ಎಂಬಿಬಿಎಸ್ ಪದವೀಧರರನ್ನು ನೇರ ಸಂದರ್ಶನ ಮೂಲಕ ಆಸ್ಪತ್ರೆಗಳಿಗೆ ನೇಮಕ : ಸಚಿವ ಯು.ಟಿ.ಖಾದರ್

ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಎಂಬಿಬಿಎಸ್ ವೈದ್ಯರು, ಆಯಾ ಜಿಲ್ಲಾ ಆರೋಗ್ಯಾಧಿಕಾರಿಗೆ(ಡಿಎಚ್ಓ) ಅರ್ಜಿ ಕೊಟ್ಟರೆ, ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಗುತ್ತಿಗೆ ಆಧಾರದಲ್ಲಿ ಕೆಲಸದ ಆದೇಶ ಪ್ರತಿ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 1,280 ಸರಕಾರಿ ವೈದ್ಯರ ಅವಶ್ಯಕತೆ ಇದ್ದು, 200ವೈದ್ಯರ ನೇರ ನೇಮಕಾತಿಗಾಗಿ ಸರಕಾರದಿಂದ ಅನುಮತಿಯನ್ನು ಪಡೆಯಲಾಗಿದೆ. ನೇರ ಸಂದರ್ಶನ ಮೂಲಕ 700 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಉದ್ದೇಶಿಸಲಾಗಿದೆ. ಎಂಬಿಬಿಎಸ್ ಮಾಡಿದವರಿಗೆ 60 ಸಾವಿರ ರೂ., ಪಿಜಿ ಮಾಡಿದವರೆ 1.10ಲಕ್ಷ ರೂ. ವೇತನ ನೀಡುತ್ತಿದ್ದೇವೆ ಎಂದರು.
ಯಾರೆಲ್ಲಾ ಗುತ್ತಿಗೆ ಆಧಾರದಲ್ಲಿ ಸರಕಾರಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರೋ, ಅವರು ಐದು ವರ್ಷಗಳ ಕಾಲ ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸಿದರೆ, ಅವರನ್ನು ನೇರವಾಗಿ ಸರಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತದೆ. ಹಾಗೆಯೇ ಎಂಬಿಬಿಎಸ್ ಮಾಡಿದವರಿಗೆ ಪಿಜಿ ಮೆಡಿಕಲ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ನಗರದಲ್ಲಿ ವೈದ್ಯರು ಸಿಗುತ್ತಾರೆ. ಆದರೆ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರು ಸಿಗುವುದಿಲ್ಲ. ಹೀಗಾಗಿ ಗುಡ್ಡಗಾಡು, ಕುಗ್ರಾಮಗಳಲ್ಲಿ ಕೆಲಸ ಮಾಡಲು ಇಚ್ಚಿಸಿದರೆ ನಗರದ ಪ್ರದೇಶದ ವೈದ್ಯರಿಗಿಂತ ಹೆಚ್ಚಿನ ವೇತನ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಯು.ಟಿ. ಖಾದರ್ ಹೇಳಿದರು.
