ದಿನಕ್ಕೆ ಕನಿಷ್ಟ 5 ಸಾವಿರ ಎಲ್ಪಿಜಿ ಸಿಲಿಂಡರ್ಗಳನ್ನಾದರೂ ಪೂರೈಕೆ ಮಾಡಿ: ಹೋಟೆಲ್ ಮಾಲಕರ ಸಂಘ ಆಗ್ರಹ

ಸಾಂದರ್ಭಿಕ ಚಿತ್ರ
ಬೆಂಗಳೂರು : ಸರಕಾರವು ರಾಜ್ಯದ ಎಲ್ಲ ಹೋಟೆಲ್ಗಳಿಗೆ ಕೇವಲ ಒಂದು ಸಾವಿರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಮಾತ್ರ ಪೂರೈಕೆ ಮಾಡಲಾಗುವುದು ಹೇಳಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಮತ್ತಷ್ಟ ಸಂಕಷ್ಟ ಉಂಟಾಗುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಟ 5 ಸಾವಿರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನಾದರೂ ಪೂರೈಕೆ ಮಾಡಬೇಕು ಎಂದು ಹೋಟೆಲ್ ಮಾಲಕರ ಸಂಘ ಆಗ್ರಹಿಸಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಸುಬ್ರಮಣ್ಯ ಹೊಳ್ಳ, ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ರಾಜ್ಯದ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೇವಲ ಐದು ದಿನಗಳಲ್ಲಿ 100 ಕೋಟಿ ರೂ.ಗೂ ಅಧಿಕ ನಷ್ಟವನ್ನು ಅನುಭವಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿರುವ ಎಲ್ಲ ಹೋಟೆಲ್ಗಳಿಗೆ ಪ್ರತಿನಿತ್ಯ ಸುಮಾರು 40 ಸಾವಿರಕ್ಕೂ ಅಧಿಕ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ ಒಂದು ಸಾವಿರ ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಸರಕಾರ ಹೇಳಿದ್ದು, ಇದರಿಂದ ಉದ್ಯಮಕ್ಕೆ ನಷ್ಟವಾಗುತ್ತದೆ. ಈಗಾಗಲೇ ಎಲ್ಪಿಜಿ ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್ಗಳಲ್ಲಿ ಅಡುಗೆ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಹೀಗಾಗಿ ಸರಕಾರವು ಹೋಟೆಲ್ ಉದ್ಯಮಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮ ಸಂಘಟನೆಯ ವ್ಯಾಪ್ತಿಯಲ್ಲಿರುವ ಹೋಟೆಲ್ಗಳನ್ನು ಇದುವರೆಗೆ ಬಂದ್ ಮಾಡಿಲ್ಲ. ಸಾಧ್ಯವಾಗುವ ಮಟ್ಟಿಗೆ ವಿದ್ಯುತ್ ಒಲೆ, ಸೌದೆಯನ್ನು ಬಳಕೆ ಮಾಡಿ, ಅಡುಗೆಯನ್ನು ಮಾಡಲಾಗುತ್ತಿದೆ. ಇನ್ನು ಮುಂದೆಯೂ ಹೋಟೆಲ್ಗಳನ್ನು ಬಂದ್ ಮಾಡುವ ಉದ್ದೇಶವಿಲ್ಲ. ಆದರೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಕಡಿಮೆಯಾದರೆ ಬಹುತೇಕ ಹೋಟಲ್ಗಳನ್ನು ಬಂದ್ ಮಾಡುವ ಪರಿಸ್ಥಿತಿ ಬರಬಹುದು ಎಂದು ಅವರು ಹೇಳಿದರು.
ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇವೆ. ಒಟ್ಟು ಸಿಲಿಂಡರ್ ಪೂರೈಕೆಯಲ್ಲಿ ಹೋಟೆಲ್ ಉದ್ಯಮಕ್ಕೆ ಕನಿಷ್ಠ ಕೋಟಾ ನೀಡಬೇಕು ಎಂದು ಮನವಿ ಮಾಡುತ್ತೇವೆ. ಅವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಇದಕ್ಕಾಗಿ ದಿಲ್ಲಿಗೆ ಹೋಗಲು ಸಿದ್ಧತೆಯನ್ನೂ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
‘ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಡುಗೆ ಅನಿಲ, ವಾಣಿಜ್ಯ ಸಿಲಿಂಡರ್ಗಳ ಕೊರತೆ ಸೃಷ್ಟಿಯಾಗಿದೆ. ಆಟೋರಿಕ್ಷಾ, ಹೊಟೇಲ್ ಉದ್ಯಮಕ್ಕೆ ಭೀತಿ ಆವರಿಸಿದ್ದು, ಹೊಟೇಲ್ನ ಊಟದ ಮೆನು ಕಡಿತ ಮಾಡಲಾಗಿದೆ. ರಾಜ್ಯದಲ್ಲಿನ ಹೋಟೆಲ್ಗಳಿಗೆ ಪ್ರತಿನಿತ್ಯ 44 ಸಾವಿರ ವಾಣಿಜ್ಯ ಸಿಲಿಂಡರ್ಗಳ ಅಗತ್ಯವಿದೆ. ರಾಜ್ಯದಲ್ಲಿ 4ಲಕ್ಷಕ್ಕೂ ಅಧಿಕ ಆಟೋರಿಕ್ಷಾಗಳಿದ್ದು, ಆ ಪೈಕಿ ಬೆಂಗಳೂರು ನಗರದಲ್ಲಿ 1.75ಲಕ್ಷ ರಿಕ್ಷಾಗಳಿದ್ದು, ಎಲ್ಪಿಜಿ ಸಿಲಿಂಡರ್ಗಳ ಸಮಸ್ಯೆ ಹಿನ್ನೆಲೆಯಲ್ಲಿ ರಿಕ್ಷಾಗಳನ್ನು ಸ್ಥಗಿತಗೊಳಿಸಲಾಗುತ್ತಿದೆ’







