ಎಪಿರಾಕ್ ಕಂಪನಿಯಿಂದ 1,500 ಕೋಟಿ ರೂ.ಹೂಡಿಕೆ : ಸಚಿವ ಎಂ.ಬಿ.ಪಾಟೀಲ್
ಸ್ವೀಡನ್ನಲ್ಲಿ ಬಂಡವಾಳ ಹೂಡಿಕೆಯ ಯಶಸ್ವಿ ರೋಡ್ ಶೋ

ಬೆಂಗಳೂರು : ಗಣಿಗಾರಿಕೆ ಮತ್ತು ಮೂಲಸೌಲಭ್ಯ ವಲಯಗಳಲ್ಲಿ ಬಳಕೆಯಾಗುವ ಯಂತ್ರೋಪಕರಣ ತಯಾರಿಸುವ ಸ್ವೀಡನ್ನಿನ ಎಪಿರಾಕ್ ಕಂಪನಿಯು, ರಾಜ್ಯದಲ್ಲಿ 2030ರ ವೇಳೆಗೆ ಒಟ್ಟು 1,500 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬಂಡವಾಳ ಹೂಡಿಕೆ ಆಕರ್ಷಿಸಲು ಸ್ವೀಡನ್ ಪ್ರವಾಸದಲ್ಲಿ ಇರುವ ಎಂ.ಬಿ.ಪಾಟೀಲ್ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆ ಬುಧವಾರ ನಡೆದ ಸಭೆಯಲ್ಲಿ, ಎಪಿರಾಕ್ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಅರುಣ್ ಕುಮಾರ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ 500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುವ ಎಪಿರಾಕ್ನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವು ಕಂಪನಿಯ ಜಾಗತಿಕ ‘ಆರ್ ಆ್ಯನ್ ಡಿ’ ಉತ್ಪಾದನೆಗೆ ಶೇ.25ರಷ್ಟು ಕೊಡುಗೆ ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಹೂಡಿಕೆ ಮಾಡಲಾಗುವುದು. 2030ರ ವೇಳೆಗೆ ಹೆಚ್ಚುವರಿಯಾಗಿ 1 ಸಾವಿರ ಕೋಟಿ ರೂ. ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಲಾಗುವುದು ಎಂದು ಅರುಣ್ ಕುಮಾರ್ ಅವರು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಆಹಾರ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ಕ್ಷೇತ್ರದ ಜಾಗತಿಕ ದಿಗ್ಗಜ ಕಂಪನಿ ಟೆಟ್ರಾ ಪ್ಯಾಕ್ ನ ಮುಖ್ಯಸ್ಥರ ಜೊತೆ ಸಚಿವರು ನಾವೀನ್ಯತೆ, ಸುಸ್ಥಿರತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯ ಸರಕಾರದ ಜೊತೆಗಿನ ಪಾಲುದಾರಿಕೆ ಸಾಧ್ಯತೆಗಳನ್ನು ಚರ್ಚಿಸಿದ್ದಾರೆ.
ತನ್ನ ಬಹುತೇಕ ಇಂಜಿನಿಯರಿಂಗ್ ಮತ್ತು ಡಿಸೈನ್ ಕೆಲಸಗಳನ್ನು ಭಾರತಕ್ಕೆ ವರ್ಗಾಯಿಸಲು ಉದ್ದೇಶಿಸಿರುವುದಾಗಿ ಸ್ವೀಡನ್ನಿನ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಕಂಪನಿ ‘ಎಸ್ಎಎಬಿ’ ಮುಖ್ಯ ಕಾರ್ಯತಂತ್ರ ಅಧಿಕಾರಿ ಕ್ರಿಸ್ತಿಯನ್ ಹೆಡೆಲಿನ್ ಅವರು ನಿಯೋಗದ ಗಮನಕ್ಕೆ ತಂದಿದ್ದಾರೆ.
ಈ ಎರಡೂ ವಲಯಗಳಲ್ಲಿನ ರಾಜ್ಯದ ಸಾಮಥ್ರ್ಯಗಳನ್ನು ಹಾಗೂ ವಹಿವಾಟು ವಿಸ್ತರಣೆಗೆ ಇರುವ ವಿಪುಲ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟ ರಾಜ್ಯದ ನಿಯೋಗದ ವಿವರಣೆಗಳಿಂದ ಪ್ರಭಾವಿತರಾದ ಹೆಡೆಲಿನ್ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿನ ಅತ್ಯಾಧುನಿಕ ಡಿಸೈನ್ ಮತ್ತು ತಯಾರಿಕಾ ವಲಯದ ಸಾಮಥ್ರ್ಯಗಳನ್ನು, ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಸಚಿವರು ಸ್ವೀಡನ್ನಿನ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಿಗೆ ವಿವರಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಇಂಜಿನಿಯರ್ ವೀರಭದ್ರಯ್ಯ ಸೇರಿದಂತೆ ಇತರರು ನಿಯೋಗದಲ್ಲಿ ಇದ್ದಾರೆ.