ನಿವೃತ್ತಿಯಾದ ನಂತರವೂ ಮಾನಸಿಕ ಹಾಗೂ ದೈಹಿಕವಾಗಿ ಸಧೃಡವಾಗಿದ್ದರೆ, ಗುತ್ತಿಗೆ ಆಧಾರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ವೈದ್ಯರ ಕೊರತೆಯನ್ನು ನೀಗಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಫಾರ್ಮಾಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಶಿಯನ್ಸ್ ಗಳ ಕೊರತೆಯನ್ನು ಬಗೆಹರಿಸುವ ನಿಟ್ಟಿನಲ್ಲಿ 400 ನರ್ಸ್, 400 ಫಾರ್ಮಾಸಿಸ್ಟ್ ಹಾಗೂ 400 ಲ್ಯಾಬ್ ಟೆಕ್ನಿಶಿಯನ್ಸ್ ನೇಮಕಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸಾಂಕ್ರಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ. ಸಾರ್ವಜನಿಕರು ವೈರಸ್ ಸೋಂಕು ಕಾಯಿಲೆಗಳಿಗೆ ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಸಾಂಕ್ರಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ಅಂಗಡಿ, ಮನೆ ಸೇರಿ ಕಟ್ಟಡಗಳ ಮುಂಭಾಗ ನೀರು ಶೇಖರಣೆ ಮಾಡಿದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಶಿವಮೊಗ್ಗ, ಶಿರಸಿ, ಸಾಗರದಲ್ಲಿ ಹೆಚ್ಚಾಗಿ ಕಂಡು ಬರುವ ಕ್ಯಾಸನೂರು ಅರಣ್ಯ ರೋಗಕ್ಕೆ(ಕೆಎಫ್ಡಿ) ಹಿಂದೆ ಇದ್ದ ವ್ಯಾಕ್ಸಿನ್ ಅನ್ನು ನಿಷೇಧಿಸಲಾಗಿದ್ದು, ಹೊಸ ವಾಕ್ಸಿನ್ ಅನ್ನು ಕಂಡುಹಿಡಿದಿಲ್ಲ. ಹೀಗಾಗಿ ತೈಲ(ಆಯಿಲ್) ನೀಡಲಾಗುತ್ತಿದೆ. ಹಾವು ಕಡಿತಕ್ಕೆ ಸಂಬಂಧಿಸಿದಂತೆ ಪ್ರತಿ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ 10 ‘ಆಂಟಿವೆನಂ’ ಔಷಧವನ್ನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಕೆಎಫ್ಡಿ ಹಾಗೂ ಹಾವು ಕಡಿತಕ್ಕೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಪ್ರತಿ ತಾಲೂಕಿನಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ(ಆರ್ಬಿಎಸ್ಕೆ) ಎರಡು ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ತಂಡಗಳು ಎಲ್ಲ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಆರೋಗ್ಯವನ್ನು ಕಾಪಾಡಲು ಇಲಾಖೆಯು ಈ ಕ್ರಮ ವಹಿಸುತ್ತಿದೆ ಎಂದು ಅವರು ಹೇಳಿದರು.
‘ಬಳ್ಳಾರಿ ಬಾಣಂತಿಯರ ಸರಣಿ ಸಾವು ಪ್ರಕರಣ ಸಂಭವಿಸಿದ ನಂತರ ಎಲ್ಲ ಔಷಧಿಗಳನ್ನು ಜಿಲ್ಲಾ ಹಂತದಲ್ಲಿಯೂ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಅತ್ಯಗತ್ಯವಾದ 81 ಔಷಧಿಗಳನ್ನು ಟೆಂಡರ್ ಪ್ರಕ್ರಿಯೆ ಮುಗಿಸಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಉಳಿದ ಔಷಧಿಗಳಿಗೆ ಟೆಂಡರ್ ಮಾಡಲಾಗಿದ್ದು, ಮೂರು ತಿಂಗಳ ಒಳಗೆ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುವುದು. ಮುಂದಿನ ವರ್ಷಕ್ಕೆ ಬೇಕಾಗುವ ಔಷಧಿಗಳ ಸರಬರಾಜು ಪ್ರಕ್ರಿಯೆಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
‘ಎಂಬಿಬಿಎಸ್ ಮಾಡಿದ ಸರಕಾರಿ ವೈದ್ಯರು ಪಿಜಿ ಮೆಡಿಕಲ್ ಕೋರ್ಸ್ ಮಾಡಲು ಅವಕಾಶವಿದ್ದು, ಕೋರ್ಸ್ ಮುಗಿದ ಮೇಲೆ ನಿಗದಿತ ಅವಧಿಯ ವರೆಗೆ ಕಡ್ಡಾಯವಾಗಿ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು. ಒಂದು ವೇಳೆ ಸೇವೆ ಸಲ್ಲಿಸದಿದ್ದರೆ, ನಿಯಮಗಳ ಅನ್ವಯ ದಂಡ ವಿಧಿಸಲಾಗುತ್ತದೆ. ಇನ್ನು ಮುಂದೆ ಸೇವೆ ಸಲ್ಲಿಸದಿದ್ದರೆ ಪ್ರಮಾಣ ಪತ್ರಗಳನ್ನು ತಡೆಹಿಡಿಯಲು ಕ್ರಮ ವಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಕುಲಪತಿಗಳೊಂದಿಗೆ ಚರ್ಚೆ ಮಾಡಲಾಗುತ್ತದೆ’
-ಯು.ಟಿ. ಖಾದರ್, ಆರೋಗ್ಯ ಸಚಿವ






