ಬೆಂಗಳೂರಿನ ಮೂವರು ಸೇರಿ ರಾಜ್ಯಾದ್ಯಂತ 10 ಸರಕಾರಿ ಅಧಿಕಾರಿಗಳಿಗೆ ಸೇರಿದ 53 ಜಾಗಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು : ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ನಗರದ ಮೂವರು ಅಧಿಕಾರಿಗಳು ಸೇರಿದಂತೆ 10 ಮಂದಿ ಸರಕಾರಿ ನೌಕಕರ ಮನೆ, ಕಚೇರಿ ಸೇರಿದಂತೆ ಒಟ್ಟು 53 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, 49 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹೆಚ್ಚಿದ್ದಾರೆ.
ಬೆಂಗಳೂರಿನ ಲೋಕೋಪಯೋಗಿ ಇಲಾಖೆ ವಿಭಾಗ-1ರ ಸಹಾಯಕ ಅಭಿಯಂತರ ನರೇಂದ್ರ ಕುಮಾರ್ ಎಂ.ಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು 8,51,32,362 ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದು, 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು ಸೇರಿ ಅವರ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 5.95 ಕೋಟಿ ರೂ. ಆಗಿದೆ. ಚಿನ್ನಾಭರಣ, ಬ್ಯಾಂಕ್ ಠೇವಣಿ, ವಾಹನ ಸೇರಿ ಅವರ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 2,56,32,362 ರೂ. ಆಗಿದೆ. ಅವರ ಒಟ್ಟು ಅಸಮತೋಲನ ಆಸ್ತಿ ಮೌಲ್ಯ 5.75 ಕೋಟಿ ರೂ. ಆಗಿದೆ.
ಕೆಆರ್ಐಡಿಎಲ್ನ ಅಧೀಕ್ಷಕ ಅಭಿಯಂತರ ಪ್ರವೀಣ್ ಶ್ರೀಹರಿ ಬಿ. ಅವರಿಗೆ ಸೇರಿದ ಒಟ್ಟು 5 ಸ್ಥಳಗಳ ಮೇಲೆ ದಾಲಿ ನಡೆದಿದ್ದು, ಒಟ್ಟು 5,88,43,600 ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. 2 ನಿವೇಶನಗಳು, 2 ವಾಸದ ಮನೆಗಳು, 11 ಎಕರೆ ಕೃಷಿ ಜಮೀನು ಸೇರಿ ಅವರ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 4.60 ಕೋಟಿ ರೂ. ಆಗಿದೆ. ಚಿನ್ನಾಭರಣ, ಬ್ಯಾಂಕ್ ಠೇವಣಿ, ವಾಹನ ಸೇರಿ ಅವರ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 1,28,43,600 ರೂ. ಆಗಿದೆ. ಅವರ ಒಟ್ಟು ಅಸಮತೋಲನ ಆಸ್ತಿ ಮೌಲ್ಯ 4.33 ಕೋಟಿ ರೂ. ಆಗಿದೆ.
ಕೃಷಿ ಮಾರಾಟ ಮಹಾ ಮಂಡಳಿ ಹೆಚ್ಚುವರಿ ನಿರ್ದೇಶಕಿ ಪುಷ್ಪಾ ಡಿ.ಆರ್ ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ ನಡೆದಿದ್ದು, ಒಟ್ಟು 8,15,78,000 ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. 1 ನಿವೇಶನ, 3 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, 20 ಗುಂಟೆ ಕೃಷಿ ಜಮೀನು ಸೇರಿ ಒಟ್ಟು ಸ್ಥಿರ ಆಸ್ತಿಯ ಮೌಲ್ಯ 7,37,56,000 ರೂ. ಇದೆ. ಚಿನ್ನಾಭರಣ, ಬ್ಯಾಂಕ್ ಠೇವಣಿ, ವಾಹನ ಸೇರಿ ಅವರ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 78,22,000 ರೂ. ಆಗಿದೆ. ಅವರ ಒಟ್ಟು ಅಸಮತೋಲನ ಆಸ್ತಿ ಮೌಲ್ಯ 5.93 ಕೋಟಿ ರೂ. ಆಗಿದೆ.
ಚಿತ್ರದುರ್ಗದ ಜಲಾನಯನ ಅಭಿವೃದ್ಧಿ ಇಲಾಖೆಯ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಬಿ.ಎಚ್. ಅವರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧ ನಡೆದಿದ್ದು, 3 ನಿವೇಶನಗಳು, 1 ವಾಸದ ಮನೆ, 3 ಎಕರೆ 30 ಗುಂಟೆ ಕೃಷಿ ಜಮೀನು ಸೇರಿ ಒಟ್ಟು ಸ್ಥಿರ ಆಸ್ತಿಯ ಮೌಲ್ಯ 1,51,69,000 ರೂ. ಇದೆ. ಚಿನ್ನಾಭರಣ, ಬ್ಯಾಂಕ್ ಠೇವಣಿ, ವಾಹನ ಸೇರಿ ಅವರ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 43,51,050 ರೂ. ಆಗಿದೆ. ಅವರ ಒಟ್ಟು ಅಸಮತೋಲನ ಆಸ್ತಿ ಮೌಲ್ಯ 1.95 ಕೋಟಿ ರೂ. ಆಗಿದೆ.
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಸಹ ಪ್ರಾದ್ಯಾಪಕ ಶಂಕರ ಎಂ ಅವರ 6 ಸ್ಥಳಗಳಲ್ಲಿ ದಾಳಿ ನಡೆದಿದೆ. 3,27,83,650 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 1.87 ಕೋಟಿ ರೂ. ಅಸಮತೋಲನ ಆಸ್ತಿ ಆಗಿದೆ. ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಅಮೃತರಾವ್ ಅವರಿಗೆ ಸೇರಿದ 7 ಸ್ಥಳಗಳಲ್ಲಿ ಶೋಧ ನಡೆದಿದ್ದು, 39832094 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 2.65 ಕೋಟಿ ರೂ. ಅಸಮತೋಲನ ಆಸ್ತಿ ಆಗಿದೆ.
ಕುಂಬಳಗೂಡು ಗ್ರಾ.ಪಂ.ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಿಮ್ಮಯ್ಯಗೆ ಸೇರಿದ 6 ಸ್ಥಳಗಳಲ್ಲಿ ಶೋಧ ನಡೆದಿದೆ. 3,72,17,000 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 3.50 ಕೋಟಿ ರೂ. ಅಸಮತೋಲನ ಆಸ್ತಿ ಆಗಿದೆ. ಶಿವಮೊಗ್ಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಅಂಗಡಿ ಅವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆದಿದ್ದು, 1,94,86,084 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 1.94 ಕೋಟಿ ರೂ. ಅಸಮತೋಲನ ಆಸ್ತಿ ಆಗಿದೆ.
ಕೆಬಿಜೆಎನ್ಎಲ್ನ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ಅವರಿಗೆ ಸೇರಿದ 7 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, 9,43,95,713 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 6.11 ಕೋಟಿ ರೂ. ಅಸಮತೋಲನ ಆಸ್ತಿ ಆಗಿದೆ. ತುಮಕೂರಿನ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಮಧುಸೂದನ್ ಎನ್ ಅವರಿಗೆ ಸೇರಿದ ಒಟ್ಟು 5 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, 2,95,48,771 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 2.10 ಕೋಟಿ ರೂ. ಅಸಮತೋಲನ ಆಸ್ತಿ ಆಗಿದೆ.






