ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ನಿಧನ | ತಮ್ಮ ಜೀವನವನ್ನು ʼಸಬೀಲುರ್ರಶಾದ್ʼಗೆ ಮುಡಿಪಾಗಿಟ್ಟದ್ದ ʼಅಮೀರೆ ಶರೀಅತ್ʼ

ಬೆಂಗಳೂರು : ರಾಜ್ಯದ ಪ್ರಖ್ಯಾತ ಇಸ್ಲಾಮೀ ವಿದ್ಯಾಲಯ, ಬೆಂಗಳೂರಿನ ದಾರುಲ್ ಉಲೂಮ್ ಸಬೀಲುರ್ರಶಾದ್ ಮುಖ್ಯಸ್ಥ, ಅಮೀರೆ ಶರೀಅತ್ ಕರ್ನಾಟಕ ಶೇಖುಲ್ ಹದೀಸ್ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ(75) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರು ಇಂದು ಮುಂಜಾನೆ ಫಜರ್ ನಮಾಝ್ ಬಳಿಕ ತಮ್ಮ ಮನೆಯಲ್ಲಿ ಇಹಲೋಕವನ್ನು ತ್ಯಜಿಸಿದರು.
ಕಳೆದ ಮೂರು ತಿಂಗಳಿನಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿತು. ಈ ಹಿನ್ನೆಲೆಯಲ್ಲಿ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆನಂತರ, ವೈದ್ಯರ ಸಲಹೆ ಮೇರೆಗೆ ಒಂದು ತಿಂಗಳಿನಿಂದ ಗೋವಿಂದಪುರದಲ್ಲಿರುವ ಅವರ ಮನೆಯಲ್ಲಿಯೇ ವೈದ್ಯಕೀಯ ಆರೈಕೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಸಾರ್ವಜನಿಕರು ಇಂದು ಹಝ್ರತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಅನುಕೂಲವಾಗುವಂತೆ ಸಬೀಲುರ್ರಶಾದ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಬೀಲುರ್ರಶಾದ್ ಆವರಣದಲ್ಲಿ ನಮಾಝೆ ಜನಾಝ ನೆರವೇರಿಸಿ, ಅಲ್ಲಿಯೇ ದಫನ್ ಕಾರ್ಯ ನಡೆಯಲಿದೆ.
ಹಝ್ರತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ಸಾರ್ವಜನಿಕರು ಸಬೀಲುರ್ರಶಾದ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಝ್ರತ್ ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸಾರ್ವಜನಿಕರು ಹಾಗೂ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಬೀಲುರ್ರಶಾದ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.
ಹಝ್ರತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖವಿ ಅವರ ನಿಧನದ ನಂತರ ಅವರ ನೆಚ್ಚಿನ ಶಿಷ್ಯರಾಗಿದ್ದ ಸಗೀರ್ ಅಹ್ಮದ್ ಖಾನ್ ಅವರನ್ನು ಮೂರನೇ ಅಮೀರೆ ಶರೀಅತ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಕೇಂದ್ರ ಸರಕಾರದ ಸಿಎಎ, ಎನ್ ಆರ್ ಸಿ ವಿರೋಧಿ ಹೋರಾಟ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ದೇಶವ್ಯಾಪಿ ಹಮ್ಮಿಕೊಂಡಿರುವ "ವಕ್ಫ್ ಉಳಿಸಿ, ಸಂವಿಧಾನ ಉಳಿಸಿ" ಚಳವಳಿಯ ಸಂಚಾಲಕರಾಗಿ ರಾಜ್ಯದಲ್ಲಿ ಮುನ್ನಡೆಸುತ್ತಿದ್ದರು.
ಜೀವನ ಮತ್ತು ಸೇವೆಗಳು:
ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರು ಮೈಸೂರು ಜಿಲ್ಲೆಯಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಮಖ್ತಬ್ನಲ್ಲಿ ಪೂರೈಸಿದ ನಂತರ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಾರುಲ್ ಉಲೂಮ್ ಸಬೀಲುರ್ರಶಾದ್ ಗೆ ಸೇರಿದರು. ಅಲ್ಲಿ ಅವರು ಪವಿತ್ರ ಕುರ್ ಆನ್ ಅನ್ನು ಕಂಠಪಾಠ (ಹಿಫ್ಝ್) ಮಾಡಿದರು ಮತ್ತು ನಂತರ ಅದೇ ಸಂಸ್ಥೆಯಲ್ಲಿ ಆಲಿಮಿಯತ್ ಹಾಗೂ ಫಝಿಲತ್ ಪದವಿಗಳನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರೈಸಿದರು.
