ಆಹಾರ ನಿಗಮದ 386 ನೂತನ ಸಿಬ್ಬಂದಿಗೆ ಶೀಘ್ರವೇ ನೇಮಕಾತಿ ಪತ್ರ ವಿತರಣೆ: ಕೆ.ಎಚ್.ಮುನಿಯಪ್ಪ

ಬೆಂಗಳೂರು : ಆಹಾರ ನಿಗಮದ 386 ನೂತನ ಸಿಬ್ಬಂದಿಗೆ ಶೀಘ್ರವೇ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಶುಕ್ರವಾರ ವಸಂತ ನಗರದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಝಾದ್ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ 52ನೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ನಿಗಮದಲ್ಲಿ ಮೊದಲು 1500 ಸಿಬ್ಬಂದಿ ಇದ್ದರು. ಈಗ ಸಿಬ್ಬಂದಿಗಳ ಸಂಖ್ಯೆ 200 ರಿಂದ 250ಕ್ಕೆ ಇಳಿದಿದೆ. ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಕೆಲವೆ ದಿನಗಳಲ್ಲಿ ನೂತನ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನೇಮಕಾತಿ ಆದೇಶಕ್ಕೆ ಅನುಮತಿ ನೀಡಿದ್ದು, ನಿಗಮಕ್ಕೆ ಶಕ್ತಿ ತುಂಬಿದಂತಾಗಿದೆ ಎಂದು ಮುನಿಯಪ್ಪ ತಿಳಿಸಿದರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಜನಪರವಾದ ಕೆಲಸಗಳನ್ನು ಮಾಡುತ್ತಿರುವ ನಮ್ಮ ಸರಕಾರ, ನುಡಿದಂತೆ ನಡೆಯುತ್ತಿದೆ. ಆಹಾರ ನಿಗಮದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯೋಜನೆಯಡಿ ಆಹಾರ ಧ್ಯಾನ್ಯಗಳ ಖರೀದಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮನುಷ್ಯನಿಗೆ ಆರೋಗ್ಯಕರವಾಗಿರುವ ರಾಗಿ ಮತ್ತು ಜೋಳ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಹಾಗೇಯೆ ಅದರಿಂದ ಬರುವ ಕಮೀಷನ್ ನಿಂದ ನಿಗಮದ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ಮುನಿಯಪ್ಪ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು, ತಾವು ಕೇಂದ್ರದ ರೇಶ್ಮೆ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾಗ ಶಿಡ್ಲಘಟ್ಟ ತಾಲೂಕಿಗೆ ಬಂದು ರೇಶ್ಮೆ ಕೃಷಿಯ ಬಗ್ಗೆ ಪರಿಶೀಲನೆ ಮಾಡಿದ್ದರು. ಅವರಿಗೂ ನನಗೂ ನಿಕಟವಾದ ಸಂಪರ್ಕ ಇತ್ತು. ದೇವರಾಜ ಅರಸು ಅವರದೆ ಆದ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಆಹಾರ ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ ಮಾತನಾಡಿ, ದೇವರಾಜು ಅರಸು ಮುಖ್ಯಮಂತ್ರಿಯಾಗಿ ಈ ನಿಗಮದ ಸ್ಥಾಪನೆಗೆ ಸಹಕಾರಿಯಾದರು. ಇಂದಿಗೆ 52 ವಸಂತಗಳು ಪೂರೈಸಲು ಕಾರಣಕರ್ತರಾದ ಅರಸು ರವರಿಗೆ ಅರಸು ನಮನ ಸಲ್ಲಿಸಿದ್ದೇವೆ ಎಂದು ಹೇಳಿದರು.
ಅರಸು ಈ ರಾಜ್ಯಕ್ಕೆ ಮೀಸಲಾತಿ, ಬಡವರಿಗೆ ಭೂಮಿಯನ್ನು ನೀಡಿದಂತಹ ಮಹಾನ್ ವ್ಯಕ್ತಿ, ಈ ನಿಗಮ ರೈತರಿಂದ ರಾಗಿ, ಭತ್ತ, ಜೋಳವನ್ನು ಖರೀದಿಸಿ ಅದನ್ನು ರಾಜ್ಯದ ಜನರಿಗೆ ನೀಡಲು ಸಹಕಾರಿಯಾಗಿದೆ. ಆಹಾರ ಧಾನ್ಯಗಳ ಖರೀದಿಗೆ ರಾಜ್ಯದಾದ್ಯಂತ ಖರೀದಿ ಕೇಂದ್ರ ಗಳನ್ನು ಸ್ಥಾಪಿಸಿ ರೈತರಿಗೆ ಬಲ ತುಂಬಿರುವ ಸಚಿವ ಕೆ.ಎಚ್.ಮುನಿಯಪ್ಪ, ಈಗ ನಿಗಮಕ್ಕೆ ಹೊಸದಾಗಿ 386 ಸಿಬ್ಬಂದಿ ವರ್ಗದವರನ್ನು ನೇಮಕಾತಿ ಮಾಡಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಚಂದ್ರಪ್ಪ, ಆಹಾರ ಇಲಾಖೆ ಆಯುಕ್ತೆ ವಿ.ವಿ.ಜ್ಯೋತ್ಸ್ನಾ, ನಿಗಮದ ನಿರ್ದೇಶಕ ಕೆ.ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ವ್ಯವಸ್ಥಾಪಕ ಮಂಜುನಾಥ್, ರಾಘವೇಂದ್ರ, ಡಾ.ಆಂಜನಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







