ನಾಳೆ ವಿಧಾನ ಪರಿಷತ್ ಚುನಾವಣೆ; ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಐದು, ಬಿಜೆಪಿಯಿಂದ ಎರಡು ಹಾಗೂ ಜೆಡಿಎಸ್ ಪಕ್ಷದಿಂದ ಓರ್ವ ಅಭ್ಯರ್ಥಿ ಸೇರಿ ಎಂಟು ಮಂದಿ ಕಣಕ್ಕಿಳಿದಿದ್ದಾರೆ.
ಗುರುವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಚುನಾವಣಾಧಿಕಾರಿ ಮತಗಳ ಎಣಿಕೆ ಕಾರ್ಯ ಆರಂಭಿಸಿ, ಆ ಬಳಿಕ ಫಲಿತಾಂಶ ಪ್ರಕಟಿಸಲಿದ್ದಾರೆ.
ಈ ಚುನಾವಣೆಯಲ್ಲಿ ಶಾಸಕರು ಮತಪತ್ರದ ಮೂಲಕ ಗೌಪ್ಯ ಮತದಾನ ಮಾಡುವ ಹಿನ್ನೆಲೆಯಲ್ಲಿ ಕೊಠಡಿಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ನಡೆಯುವ ಕೊಠಡಿಯ ಒಳಗೆ ಹಾಗೂ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಯಾವುದೆ ರೀತಿಯ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾಂಗ್ರೆಸ್ ಶಾಸಕರಿಗೆ ಅಣಕು ಮತದಾನ ಪ್ರಕ್ರಿಯೆ ಮೂಲಕ ತರಬೇತಿ:
ಆಡಳಿತರೂಢ ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರು ಚುನಾಯಿತರಾಗಿದ್ದಾರೆ. ಆದುದರಿಂದ, ವಿಧಾನಪರಿಷತ್ತಿನ ಚುನಾವಣೆಯಲ್ಲಿ ಯಾವ ರೀತಿ ಪ್ರಾಶಸ್ತ್ಯದ ಮತಗಳನ್ನು ಹಾಕಬೇಕು ಎಂಬುದರ ಕುರಿತು ಬಿಡದಿಯ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಣಕು ಮತದಾನ ಪ್ರಕ್ರಿಯೆ ನಡೆಸಿ ತರಬೇತಿ ನೀಡಲಾಗಿದೆ.
ಕಾಂಗ್ರೆಸ್ ಶಾಸಕರ ಒಂದು ಮತವು ಅಸಿಂಧು ಆಗಬಾರದು. ಆಗ ಮಾತ್ರ ನಮ್ಮ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯ. ಐದು ಜನ ಅಭ್ಯರ್ಥಿಗಳು ಗೆಲ್ಲಬೇಕಾದರೆ ಶಾಸಕರು ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಇದು ನಮ್ಮ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ ಎಂದು ಶಾಸಕರಿಗೆ ಮುಖ್ಯಮಂತ್ರಿ ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ನಾಲ್ಕು ಸ್ಥಾನ, ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಅಗತ್ಯ ಸಂಖ್ಯಾಬಲವನ್ನು ಹೊಂದಿಲ್ಲದಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದರಿಂದಾಗಿ, ಕಾಂಗ್ರೆಸ್ ಪಕ್ಷದ ಐದನೆ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್ ಸ್ಪರ್ಧೆಯೊಡ್ಡಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿದೆ. ಅದರಂತೆ, ಕಾಂಗ್ರೆಸ್ ಪಕ್ಷದ ಐದು ಅಭ್ಯರ್ಥಿಗಳು ಗೆಲುವು ಸಾಧಿಸಲು 140 ಮತಗಳ ಅಗತ್ಯವಿದೆ. ಸದ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು 134, ಸ್ಪೀಕರ್, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಪಕ್ಷೇತರ ಸದಸ್ಯರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ ಸೇರಿ 138 ಮತಗಳಿವೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಆಗ ಕಾಂಗ್ರೆಸ್ ಪಾಳಯದಲ್ಲಿನ ಸಂಖ್ಯಾ ಬಲ 140ಕ್ಕೆ ಏರಿಕೆಯಾಗಲಿದೆ.
