ರಾಜ್ಯಸಭೆಗೆ ಅವಿರೋಧ ಆಯ್ಕೆ: "ಇದು ನನ್ನ ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು" ಎಂದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಆದರೆ, ಇದು ನನ್ನ ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ವಿಧಾನಸೌಧದಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆ ಚುನಾವನಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು, ಇದು ನನ್ನ ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು ಎಂದು ನುಡಿದರು.
ಮಧ್ಯಪ್ರದೇಶದಲ್ಲಿ ರಾಜ್ಯಸಭಾ ಸದಸ್ಯರ ಆಯ್ಕೆ ಕುರಿತು ಮಾತನಾಡಿ, ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ ವಿಶೇಷ ಪ್ರಕರಣ. ಸುಪ್ರೀಂಕೋರ್ಟ್ ಹೇಳಿದಂತೆ ನಾವು ಹೈಕೋರ್ಟ್ಗೆ ಹೋಗುತ್ತೇವೆ. ಮಧ್ಯಪ್ರದೇಶದಲ್ಲಿ ನಡೆದಿರುವುದು ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ. ಪ್ರಧಾನಿ ನರೇಂದ್ರ ಮೋದಿ ಇಲ್ಲದೇ ಇದು ಆಗುತ್ತಿರಲಿಲ್ಲ, ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಎಂದು ತಿಳಿಸಿದರು.
ತನ್ನ ಜನರನ್ನು ಎಲ್ಲೆಡೆ ಕೂರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಹಸ್ತಕ್ಷೇಪ ಇರಬಾರದು.ಆದರೆ, ಆರೆಸ್ಸೆಸ್ ಏಜೆಂಟ್ಗಳನ್ನು ಎಲ್ಲೆಡೆ ಇರಿಸಲಾಗಿದೆ. ನೀತಿ ನಿಯಮಗಳನ್ನು ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿದ ಅವರು, 13ನೆ ಬಾರಿ ಜನಪ್ರತಿನಿಧಿಯಾಗುವ ಅವಕಾಶ ಸಿಕ್ಕಿದೆ. ಕಲಬುರಗಿ ಜನತೆಗೆ ಧನ್ಯವಾದ ಹೇಳುತ್ತೇವೆ. ಜೀವನದಲ್ಲಿ ಸತತವಾಗಿ ಈ ಅವಕಾಶ ಸಿಗುತ್ತಿರುವುದು ಕಾಂಗ್ರೆಸ್ ಕೊಡುಗೆಯಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯಿಂದ ಇದುವರೆಗೆ ನನಗೆ ಅವಕಾಶ ನೀಡಿದ್ದಾರೆ ಎಂದರು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನನ್ನ ಜೊತೆ ಇದ್ದು ಪ್ರೋತ್ಸಾಹ ನೀಡಿದ್ದಾರೆ. ರಾಹುಲ್ ಗಾಂಧಿ ನನ್ನ ಜೊತೆ ಸೌಹಾರ್ದತೆಯಿಂದ ವರ್ತಿಸುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಜ್ಯದ ಜನರು ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಯಾವಾಗಲೂ ಯಾವುದೇ ಕೆಲಸದಲ್ಲಿ ಮಾಧ್ಯಮ ಬೆಂಬಲ ಇಲ್ಲದೇ ಯಾರೂ ಕೂಡ ಜನರಿಗೆ ಪರಿಚಿತರಾಗುವುದಿಲ್ಲ. ಲೋಪದೋಷವನ್ನು ಎತ್ತಿ ಹಿಡಿಯುವುದು ಮಾಧ್ಯಮದವರ ಕೆಲಸವಾಗಿದೆ ಎಂದು ಅವರು ಅಭಿನಂದಿಸಿದರು.






