ಮುಸ್ಲಿಂ ಯುವತಿಯರ ಮತಾಂತರ ಮಾಡಬೇಕಾಗುತ್ತದೆ: ಆರೂಢ ಭಾರತೀ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ
![ಮುಸ್ಲಿಂ ಯುವತಿಯರ ಮತಾಂತರ ಮಾಡಬೇಕಾಗುತ್ತದೆ: ಆರೂಢ ಭಾರತೀ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ ಮುಸ್ಲಿಂ ಯುವತಿಯರ ಮತಾಂತರ ಮಾಡಬೇಕಾಗುತ್ತದೆ: ಆರೂಢ ಭಾರತೀ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ](https://www.varthabharati.in/h-upload/2023/08/13/1179896-santa.gif)
ಬೆಂಗಳೂರು: ‘ಮುಸ್ಲಿಂ ಯುವತಿಯರನ್ನು ಗುರಿಯಾಗಿಸಿಕೊಂಡು ಪ್ರೀತಿಸಿ, ಮತಾಂತರ ಮಾಡಬೇಕಾಗುತ್ತದೆ’ ಎಂದು ಸಿದ್ದರೂಢ ಇಂಟರ್ ನ್ಯಾಷನಲ್ ಗುರು ಕುಲಮ್ನ ಆರೂಢ ಭಾರತೀ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ ನೀಡುರುವುದಾಗಿ ವರದಿಯಾಗಿದೆ.
ರವಿವಾರ ಮಲ್ಲೇಶ್ವರಂನ ಯತಿರಾಜ ಮಠದ ಆವರಣದಲ್ಲಿ ‘ವಿಶ್ವ ಹಿಂದೂ ಪರಿಷತ್’ ಆಯೋಜಿಸಿದ್ದ ‘ಸಂತ ಸಮಾವೇಶ’ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಮರಿಗಷ್ಟೇ ಗಂಡಸ್ತನ, ಮೀಸೆ ಇರುವುದಲ್ಲ. ಹಿಂದೂಗಳಿಗೂ ಇದ್ದು, ಇವರು ಮುಸ್ಲಿಮ್ ಸಮುದಾಯದ ಯುವತಿಯರನ್ನು ಪ್ರೀತಿಸಿ ಮತಾಂತರ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.
‘ಭಾರತದ ಸ್ವಾತಂತ್ರ್ಯ ನಂತರ ಹಿಂದೂ, ಜೈನ, ಸಿಖ್, ಬೌದ್ದರ ಜನಸಂಖ್ಯೆ ಇಳಿಕೆಯಾಗುತ್ತಿದೆ.ಆದರೆ, ಮುಸ್ಲಿಮ್, ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಲವಂತದ ಮತಾಂತರದ ಸಂಕೇತ ಎಂದ ಅವರು, ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯದ ಸಂಖ್ಯೆ ಹೆಚ್ಚಾಗಿದ್ದೆ ಹಿಂದೂಗಳಿಂದ. ಲವ್ ಜಿಹಾದ್, ಮತಾಂತರ ಮೂಲಕ ಜನಸಂಖ್ಯೆ ಹೆಚ್ಚು ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.
ನಿರ್ಣಯ: ‘ರಾಜ್ಯದಲ್ಲಿ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದುಕೊಳ್ಳಬಾರದು ಎಂದು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಸಂತ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ
ಹಿಂದೂ ಸಮಾಜದ ವಿವಿಧಮಠದ ಸ್ವಾಮಿಜಿಗಳು ಗೋಹತ್ಯೆ, ಮತಾಂತರ, ಲವ್ ಜಿಹಾದ್, ಹಿಂದೂ ಅವಿಭಕ್ತ ಕುಟುಂಬಪದ್ಧತಿ, ಪರಿಸರ ಸಾಮರಸ್ಯ ಸೇರಿದಂತೆ ಹಲವುವಿಷಯಗಳ ಬಗ್ಗೆ ಚರ್ಚಿಸಿ, ನಂತರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಮತ್ತು ಕರ್ನಾಟಕ ಧಾರ್ಮಿಕ ಹಕ್ಕು, ಸ್ವಾತಂತ್ರ್ಯ ಕಾಯ್ದೆಗಳನ್ನು ಸರಕಾರ ವಾಪಸ್ ಪಡೆಯಬಾರದು ಎನ್ನುವ ಎರಡು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದರು.
ಈ ಬಗ್ಗೆ ಮೇಲುಕೋಟೆ ಯದುಗಿರಿ ಯತಿರಾಜ ಸ್ವಾಮೀಜಿ ಮಾತನಾಡಿ, ‘ಮತಾಂತರ ನಿಷೇಧವೂ ರಾಜಕೀಯ ವಿಷಯವಲ್ಲ. ಈ ಬಗ್ಗೆ ಕಾನೂನನ್ನು ಹಿಂಪಡೆಯಬಾರದು ಎಂದು ಸರಕಾರವನ್ನು ಒತ್ತಾಯ ಮಾಡುತ್ತೇವೆ. ಮತಾಂತರ ನಿಷೇಧ ಕಾನೂನು ಹಿಂಪಡೆಯಬಾರದು ಎಂದು ನಿರ್ಣಯ ಅಂಗೀಕರಿಸಿದ್ದು, ಸರಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ಹೇಳಿದರು.
ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾತನಾಡಿ, ‘ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯ, ಧರ್ಮ ಕಾಪಾಡುವ ಬಗ್ಗೆ ಚರ್ಚೆ ನಡೆದಿದೆ. ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಯಾವುದೇ ಸಡಿಲಿಕೆ ಆಗಬಾರದು. ಇನ್ನಷ್ಟು ಕಾಯ್ದೆ ಬಲಪಡಿಸಬೇಕು ಎಂದು ನಿರ್ಧಾರ ಮಾಡಲಾಗಿದೆ.ಅವರವರ ಧರ್ಮವನ್ನು ಪಾಲನೆ ಮಾಡೋದು ಸರಿ. ಆದರೆ, ಮತಾಂತರ ಮಾಡುವಂತೆ ಆಗಬಾರದು’ ಎಂದರು.