ನಾಯಕತ್ವ ಬದಲಾವಣೆ ವಿಚಾರ : ಭಗವಂತ ನಮ್ಮ ಆಸೆ ಈಡೇರಿಸಿದ್ದಾನೆ ಎಂದ ಶಾಸಕ ಇಕ್ಬಾಲ್ ಹುಸೇನ್

ಇಕ್ಬಾಲ್ ಹುಸೇನ್
ಬೆಂಗಳೂರು : ಭಗವಂತನ ದಯೆಯಿಂದ ಒಳ್ಳೆಯ ಕಾಲ ಬಂದಿದೆ. ನಮ್ಮ ನಾಯಕರಿಗೆ ಇಡೀ ರಾಜ್ಯದ ಜನರು ಬಯಸಿದ್ದನ್ನು ನೆರವೇರಿಸಿದ್ದಾನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ಗೆ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ಇತಿಮಿತಿ ಇರುತ್ತದೆ. ಪಕ್ಷದ ವರಿಷ್ಠರು ಶಿಸ್ತಿನಿಂದ ಇರಿ, ಕಾಲ ಬಂದಾಗ ಮಾತನಾಡಿ ಎಂದು ಹೇಳಿದ್ದರು. ಈಗ ಆ ಕಾಲ ಬಂದಿದೆ ಎಂದು ಹೇಳಿದರು.
ನಾಯಕರು ಬೆಂಗಳೂರಿಗೆ ಬರಲಿ, ಅವರ ಜೊತೆ ಮಾತನಾಡುತ್ತೇನೆ. ಬಳಿಕ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ನಾವೆಲ್ಲರೂ ಪಕ್ಷದ ಶಿಸ್ತನ್ನು ಕಾಪಾಡಬೇಕು. ನಿನ್ನೆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ದೆಹಲಿಯಲ್ಲಿ ಯಾರ ಜೊತೆ ಮಾತನಾಡಬೇಕಿತ್ತೋ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದೆ ಎಂದರು.
ಭಗವಂತ ನನ್ನ ಆಸೆ ಈಡೇರಿಸುವ ಕೆಲಸ ಮಾಡಿದ್ದಾನೆ. ಅವನಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಭಗವಂತನಿಗೆ ಧನ್ಯವಾದ ತಿಳಿಸಿದ್ದಾರೆ.




