ʼಆಪರೇಷನ್ ಮಹದೇವಪುರʼವು ಸಂವಿಧಾನವನ್ನು ಕಗ್ಗೊಲೆ ಮಾಡಿದ ದೇಶದೊಳಗಿನ ಭಯೋತ್ಪಾದಕರನ್ನು ಬಯಲಿಗೆಳೆದಿದೆ: ನಟ ಕಿಶೋರ್ ಕುಮಾರ್

ನಟ ಕಿಶೋರ್ ಕುಮಾರ್
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಮಹದೇವಪುರದಲ್ಲಿ ಮತ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡಿದ ಕುರಿತು ಪ್ರತಿಕ್ರಿಯಿಸಿರುವ ನಟ ಕಿಶೋರ್ ಕುಮಾರ್, ʼಆಪರೇಷನ್ ಮಹದೇವಪುರʼ ಭಾರತೀಯ ಸಂವಿಧಾನವನ್ನು ಕಗ್ಗೊಲೆ ಮಾಡಿದ ದೇಶದೊಳಗಿನ ಭಯೋತ್ಪಾದಕರನ್ನು ಬಯಲಿಗೆಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಆಪರೇಷನ್ ಮಹದೇವಪುರ- ಭಾರತೀಯ ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನವನ್ನು ಕಗ್ಗೊಲೆ ಮಾಡಿದ ದೇಶದೊಳಗಿನ ಭಯೋತ್ಪಾದಕರನ್ನು ಬಯಲಿಗೆಳೆದಿದೆ. ಎಲ್ಲಾ ಭಾರತೀಯರ ಪರವಾಗಿ ಚುನಾವಣಾ ಆಯೋಗದ ಎಲ್ಲಾ ಮೋಸದ ತಂತ್ರಗಳನ್ನು (ಡಿಜಿಟಲ್ ಡೇಟಾ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸದ) ಮೀರಿಸಿ, ಟನ್ನುಗಟ್ಟಲೆ ಮೋಸದ (21 ಅಡಿ ಎತ್ತರದ) ದಾಖಲೆಗಳನ್ನು ಪರಿಶೀಲಿಸಿ ಪ್ರಜಾಪ್ರಭುತ್ವದ ಅಡಿಪಾಯವಾದ ನಮ್ಮ ಮತದ ಅಧಿಕಾರವನ್ನು ನಾಶಮಾಡುವ, ಅತಿದೊಡ್ಡ ದೇಶದ್ರೋಹವನ್ನು ಸಾಬೀತುಪಡಿಸಲು ಶ್ರಮಿಸಿದ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿಯವರಿಗೆ ವಂದನೆಗಳು." ಎಂದು ಹೇಳಿದ್ದಾರೆ.
"ಇದು ರಾಹುಲ್ ಗಾಂಧಿ ಅಥವಾ ವಿರೋಧ ಪಕ್ಷದ ಹೋರಾಟವಲ್ಲ. ನಮ್ಮ ಹೋರಾಟ. ನಮ್ಮ ಹಕ್ಕನ್ನು ಕಗ್ಗೊಲೆ ಮಾಡಲಾಗಿದೆ. ಈಗಲೂ ನಾವು ಎದ್ದು ನಿಲ್ಲುವುದಿಲ್ಲವೇ? ಈಗಲೂ ಯಾವುದೇ ತನಿಖೆ ಇರುವುದಿಲ್ಲವೇ? ಇದು ಹೊಸ ಸಾಮಾನ್ಯವಾಗುತ್ತದೆಯೇ?, ಉಪರಾಷ್ಟ್ರಪತಿಯ ಹುದ್ದೆಯಂತಹ ಉನ್ನತ ಹುದ್ದೆಯ ರಾಜೀನಾಮೆಯಂತೆ... ಚುನಾವಣಾ ಬಾಂಡ್ಗಳಂತಹ ದೊಡ್ಡ ಮತ್ತು ಅಸಂವಿಧಾನಿಕ ಹಗರಣದಂತೆ ?? ಹಾಗಿದ್ದರೆ ನಮ್ಮ ಆರ್ಥಿಕತೆ ಸತ್ತಿದೆಯೋ ಇಲ್ಲವೋ, ಆದರೆ ನಮ್ಮ ಪ್ರಜಾಪ್ರಭುತ್ವ ಖಂಡಿತವಾಗಿಯೂ ಸತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾವು ಬಾಯಿ ಮುಚ್ಚಿಕೊಂಡೇ ಇದ್ದರೆ ನಮ್ಮ ಮತದಾನದ ಹಕ್ಕನ್ನು ಇವರು ಸಂಪೂರ್ಣವಾಗಿ ಕಸಿದುಕೊಳ್ಳುವ ದಿನ ದೂರವಿಲ್ಲ. ನಾವು, ಭಾರತದ ಜನ, ಮಾಧ್ಯಮಗಳು, ನ್ಯಾಯಾಂಗ, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಈ ದೇಶದ್ರೋಹದ ಭಾಗವಾಗಲು ನಿರಾಕರಿಸಿ ಈ ದೇಶದ್ರೋಹಿಗಳ ವಿರುದ್ಧ ನಿಲ್ಲದಿದ್ದರೆ..." ಎಂದು ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಬರೆದಿದ್ದಾರೆ.







