ಭಾಷಾ ಗಣತಿಯಲ್ಲಿ ರಾಜಕೀಯ ಅಡಗಿದೆ: ಲಲಿತಾ ಸಿದ್ಧಬಸವಯ್ಯ
‘ತಾಜ್ ಮಹಲ್ಲಿನ ಖೈದಿಗಳು’ ಕೃತಿ ಲೋಕಾರ್ಪಣೆ

ಬೆಂಗಳೂರು, ಸೆ.17: ‘ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ(ಜಾತಿಗಣತಿ)ಯನ್ನು ಮಾಡಿದರೂ ಬಿಡುಗಡೆ ಮಾಡುವಲ್ಲಿ ಹೇಗೆ ರಾಜಕೀಯ ನಡೆಯುತ್ತಿದೆಯೋ, ಅದೇ ರೀತಿಯಲ್ಲಿ ದೇಶದ ಭಾಷಾ ಗಣತಿಯಲ್ಲೂ ರಾಜಕೀಯ ಅಡಗಿದೆ’ ಎಂದು ಕವಯತ್ರಿ ಲಲಿತಾ ಸಿದ್ದಬಸವಯ್ಯ ತಿಳಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ತಾಜ್ ಮಹಲ್ಲಿನ ಖೈದಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಭಾಷಾ ರಾಜಕೀಯ ನಡೆಯುತ್ತಿದೆ. ಅಖಿಲ ಭಾರತ ಭಾಷಾ ಸಂಸ್ಥೆ ಮತ್ತು ಖಾಸಗಿ ಸಂಸ್ಥೆಯೊಂದು ಭಾಷಾ ಸಮೀಕ್ಷೆಗಳನ್ನು ನಡೆಸಿವೆ. ಆದರೆ ಈ ಎರಡು ಸಮೀಕ್ಷೆಯ ಅಂಕಿ-ಅಂಶಗಳು ವಿಭಿನ್ನವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ 700 ಭಾಷೆಗಳಿದ್ದರೆ, ಮತ್ತೊಂದು ಸಮೀಕ್ಷೆಯಂತೆ 1800 ಭಾಷೆಗಳಿವೆ’ ಎಂದರು.
ಭಾಷೆ ಮತ್ತು ಉಪಭಾಷೆಗಳ ನಡುವಿನ ಸ್ಪಷ್ಟತೆಯನ್ನು ನಾವು ಇನ್ನೂ ತಿಳಿದುಕೊಳ್ಳದಿರುವುದು ಈ ಅಂಕಿ-ಅಂಶಗಳ ವ್ಯತ್ಯಾಸಕ್ಕೆ ಮೊದಲ ಕಾರಣವಾಗಿದೆ. ಮತ್ತೊಂದು ಕಾರಣ ಭಾಷೆ ರಾಜಕೀಯ. ಹರಿಯಾಣ, ಪಂಜಾಬ್ನಂತಹ ರಾಜ್ಯಗಳಲ್ಲಿ ಹಿಂದಿ ಪ್ರಾದೇಶಿಕ ಭಾಷೆಗಳನ್ನು ನುಂಗಿ ಹಾಕಿದೆ. ಮುಂಬೈನಲ್ಲಿ ಭಾಷಾ ಸಮೀಕ್ಷೆಯನ್ನು ನಡೆಸಿದರೆ ಶೇ.80ರಷ್ಟು ಜನ ಹಿಂದಿಯನ್ನು ಮಾತನಾಡಲಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲೂ ಹಿಂದಿ, ತೆಮಿಳು ಮತ್ತು ತೆಲುಗು ಮಾತನಾಡುವವರು ಹೆಚ್ಚಾಗಿದ್ದಾರೆ ಎಂದರು.
ಬರಹಗಾರ ಕೇಶವ ಮಳಗಿ ಮಾತನಾಡಿ, ‘ತಾಜ್ ಮಹಲ್ಲಿನ ಖೈದಿಗಳು’ ಇದೊಂದು ಅನುವಾದದ ಕೃತಿಯಾಗಿದ್ದು, ಕೃತಿಯ ಎಲ್ಲ ಕಥೆಗಳಲ್ಲಿ ದಾಂಪತ್ಯದ ಬಗ್ಗೆ ಇದೆ. ಮಾನವೀಯತೆ ಬಗ್ಗೆ, ಮಾನವನ ಸಂಬಂಧಗಳ ಬಗ್ಗೆ ಕಥೆಗಳಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದರು.
