‘ಪೌರಾಡಳಿತ ಸಂಸ್ಥೆಗಳಲ್ಲಿ ಸುಧಾರಣೆ’: ಸಚಿವ ರಹೀಂ ಖಾನ್ಗೆ ಕೆಪಿಸಿಸಿ ಸದಸ್ಯ ಮೋಹನದಾಸ್ ಹೆಗ್ಗಡೆ ಪತ್ರ

ಪೌರಾಡಳಿತ ಸಚಿವ ರಹೀಂ ಖಾನ್
ಬೆಂಗಳೂರು: ಪೌರಾಡಳಿತ ಸಂಸ್ಥೆಗಳಲ್ಲಿ ಸುಧಾರಣೆ ತರಲು ಹಾಗೂ ಪುರಸಭೆ ಅಭಿವೃದ್ಧಿ ಯೋಜನೆಯ ಮಿಷನ್ 2025-26ರ ವೇಳೆಗೆ ರಾಜ್ಯಾದ್ಯಂತ ಪುರಸಭೆಯ ಆಡಳಿತ ಮತ್ತು ಮೂಲಸೌಕರ್ಯಗಳ ಬಗ್ಗೆ ಕೈಗೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಕೆಪಿಸಿಸಿ ಸದಸ್ಯ ಮೋಹನದಾಸ್ ಹೆಗ್ಗಡೆ, ಪೌರಾಡಳಿತ ಸಚಿವ ರಹೀಂ ಖಾನ್ಗೆ ಪತ್ರ ಬರೆದಿದ್ದಾರೆ.
ಬಡತನ ನಿರ್ಮೂಲನೆ, ಕಲಿಕೆ ಮತ್ತು ಗಳಿಕೆಗೆ ಪ್ರೋತ್ಸಾಹ, ಮಕ್ಕಳು ಹಾಗೂ ಕುಟುಂಬ ಆರೋಗ್ಯಕ್ಕೆ ನೆರವು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸಶಕ್ತೀಕರಣಕ್ಕೆ ಒತ್ತು, ಕೃಷಿ ವಲಯವನ್ನು ಬಲವರ್ಧನೆಗೊಳಿಸುವುದು, ಪರಿಸರ ಸಂರಕ್ಷಣೆ, ಸರಕಾರದ ಆಡಳಿತ ಮಾದರಿಯನ್ನು ಡಿಜಿಟಲ್ ವೇದಿಕೆ ಮೂಲಕ ಉತ್ತರದಾಯಿ ಮಾಡುವುದರ ಜೊತೆಗೆ, ನಾಗರಿಕರ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಮೋಹನ್ ದಾಸ್ ಹೆಗ್ಗಡೆ ವಿವರಿಸಿದ್ದಾರೆ.
ಖಾಸಗಿ ಸಹಭಾಗಿತ್ವ ಹಾಗೂ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸುವುದರಿಂದ, ಸ್ಥಳೀಯ ಆಡಳಿತವನ್ನು ಹೆಚ್ಚು ಬಲವರ್ಧನೆಗೊಳಿಸುವುದರ ಜೊತೆಗೆ ನಗರ ಪ್ರದೇಶಗಳಲ್ಲಿನ ಸೇವೆಗಳ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ. ಸರಕಾರಕ್ಕೆ ತಾವು ನೀಡಿರುವ ಸಲಹೆಗಳ ಅನುಷ್ಠಾನದಿಂದ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಪ್ರಯತ್ನಗಳು ನಗರ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಬಹುದಾಗಿದೆ. ನಾಗರಿಕರ ಜೀವನ ಮಟ್ಟವು ಸುಧಾರಣೆಯಾಗಲಿದೆ. ಅಲ್ಲದೇ, ರಾಜ್ಯದ ನಗರಗಳು ಆವಿಷ್ಕಾರ ಹಾಗೂ ಸ್ಥಿರತೆಯಲ್ಲಿ ಇತರರಿಗೆ ಮಾದರಿಯಾಗಲಿವೆ ಎಂದು ಮೋಹನದಾಸ್ ಹೆಗ್ಗಡೆ ತಿಳಿಸಿದ್ದಾರೆ.
ಪೌರಾಡಳಿತ ಸಚಿವ ರಹೀಂ ಖಾನ್, ಮೋಹನದಾಸ್ ಹೆಗ್ಗಡೆ ಬರೆದಿರುವ ಪತ್ರದಲ್ಲಿನ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂಥೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದಾರೆ.