ಅವಧಿ ಮೀರಿದ ಔಷಧ ವಿತರಣೆಯಾದರೆ ಕಠಿಣ ಕ್ರಮ : ಸಚಿವ ಯು.ಟಿ.ಖಾದರ್

ಬೆಂಗಳೂರು : ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಔಷಧವನ್ನು ರೋಗಿಗಳಿಗೆ ಕೊಟ್ಟರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ.ಕೆ.ಗೋವಿಂದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚಿಗೆ 5 ಕೋಟಿ ರೂ. ವೆಚ್ಚದ ನಕಲಿ ಔಷಧ ಜಾಲವನ್ನು ಪತ್ತೆ ಹಚ್ಚಲಾಗಿದೆ. ಎಲ್ಲೆಲ್ಲಿ ನಕಲಿ ಔಷಧ ಪೂರೈಕೆಯಾಗುತ್ತಿತ್ತು ಎಂಬುದರ ಕುರಿತು ಸಹ ತನಿಖೆ ಮುಂದುವರೆದಿದೆ. ಗೃಹ ಇಲಾಖೆ ಮತ್ತು ಆರೋಗ್ಯ ಇಲಾಖೆ ಸೇರಿ ನಕಲಿ ಔಷಧ ಪೂರೈಸಿದ್ದನ್ನು ಎಸ್ಐಟಿಯಿಂದ ತನಿಖೆಗೆ ಒಳಪಡಿಸಲಾಗಿದೆ ಎಂದರು.
ಜನೌಷಧಿ ಹಾಗೂ ಔಷಧ ಮಾರಾಟಗಾರರು ಮತ್ತು ಆಸ್ಪತ್ರೆಗಳಲ್ಲಿ ಔಷಧ ಪರಿಶೀಲಿಸಿ ರೋಗಿಗಳಿಗೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನೂ ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ರಾಜ್ಯದಲ್ಲಿ ಶೇ.80ರಷ್ಟು ಜನರಿಗೆ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಿಗದ ಮೂಲಭೂತ ಸೌಕರ್ಯ ಸಹ ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ. ಹೀಗಾಗಿ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
‘33,745 ಹುದ್ದೆಗಳ ಭರ್ತಿಗೆ ಕ್ರಮ’: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 33,745 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅನುಕಂಪದ ಆಧಾರದಲ್ಲಿ 513, ಕೆಪಿಎಸ್ಸಿ ಮುಖಾಂತರ 530, ನೇರ ನೇಮಕಾತಿ ಮೂಲಕ 558, ಕಲ್ಯಾಣ ಕರ್ನಾಟಕ ವೃಂದದಲ್ಲಿ 320 ಹುದ್ದೆಗಳನ್ನು ಮೂರು ವರ್ಷದಲ್ಲಿ ಭರ್ತಿ ಮಾಡಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವ 120 ತಜ್ಞ ವೈದ್ಯರ ಮತ್ತು 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ 877 ವೈದ್ಯಕೀಯ ಅರೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಯು.ಟಿ. ಖಾದರ್ ಹೇಳಿದರು.