ಅನುವಾದಕರು ಮೂಲ ಲೇಖಕರಿಗೆ ಧಕ್ಕೆಯಾಗದಂತೆ ಅನುವಾದಿಸಬೇಕು. ಮೂಲದಲ್ಲಿರದ ವಿಷಯಗಳನ್ನು ಅನುವಾದಕರು ತಮ್ಮ ಜೇಬಿನಿಂದ ಬುಟ್ಟಿ ಇಳಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದು ಅವರು ಕಿವಿಮಾತು ಹೇಳಿದರು.
ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ‘ಇಂಗ್ಲಿಷ್, ಹಿಂದಿ, ಉರ್ದು ಭಾಷೆಯಿಂದ ಕನ್ನಡಕ್ಕೆ ಆತ್ಮಕತೆಗಳು ಹೆಚ್ಚಾಗಿ ಭಾಷಾಂತರವಾಗಿವೆ. ಆದರೆ ಮಳಯಾಳಂ ಭಾಷೆಯಿಂದ ತುಂಬ ಕಡಿಮೆಯಾಗಿ ಕೃತಿಗಳು ಭಾಷಾಂತರವಾಗಿವೆ’ ಎಂದು ಹೇಳಿದರು.
ಕೇರಳ ವಿಭಿನ್ನವಾಗಿ ಯೋಚನೆ ಮಾಡುವಂತಹ ರಾಜ್ಯವಾಗಿದೆ. ದೇಶದ ರಾಜಕೀಯ ಭಿನ್ನವಾಗಿರುವ ಈ ಕಾಲದಲ್ಲಿ ಕೇರಳ ಅದಕ್ಕೆ ವಿರಿದ್ಧವಾಗಿ ಸಂಘರ್ಷವನ್ನು ಮಾಡುತ್ತಿದೆ. ಅಲ್ಲಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳು ಆಸಕ್ತಿಯನ್ನು ಉಂಟು ಮಾಡುತ್ತವೆ. ಹಾಗಾಗಿ ಅಲ್ಲಿನ ಸಾಹಿತ್ಯ ಕನ್ನಡಕ್ಕೆ ಬರಬೇಕು ಎಂದು ಅವರು ಹೇಳಿದರು.
ಕನ್ನಡದಲ್ಲಿ ದಲಿತ, ಬಂಡಾಯ ಸಾಹುತ್ಯವಿದೆ. ಆದರೆ ಮುಸ್ಲಿಂ ಸಂವೇದನೆ ಹಿನ್ನೆಲೆಯ ನೋವುಗಳನ್ನು ವ್ಯಕ್ತಪಡಿಸುವ ಕಥೆ, ಕಾದಂಬರಿಗಳು ಅಪರೂಪವಾಗಿದೆ ಎಂದು ಅವರು ಹೇಳಿದರು.
ಕೃತಿಯ ಮೂಲ ಲೇಖಕ ಶಿಹಾಬುದ್ದೀನ್ ಪೊಯ್ತುಂಕಡವು ಮಾತನಾಡಿ, ಹೊಸಕಾಲದ ಸಾಹಿತ್ಯಗಳು ಪರಸ್ಪರ ಭಾಷೆಗಳಿಗೆ ಅನುವಾದಗೊಳ್ಳುವ ಸಂಖ್ಯೆ ಈಗ ಕಡಿಮೆಯಾಗಿದೆ. ಪ್ರಸ್ತುತ ವಚನ ಚಳವಳಿಯ ಅಗತ್ಯತೆ ಹೆಚ್ಚಾಗಿದೆ. ಕೋಮು ದ್ವೇಷಗಳ ದಳ್ಳುರಿ ನಡೆಯುತ್ತಿರುವ ಈ ಕಾಲಗಟ್ಟದಲ್ಲಿ ವಚನ ಚಳುವಳಿಯು ಮುನ್ನೆಲೆಗೆ ಬರಬೇಕು ಎಂದು ಆಶಿಸಿದರು.
ಅನುವಾದಕ ಸುನೈಪ್ ವಿಟ್ಲ ಮಾತನಾಡಿ, ಮಲಯಾಳಂ ನಿಂದ ಕನ್ನಡಕ್ಕೆ ಹಲವಾರು ಸಾಹಿತ್ಯಗಳು ಅನುವಾದಗೊಳ್ಳುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡದಿಂದ ಮಲಯಾಳಂಗೆ ಅನುವಾದವಾಗುವ ಕೃತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬೊಳುವಾರು ಮಹಮದ್ ಕುಂಞ, ಚರಣ್ ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು.







