ಕೊಡಗು: ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ
![ಕೊಡಗು: ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕೊಡಗು: ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ](https://www.varthabharati.in/h-upload/2023/08/04/1176900-z-harangi-death.webp)
ಮಡಿಕೇರಿ ಆ.4 : ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದು ಕುಶಾಲನಗರದ ಹಾರಂಗಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹವನ್ನು ಇಂದು (ಶುಕ್ರವಾರ) ಹೊರ ತೆಗೆಯಲಾಗಿದೆ.
ಮೃತರನ್ನು ಬೆಂಗಳೂರು ನಗರದ ವಿಜಯಪುರ ನಿವಾಸಿ ಸಂದೀಪ್ (45) ಎಂದು ಗುರುತಿಸಲಾಗಿದೆ.
ಸಂದೀಪ್ ಗುರುವಾರ ಹಾರಂಗಿ ಜಲಾಶಯದ ಎದುರಿನ ಸೇತುವೆ ಬಳಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದರು. ಸಂಜೆ ಶವ ಪತ್ತೆ ಕಾರ್ಯಾಚರಣೆ ವಿಫಲವಾದ ಹಿನ್ನೆಲೆ ಇಂದು ಅಗ್ನಿಶಾಮಕ ದಳ ಹಾಗೂ ದುಬಾರೆಯ ರಾಫ್ಟಿಂಗ್ ತಂಡ ಶೋಧ ಕಾರ್ಯ ನಡೆಸಿತು.
ಹಾರಂಗಿ ಜಲಾಶಯದ ಹೊರಹರಿವು ಸ್ಥಗಿತಗೊಳಿಸಿ ಪತ್ತೆ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಸೇತುವೆಯ ಕೆಳಭಾಗದಲ್ಲೇ ಶವ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story