ಬಿಜೆಪಿಯು 62 ಶಾಸಕರನ್ನು ಹೊಂದಿದ್ದು, ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 28 ಮತಗಳನ್ನು ಹಂಚಿಕೆ ಮಾಡಿದರೆ 56 ಮತಗಳು ಆಗುತ್ತವೆ. ಉಳಿಯುವ 6 ಮತಗಳನ್ನು ಮೈತ್ರಿಪಕ್ಷ ಜೆಡಿಎಸ್ ಅಭ್ಯರ್ಥಿಗೆ ಹಂಚಿಕೆ ಮಾಡುವ ಸಾಧ್ಯತೆಯಿದೆ. ಜೆಡಿಎಸ್ ಕೇವಲ 18 ಶಾಸಕರನ್ನು ಹೊಂದಿದೆ. ಬಿಜೆಪಿಯಿಂದ ಉಳಿಯುವ 6 ಮತಗಳು, ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಸದಸ್ಯ ಜನಾರ್ದನ ರೆಡ್ಡಿ ಹಾಗೂ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ ಜೆಡಿಎಸ್ ಸಂಖ್ಯಾಬಲ 26ಕ್ಕೆ ತಲುಪಲಿದೆ. ಅದಾಗ್ಯೂ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಎರಡು ಮತಗಳ ಕೊರತೆಯಾಗಲಿದೆ.
ಸಂಖ್ಯಾಬಲದ ಹೋರಾಟದ ನಡುವೆ, ಮೂರು ಪಕ್ಷಗಳಿಗೂ ಅಡ್ಡಮತದಾನ ಭೀತಿಯೂ ಕಾಡುತ್ತಿದೆ. ಅಲ್ಲದೆ, ಯಾವುದೆ ಮತ ಅಸಿಂಧು ಆಗದಂತೆ ಎಚ್ಚರಿಕೆ ವಹಿಸುವುದು ಸವಾಲಾಗಿದೆ. ಇದೆಲ್ಲದರ ನಡುವೆ ಅಸಮಾಧಾನಿತ ಶಾಸಕರು ಮತದಾನಕ್ಕೆ ಗೈರು ಹಾಜರಾದಲ್ಲಿ ಗೆಲುವಿಗೆ ಬೇಕಿರುವ ಮತಗಳ ಪ್ರಮಾಣವು ಕಡಿಮೆಯಾಗಲಿದೆ. ಆದುದರಿಂದ, ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ರೆಸಾರ್ಟ್ನಿಂದ ನೇರವಾಗಿ ವಿಧಾನಸೌಧಕ್ಕೆ ಕರೆ ತಂದು ಮತದಾನ ಮಾಡಿಸುವ ಯೋಜನೆ ರೂಪಿಸಿದೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್: ಬಿ.ಕೆ.ಹರಿಪ್ರಸಾದ್, ಬಿ.ಎಸ್.ಶಿವಣ್ಣ, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ.ಮೋಹನ್ ಹಾಗೂ ವಿನಯ್ ಕಾರ್ತಿಕ್ ಪ್ರಕಾಶ್.
ಬಿಜೆಪಿ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ
ಜೆಡಿಎಸ್: ಗೋವಿಂದರಾಜು
ಶಾಸನಸಭೆಯ ಸದ್ಯದ ಸಂಖ್ಯಾಬಲ-222
ಕಾಂಗ್ರೆಸ್-134
ಬಿಜೆಪಿ-62
ಜೆಡಿಎಸ್-18
ಪಕ್ಷೇತರರು-2
ಸರ್ವೋದಯ ಪಕ್ಷ-1
ಕಲ್ಯಾಣರಾಜ್ಯ ಪ್ರಗತಿ ಪಕ್ಷ-1
ಬಿಜೆಪಿ ಉಚ್ಚಾಟಿತರು-3
ಸ್ಪೀಕರ್-1






