UPI ಮೇಲೆ ಶುಲ್ಕ: ಜನಸಾಮಾನ್ಯರ ಜೇಬಿನ ಮೇಲೆ ‘ಸರ್ಜಿಕಲ್ ಸ್ಟ್ರೈಕ್' : ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು : 2,000 ರೂ.ಗಿಂತ ಮೇಲ್ಪಟ್ಟ ಯುಪಿಐ ವಹಿವಾಟಿನ ಮೇಲೆ ಶುಲ್ಕದ ಬರೆ ಎಳೆದಿದ್ದು, 'ಮೋದಿ ಟ್ಯಾಕ್ಸ್' ಮೂಲಕ ಕೇಂದ್ರ ಸರಕಾರ ಮತ್ತೊಮ್ಮೆ ಜನರ ಜೇಬು ಲೂಟಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಸಚಿವ ಶಿವರಾಜ್ ತಂಗಡಗಿ ಟೀಕಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಿರುದ್ಯೋಗ, ಹಣದುಬ್ಬರ, ಆದಾಯ ಕೊರತೆಯಿಂದ ಈಗಾಗಲೇ ಜನರ ಜೇಬು ಖಾಲಿ ಆಗಿದೆ. ಹೀಗಿದ್ದರೂ ದಿನಕ್ಕೊಂದು ಶುಲ್ಕದ ಹೆಸರಿನಲ್ಲಿ ಜನರ ಬದುಕಿನ ಮೇಲೆ ಗದಾಪ್ರಹಾರ ಅಕ್ಷಮ್ಯ. ಗ್ರಾಹಕರಿಗೆ ಉಚಿತ, ವರ್ತಕರಿಗೆ ಮಾತ್ರ ಶುಲ್ಕ ಎಂದು ಪ್ರಚಾರ ಮಾಡುತ್ತಿದೆ. ವರ್ತಕರ ಮೇಲೆ ಬಿದ್ದ ಭಾರ ಅಂತಿಮವಾಗಿ ವರ್ಗಾವಣೆ ಆಗುವುದು ಗ್ರಾಹಕರ ಮೇಲೆಯೇ ಎಂಬುದು ಸರ್ವವಿದಿತ. 2,000 ರೂ. ಮೇಲ್ಪಟ್ಟ ಮೊತ್ತದ ಪಾವತಿಗೆ 0.40 ಶುಲ್ಕ ನಿಗದಿ ಮಾಡಿದ್ದು, ಅ.15 ರಿಂದ ಜನರ ಸುಲಿಗೆ ಶುರುವಾಗಲಿದೆ. 8 ರೂ.ಗಳಿಂದ 300 ರೂ.ವರೆಗೆ ಪ್ರತಿ ವಹಿವಾಟಿನ ಮೇಲೆ ಹೊರೆ ಬೀಳಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ರೈಲ್ವೆ, ಟೆಲಿಕಾಂ ಸೇವೆ, ವಿಮೆ ಪಾವತಿ ಮೇಲೂ 5 ರೂ. ಶುಲ್ಕ ವಸೂಲಿ ಪ್ರಸ್ತಾಪಿಸಿದೆ. ಡಿಜಿಟಲ್ ಭಾರತದ ಹೆಸರಿನಲ್ಲಿ ಕ್ಯಾಶ್ ಲೆಸ್ ಇಂಡಿಯಾ ಎಂದು ಪ್ರಚಾರ ಮಾಡಿದ್ದು, ಜನರ ಜೇಬಿಗೆ ಡಿಜಿಟಲ್ ಕತ್ತರಿ ಹಾಕುವುದಕ್ಕಾಗಿಯೇ? ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರಿಗೂ ಯುಪಿಐ ಇಂದು ಅನಿವಾರ್ಯವಾಗಿದೆ. ಅದರ ಮೇಲೆ ಶುಲ್ಕ ವಿಧಿಸುವುದು ಜನವಿರೋಧಿ ನಿರ್ಧಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಪಿಐಯಿಂದ ಡಿಜಿಟಲ್ ಕ್ರಾಂತಿ ತಂದೆವು ಎಂದು ಬೆನ್ನುತಟ್ಟಿಕೊಂಡವರು, ಈಗ ಅದೇ ಯುಪಿಐ ಮೇಲೆ ಶುಲ್ಕ ಹಾಕಿ ಜನರ ಜೇಬಿಗೆ ಬೆನ್ನು ಮೂಳೆ ಮುರಿಯಲು ಹೊರಟಿದ್ದಾರೆ. ನಕಲಿ ಅಭಿವೃದ್ಧಿ ದರ ತೋರಿಸಿಕೊಂಡು ದೇಶದ ಆರ್ಥಿಕತೆಯನ್ನು ಬರ್ಬಾದ್ ಮಾಡಿರುವ ಕೇಂದ್ರ ಸಎಕಾರದ ಹೊಸ ಲೂಟಿಯನ್ನು ಜನ ಸಹಿಸುವುದಿಲ್ಲ. ಅಮೃತಕಾಲದ ಹೆಸರಿನಲ್ಲಿ ಹಗಲು ದರೋಡೆಗೆ ಮುಂದಾಗಿರುವ ಕೇಂದ್ರ ಸರಕಾರಕ್ಕೆ ವಿನಾಶ ಕಾಲ ಹತ್ತಿರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಯುಪಿಐ ಮೇಲೆ ಶುಲ್ಕ: ಜನಸಾಮಾನ್ಯರ ಜೇಬಿನ ಮೇಲೆ ‘ಸರ್ಜಿಕಲ್ ಸ್ಟ್ರೈಕ್'
— Shivaraj S Tangadagi (@sstangadagi) September 16, 2026
2,000 ರು.ಗಿಂತ ಮೇಲ್ಪಟ್ಟ ಯುಪಿಐ ವಹಿವಾಟಿನ ಮೇಲೆ ಶುಲ್ಕದ ಬರೆ ಎಳೆದಿದ್ದು, 'ಮೋದಿ ಟ್ಯಾಕ್ಸ್' ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಜನರ ಜೇಬು ಲೂಟಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.
ನಿರುದ್ಯೋಗ, ಹಣದುಬ್ಬರ, ಆದಾಯ ಕೊರತೆಯಿಂದ ಈಗಾಗಲೇ ಜನರ ಜೇಬು ಖಾಲಿ… pic.twitter.com/mTlWsAHI17