ವಿದ್ಯಾಭ್ಯಾಸದ ನಂತರ, ಅವರ ಪ್ರತಿಭೆಯನ್ನು ಗುರುತಿಸಿ ಅದೇ ಸಂಸ್ಥೆಯಲ್ಲಿ ಅಧ್ಯಾಪಕರನ್ನಾಗಿ ನೇಮಿಸಲಾಯಿತು. ಅವರು ಪ್ರಾಥಮಿಕ ಹಂತದ ಪುಸ್ತಕಗಳಿಂದ ಬೋಧನೆಯನ್ನು ಆರಂಭಿಸಿ, ಹಂತಹಂತವಾಗಿ ಉನ್ನತ ಸ್ಥಾನಕ್ಕೇರಿದರು. ತಮ್ಮ ಅಗಾಧವಾದ ಜ್ಞಾನದಿಂದಾಗಿ ಅವರು ಸಬೀಲುರ್ರಶಾದ್ನ 'ಶೇಖ್-ಉಲ್-ತಫ್ಸೀರ್' (ಕುರ್ ಆನ್ ವ್ಯಾಖ್ಯಾನಕಾರರ ಮುಖ್ಯಸ್ಥರು) ಮತ್ತು 'ಶೇಖ್-ಉಲ್-ಹದೀಸ್' (ಪ್ರವಾದಿ ವಚನಗಳ ಬೋಧನಾ ಮುಖ್ಯಸ್ಥರು) ಎಂಬ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದರು.
ಹಝ್ರತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖವಿ ಅವರ ನಿಧನದ ನಂತರ, ಮೌಲಾನಾ ಸಗೀರ್ ಅಹ್ಮದ್ ರಶಾದಿ ಅವರನ್ನು ದಾರುಲ್ ಉಲೂಮ್ ಸಬೀಲುರ್ರಶಾದ್ನ ಮುಖ್ಯಸ್ಥರನ್ನಾಗಿ (ಮೊಹ್ತಮಿಮ್) ನೇಮಿಸಲಾಯಿತು. ಇದರೊಂದಿಗೆ ರಾಜ್ಯದ ಮುಸ್ಲಿಮ್ ಸಮುದಾಯದ ಅತ್ಯುನ್ನತ ಧಾರ್ಮಿಕ ಹುದ್ದೆಯಾದ 'ಅಮೀರ್-ಎ-ಶರೀಅತ್' ಆಗಿ ಅವರು ಸರ್ವಾನುಮತದಿಂದ ಆಯ್ಕೆಯಾದರು.
ರಾಷ್ಟ್ರೀಯ ಮಟ್ಟದ ಕೊಡುಗೆಗಳು:
ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ರಾಷ್ಟ್ರೀಯ ಮಟ್ಟದಲ್ಲೂ ಸಕ್ರಿಯರಾಗಿದ್ದರು. ಅವರು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ (AIMPLB) ಕಾರ್ಯಕಾರಿ ಸಮಿತಿಯ ಪ್ರಭಾವಿ ಸದಸ್ಯರಾಗಿದ್ದರು. ಅಖಿಲ ಭಾರತ ಮಿಲ್ಲಿ ಕೌನ್ಸಿಲ್ನ ಮಾರ್ಗದರ್ಶಕರಾಗಿ ಸಮುದಾಯದ ಏಳಿಗೆಗಾಗಿ ಶ್ರಮಿಸಿದರು.
ಧಾರ್ಮಿಕ ಜಾಗೃತಿಗಾಗಿ ಅವರು 'ಸಲ್ಸಬೀಲ್' ಎಂಬ ಮಾಸಿಕ ಪತ್ರಿಕೆಯನ್ನು ಮರುಪ್ರಾರಂಭಿಸಿ ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಮೌಲಾನಾ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅವರು ಕರ್ನಾಟಕದ ಮುಸ್ಲಿಮ್ ಸಮುದಾಯದ ಒಗ್ಗಟ್ಟಿಗಾಗಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣವನ್ನು ಪಡೆದು ದೇಶದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಜೀವನವನ್ನು ʼಸಬೀಲುರ್ರಶಾದ್ʼ ಗೆ ಮುಡಿಪಾಗಿಟ್ಟ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ:
"ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರು ತಮ್ಮ ಜೀವನವನ್ನು ಸಬೀಲುರ್ರಶಾದ್ ಸಂಸ್ಥೆಗೆ ಮುಡಿಪಾಗಿಟ್ಟಿದ್ದರು. ಅವರ ಸಾವಿರಾರು ಶಿಷ್ಯರ ಪೈಕಿ ತಾನು ಒಬ್ಬ. ಹಝ್ರತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖವಿ ಅವರ ನಿಧನದ ಬಳಿಕ ಸಬೀಲುರ್ರಶಾದ್ ಸಂಸ್ಥೆಯ ಮುಖ್ಯಸ್ಥರನ್ನಾಗಿ ಅವರ ಪುತ್ರ ಮೌಲಾನ ಅಹ್ಮದ್ ಮಾಝ್ ಅವರನ್ನು ನೇಮಿಸಲಾಗಿತ್ತು. ಆದರೆ, ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಮೌಲಾನ ಸಗೀರ್ ಅಹ್ಮದ್ ಖಾನ್ ಅವರನ್ನು ನೇಮಿಸಲಾಯಿತು. ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೆ ಅವರು ಸಬೀಲುರ್ರಶಾದ್ ಸಂಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಿದರು"
► ಮೌಲಾನಾ ಮಕ್ಸೂದ್ ಇಮ್ರಾನ್, ಖತೀಬ್ ಒ ಇಮಾಮ್, ಜಾಮಿಯಾ ಮಸೀದಿ, ಸಿಟಿ ಮಾರುಕಟ್ಟೆ, ಬೆಂಗಳೂರು.







