ಲಿಂಗನಮಕ್ಕಿ ಜಲಾಶಯ: ಭೂ ಸಂತ್ರಸ್ತರ ಬಾಕಿ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಲಿಂಗನಮಕ್ಕಿ ಜಲಾಶಯಕ್ಕಾಗಿ ತಮ್ಮ ಭೂಮಿ ಕಳೆದುಕೊಂಡ ಸಂತ್ರಸ್ತರು ಮತ್ತು ಉಳಿಮೆ ಜಾಗದ ಭೂಹಕ್ಕು ನೀಡುವಂತೆ 6 ದಶಕಗಳಿಂದ ಹೋರಾಟ ಮಾಡುತ್ತಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ವಿಕಾಸ ಸೌಧದ ಕಚೇರಿಯಲ್ಲಿ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಮತ್ತು ಕಾನೂನು ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, 1958ರಿಂದ 1969ರ ನಡುವೆ ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯ ಮತ್ತು ಜಲ ವಿದ್ಯುತ್ ಯೋಜನೆಯ ನಿರ್ಮಾಣದ ವೇಳೆ ರೈತರು ಗಣನೀಯ ಪ್ರಮಾಣದಲ್ಲಿ ತಮ್ಮ ಭೂಮಿ ಕಳೆದುಕೊಂಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಸುಮಾರು 9136 ಎಕರೆ 27 ಗುಂಟೆ ಅರಣ್ಯ ಭೂಮಿಯನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನು ಅಂದಿನ ಮೈಸೂರು ಅರಣ್ಯ ನಿಯಂತ್ರಣ-1900 ಸೆಕ್ಷನ್ 30ರ ಡಿ ರಿಸರ್ವ್ ಮಾಡಲಾಗಿತ್ತು. ಆದರೆ ಅದು ಅಧಿಸೂಚನೆ ಆಗಿರಲಿಲ್ಲ, ಬಿಡುಗಡೆಯಾದ ಈ ಜಾಗದಲ್ಲಿ ಸಂತ್ರಸ್ತ ಕುಟುಂಬಗಳು ವಾಸಿಸುತ್ತಿದ್ದು ಅವರಿಗೆ ಸರ್ಕಾರದ ಸೌಲಭ್ಯ ಲಭಿಸುತ್ತಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ ಎಂದರು.
ಇದನ್ನು ಮನಗಂಡು ಸರಕಾರ 2015-2017ರ ನಡುವೆ ಅರಣ್ಯ ಭೂಮಿಯನ್ನು ಡಿ ರಿಸರ್ವ್ ಮಾಡಿತು. ಆದರೆ ಈ ಆದೇಶಕ್ಕೆ ಮುನ್ನ ಕೇಂದ್ರ ಸರಕಾರದಿಂದ ಪೂರ್ವಾನುಮತಿ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯದ ಆದೇಶದನ್ವಯ ಸರಕಾರ ತನ್ನ ಆದೇಶ ಹಿಂಪಡೆಯಿತು. ಈಗ 9129 ಎಕರೆ ಭೂಮಿ ಡಿ ರಿಸರ್ವ್ ಮಾಡವಂತೆ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.







