾರ್ಗದ ನಿರ್ವಹಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿದ್ದಾರೆ, ನನ್ನ ಅಭಿಪ್ರಾಯದಲ್ಲಿ, ಸಮಂಜಸವಾದ ಸ್ಥಿತಿಯಲ್ಲಿ ವಿದ್ಯುತ್ ಮಾರ್ಗಗಳನ್ನು ನಿರ್ವಹಿಸದಿರುವುದು ಗಂಭೀರ ಕರ್ತವ್ಯ ಲೋಪವಾಗುತ್ತದೆ. ಇಂತಹ ಲೋಪಗಳು ಜನರ ಜೀವನಕ್ಕೆ ಮಾರಕವೆಂದು ಸಾಬೀತುಪಡಿಸುತ್ತದೆ. ಬದುಕುವ ಹಕ್ಕು ಎಂದರೆ ಜೀವನದ ಗುಣಮಟ್ಟ. ಸರಿಯಾದ ವಿದ್ಯುತ್ ಮಾರ್ಗವಿಲ್ಲದೆ ಯಾರ ಜೀವನವೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಬಿ.ಎಸ್.ಪಾಟೀಲ್ ಟೀಕಿಸಿದ್ದಾರೆ.
ಬೆಸ್ಕಾಂ ಸಾರ್ವಜನಿಕರಿಂದ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜನರು ಒಂದಲ್ಲ ಒಂದು ರೂಪದಲ್ಲಿ ಶುಲ್ಕವನ್ನು ಪಾವತಿಸುತ್ತಾರೆ. ಅನೇಕ ಬಾರಿ ನಾವು ಕಂಬಗಳಿಗೆ ಜೋಡಿಸಲಾದ ಅತ್ಯಂತ ಹಳೆಯ ಮತ್ತು ಶಿಥಿಲವಾದ ವಿದ್ಯುತ್ ತಂತಿಗಳನ್ನು ನೋಡುತ್ತೇವೆ. ವಿದ್ಯುತ್ ಮಾರ್ಗಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಹೊಣೆಗಾರರಾಗಿರುವ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ವಿಸ್ತೃತ ತನಿಖೆ ನಡೆಸಿ ಅಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.







