ಬಿಜೆಪಿ ಪಕ್ಷದ್ದು ಮನೆಯೊಂದು ಆರು ಬಾಗಿಲು : ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯ

ಸಚಿವ ಶಿವರಾಜ್ ಎಸ್.ತಂಗಡಗಿ
ಬೆಂಗಳೂರು: ʼಬಿಜೆಪಿ ಪಕ್ಷದ್ದು, ಮನೆಯೊಂದು ಮೂರು ಬಾಗಿಲಲ್ಲ, ಬದಲಿಗೆ ಆರು ಬಾಗಿಲುʼ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶ್ರೀರಾಮುಲು ಅವರು ನಮ್ಮ ಪಕ್ಷಕ್ಕೆ ಬಂದರೆ, ಅವರನ್ನು ಪಕ್ಷಕ್ಕೆ ಸ್ವಾಗತಿಸುವುದು ಪಕ್ಷದ ಅಧ್ಯಕ್ಷರು ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ, ವೈಯಕ್ತಿಕವಾಗಿ ರಾಮುಲು ಕಾಂಗ್ರೆಸ್ಗೆ ಸೇರ್ಪಡೆಗೊಂಡರೆ ಸ್ವಾಗತʼ ಎಂದರು.
ʼಜನಾರ್ದನ್ ರೆಡ್ಡಿ ಅವರು ಸುಳ್ಳಿನ ಮನೆಯನ್ನು ಕಟ್ಟುತ್ತಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ನಾನು ಹೇಳಿದ್ದೆ. ಇದೀಗ ಶ್ರೀರಾಮುಲು ಅವರು ಅವರ ಸುಳ್ಳಿತನ ಕಂತೆ ಬಗ್ಗೆ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಅವರು ಹಲವು ವರ್ಷಗಳ ಸ್ನೇಹಿತರು. ಇದೀಗ ಅವರವರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿನ ವಾಸ್ತವ ಸತ್ಯ ಎಲ್ಲರಿಗೂ ಇದೀಗ ತಿಳಿಯುತ್ತಿದೆʼ ಎಂದು ಹೇಳಿದರು.
ಜಾತಿಗಣತಿ ವರದಿ, ಅನಗತ್ಯವಾಗಿ ಸುಳ್ಳು ಅಂಕಿ-ಅಂಶವನ್ನು ಹೇಳಲಾಗುತ್ತಿದೆ :
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ವರದಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರಕಾರಕ್ಕೆ ಯಾವುದೇ ಭಯ ಇಲ್ಲ. ಈ ಹಿಂದೆ ವರದಿಯನ್ನು ಸ್ವೀಕಾರ ಮಾಡಿಲ್ಲ ಎಂದು ಹೇಳುತ್ತಿದ್ದರು. ಇದೀಗ ಸರಕಾರ ವರದಿಯನ್ನು ಸ್ವೀಕಾರ ಮಾಡಿದ್ದು, ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ತರಲಾಗುವುದು. ಇಲ್ಲಿ ತನಕ ನಾವು ಯಾರು ವರದಿಯನ್ನು ನೋಡಿಲ್ಲ. ಈ ಬಗ್ಗೆ ಅನಗತ್ಯವಾಗಿ ಸುಳ್ಳು ಅಂಕಿ-ಅಂಶವನ್ನು ಹೇಳಲಾಗುತ್ತಿದೆ ಎಂದರು.







